ಕರ್ನಾಟಕ

karnataka

ETV Bharat / bharat

ಇಡೀ ದೇಶದ ಚಿತ್ತ ಯುಪಿ ಫಲಿತಾಂಶದತ್ತ!: ಜಿದ್ದಾಜಿದ್ದಿನ ಮತಸಮರದಲ್ಲಿ ಗೆದ್ದು ಬೀಗುವವರಾರು?

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ನಡೆದ ಮತದಾನದ ಫಲಿತಾಂಶ ಇಂದು ಬಹಿರಂಗವಾಗಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿರುವ ಈ ರಾಜ್ಯದಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂಬ ಕುತೂಹಲ ದೇಶಾದ್ಯಂತ ಮನೆ ಮಾಡಿದೆ.

By

Published : Mar 9, 2022, 3:16 PM IST

Updated : Mar 10, 2022, 6:51 AM IST

UP Elections 2022
UP Elections 2022

ಲಖನೌ(ಉತ್ತರ ಪ್ರದೇಶ): ಮತ್ತೊಂದು ಅವಧಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿರುವ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದಲೂ ಮತದಾರ ಪ್ರಭುಗಳನ್ನು ಗೆಲ್ಲಲು ಭಾರಿ ಕಸರತ್ತು ನಡೆಸಿತ್ತು. ರಾಜ್ಯದ ಉದ್ದಗಲ ಸಂಚರಿಸಿದ್ದ ಪಕ್ಷದ ರಾಜ್ಯ ನಾಯಕರು ಬಹಿರಂಗ ಪ್ರಚಾರ, ವಿಡಿಯೋ ಕಾನ್ಫರೆನ್ಸ್ ಹಾಗು ರೋಡ್​ ಶೋ ಮೂಲಕ ಹಾಗು ಅಂತಿಮವಾಗಿ ಮನೆಮನೆಗೂ ತೆರಳಿ ಮತಯಾಚನೆ ಮಾಡಿದ್ದರು.

ಈ ಚುನಾವಣೆಗೋಸ್ಕರ ಯೋಗಿ ಆದಿತ್ಯನಾಥ್​​ ಒಟ್ಟು 200ಕ್ಕೂ ಅಧಿಕ ರ‍್ಯಾಲಿಗಳಲ್ಲಿ ಭಾಗಿಯಾಗಿದ್ದರು. ಡಿಸಿಎಂ ಕೇಶವ್ ಪ್ರಸಾದ್​ ಮೌರ್ಯ ಅವರ ಕೂಡಾ 100ಕ್ಕೂ ಹೆಚ್ಚು ಸಾರ್ವಜನಿಕಸ ಸಭೆ ನಡೆಸಿದ್ದರು.

ಇದನ್ನೂ ಓದಿ:ಯುಪಿಯಲ್ಲಿ 500ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದ ಪ್ರಿಯಾಂಕಾ ಗಾಂಧಿ.. ವರ್ಕೌಟ್​ ಆಗುತ್ತಾ ಕಾಂಗ್ರೆಸ್ ತಂತ್ರ? ​

ಮತ್ತೋರ್ವ ಉಪಮುಖ್ಯಮಂತ್ರಿ ಡಾ.ದಿನೇಶ್ ಶರ್ಮಾ 75 ಸಭೆಗಳಲ್ಲಿ ಭಾಗಿಯಾಗಿದ್ದರು. ಈ ಮುಖೇನ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು. ಕೇಂದ್ರ ಹಿರಿಯ ನಾಯಕ ಹಾಗು ಪಕ್ಷದ ಪ್ರಮುಖ ಸ್ಟಾರ್ ಪ್ರಚಾರಕರಾದ ಗೃಹ ಸಚಿವ ಅಮಿತ್ ಶಾ ಸುಮಾರು 61 ರ‍್ಯಾಲಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ 31 ರ‍್ಯಾಲಿ ಮತ್ತು ರೋಡ್​ ಶೋ ಮಾಡಿದ್ದರು. ಇಷ್ಟೇ ಅಲ್ಲ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಸೇರಿದಂತೆ ಅನೇಕರು ಬಹಿರಂಗ ಸಭೆಗಳಲ್ಲಿ ಮತಪ್ರಭುಗಳ ಮನವೊಲಿಕೆ ಕಸರತ್ತು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಮುಖವಾಗಿ ಪ್ರಧಾನಿ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿ, ಯೋಗಿ ಆದಿತ್ಯನಾಥ್ ಕಣಕ್ಕಿಳಿದಿರುವ ಗೋರಖ್​ಪುರ್​​ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇದರ ಜೊತೆಗೆ ಮುಜಾಫರ್​ನಗರ, ಝಾನ್ಸಿ, ಅಲಿಘಡ, ಆಗ್ರಾ, ಇಟಾ ಕ್ಷೇತ್ರಗಳು ಕೂಡಾ ಪಕ್ಷಗಳ ಗೆಲುವಿನಲ್ಲಿ ನಿರ್ಣಾಯಕವಾಗಲಿವೆ.

ಅಭಿವೃದ್ಧಿ ಕೆಲಸಗಳ ಮೂಲಕ ಮತಯಾಚನೆ: ಪೂರ್ವಾಂಚಲ್ ಎಕ್ಸ್​ಪ್ರೆಸ್​ವೇ ಉದ್ಘಾಟನೆ, ಜೇವರ್ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ, ಗೋರಖ್​ಪುರದಲ್ಲಿ ರಸಗೊಬ್ಬರ ಕಾರ್ಖಾನೆ ಉದ್ಘಾಟನೆ, ವಿಶ್ವನಾಥ್ ಧಾಮ್ ಕಾರಿಡಾರ್​​, ಗಂಗಾ ಎಕ್ಸ್​ಪ್ರೆಸ್​ವೇಗೆ ಶಂಕುಸ್ಥಾಪನೆ ಸೇರಿದಂತೆ ಅನೇಕ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಿರುವ ಮೋದಿ ಅಲ್ಲಿನ ಜನರ ಮನ ಸೆಳೆಯುವ ಕಸರತ್ತು ಮಾಡಿದ್ದಾರೆ. ಇನ್ನು ಈ ಸಲ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಪೈಪೋಟಿ ನೀಡಲು ಸಮಾಜವಾದಿ ಹಾಗೂ ಕಾಂಗ್ರೆಸ್ ಪಕ್ಷ ತೊಡೆ ತಟ್ಟಿದ್ದು, ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆಂಬ ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.​

ಹಿನ್ನೋಟ: 2017ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಪಡೆದಿತ್ತು.

Last Updated : Mar 10, 2022, 6:51 AM IST

ABOUT THE AUTHOR

...view details