ಕರ್ನಾಟಕ

karnataka

ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ: ಅಂಚೆ ಕಚೇರಿಗೆ ಆಗಮಿಸಿ ಖಾತೆ ತೆರೆದ ಕೇಂದ್ರ ಸಚಿವೆ ಇರಾನಿ

By

Published : Apr 27, 2023, 6:16 PM IST

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಂದು ಸಾಮಾನ್ಯರಂತೆ ಅಂಚೆ ಕಚೇರಿಯಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದ ಖಾತೆಯನ್ನು ತೆರೆದರು.

union-minister-smriti-irani-opens-mahila-samman-savings-certificate-account
ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ: ಸಾಮಾನ್ಯರಂತೆ ಅಂಚೆ ಕಚೇರಿಗೆ ಆಗಮಿಸಿ ಖಾತೆ ತೆರೆದ ಕೇಂದ್ರ ಸಚಿವೆ

ನವದೆಹಲಿ:ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ರಾಷ್ಟ್ರ ರಾಜಧಾನಿಯ ಅಂಚೆ ಕಚೇರಿಯಲ್ಲಿ ಮಹಿಳಾ ಉಳಿತಾಯ ಪ್ರಮಾಣ ಪತ್ರವನ್ನು (MSSC) ತೆರೆದರು. ಮಹಿಳಾ ಸಮ್ಮಾನ್​ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್​​ ಅವರು 2023-24ರ ಕೇಂದ್ರ ಬಜೆಟ್​​ನಲ್ಲಿ ಘೋಷಿಸಿದ್ದರು. ಈ ಯೋಜನೆಯು ಅರ್ಥಿಕವಾಗಿ ಮಹಿಳೆಯರ ಸಬಲೀಕರಣದತ್ತ ಮಹತ್ವದ ಹೆಜ್ಜೆಯಾಗಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬುಧವಾರ ಅಂಚೆ ಕಚೇರಿಯಲ್ಲಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಖಾತೆ ತೆರೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಅವರ ಮಹಿಳಾ ಸಮ್ಮಾನ್​​ ಉಳಿತಾಯ ಪ್ರಮಾಣ ಪತ್ರದ ಖಾತೆ ತೆರೆದು ಕಂಪ್ಯೂಟರ್​​​​ ರಚಿಸಿದ ಪಾಸ್​ಬುಕ್​ ಅನ್ನು ಅಂಚೆ ಕಚೇರಿಯ ಕೌಂಟರ್​​ನಲ್ಲಿಯೇ ಅವರಿಗೆ ಹಸ್ತಾಂತರಿಸಲಾಯಿತು ಎಂದು ಸರ್ಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ. "ಸಚಿವರ ಉದಾತ್ತ ನಡೆ ಖಂಡಿತವಾಗಿಯೂ ಲಕ್ಷಾಂತರ ಮಹಿಳೆಯರು ಹತ್ತಿರದ ಅಂಚೆ ಕಚೇರಿಯಲ್ಲಿ ಎಂಎಸ್​ಎಸ್​​ಸಿ (MSSC) ಖಾತೆ ಮತ್ತು ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಲು ಪ್ರೇರೇಪಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯಡಿ ಮಹಿಳೆಯರು ಖಾತೆಯನ್ನು ತೆರೆಯಬಹುದಾಗಿದೆ ಮತ್ತು ಅಪ್ರಾಪ್ತ ಬಾಲಕಿಯರ ಪರವಾಗಿ, ಆಕೆಯ ಪೋಷಕರು ಅರ್ಜಿ ಸಲ್ಲಿಸಬಹುದಾಗಿದೆ. ಇದು ಎರಡು ವರ್ಷದ ಯೋಜನೆಯಾಗಿದ್ದು, 2023ರ ಏಪ್ರಿಲ್ 1 ರಿಂದ ಪ್ರಾರಂಭವಾಗಿ ಮಾರ್ಚ್ 2025 ರವರೆಗೆ ಮಾನ್ಯವಾಗಿರುತ್ತದೆ. ದೇಶಾದ್ಯಂತ 1.59 ಅಂಚೆ ಕಚೇರಿಯಲ್ಲಿ ಈ ಯೋಜನೆಯನ್ನು ಲಭ್ಯಗೊಳಿಸಲಾಗಿದೆ.

ಈ ಯೋಜನೆಯಡಿ ಖಾತೆಗೆ ಗರಿಷ್ಠ ಎರಡು ಲಕ್ಷ ರೂ. ಹಣವನ್ನು ಠೇವಣಿಯನ್ನು ಇಡಬಹುದಾಗಿದೆ. ಎರಡು ವರ್ಷಗಳ ಅವಧಿಗೆ ಎರಡು ಲಕ್ಷ ರೂಪಾಯಿಗಳವರೆಗಿನ ಹೂಡಿಕೆಗೆ ವಾರ್ಷಿಕ ಶೇ 7.5 ಬಡ್ಡಿ ಸಿಗಲಿದೆ. ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಖಾತೆಯಲ್ಲಿ ಠೇವಣಿ ಇಟ್ಟ ಮೊತ್ತವನ್ನು ಭಾಗಶಃ ಹಿಂಪಡೆಯುವ ಸೌಲಭ್ಯವೂ ಇದೆ.

ಈ ಯೋಜನೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ರಿಯಾಯಿತಿ ನೀಡಲಾಗುವುದಿಲ್ಲ. ಇದರರ್ಥ ನಿಮ್ಮ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಗೆ ನೀವು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ಈ ಯೋಜನೆಯಲ್ಲಿ ಕೇವಲ 2 ಲಕ್ಷದವರೆಗೆ ಹೂಡಿಕೆ ಮಾಡಲು ಮಿತಿ ಇರುವುದರಿಂದ ಮತ್ತು ಬಡ್ಡಿದರವು ಶೇ 7.5 ರಷ್ಟು ಮಾತ್ರ ಲಭ್ಯವಿರುತ್ತದೆ.

ಎರಡು ದಿನಗಳ ಹಿಂದೆ ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ್​ ಪರ ಚುನಾವಣಾ ಪ್ರಚಾರ ನಡೆಸಿದ್ದ ಕೇಂದ್ರ ಸಚಿವರು, ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದರು. ನಾನು ಕೇಂದ್ರ ಸಚಿವೆ, ಬಿಜೆಪಿ ಕಾರ್ಯಕರ್ತೆ ಅನ್ನೋದಕ್ಕಿಂತ ಸಾಮಾನ್ಯ ಮಹಿಳೆಯಾಗಿ ಮಾತನಾಡುತ್ತಿದ್ದೇನೆ. ದೇಶದ ಹಿತ ಕಾಪಾಡುವುದರಲ್ಲಿ ಉಳಿದ ರಾಜಕೀಯ ಪಕ್ಷಗಳಿಂದ ಬಾರತೀಯ ಜನತಾ ಪಕ್ಷ ಭಿನ್ನವಾಗಿದೆ. ಕರ್ನಾಟಕದ ಜನ ಸಮರ್ಥ ನಾಯಕನನ್ನು ಆರಿಸಿ ಕಳಿಸಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು. ಮಹಿಳೆಯರ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಯೇ ಭರವಸೆ ಎಂದು ಪಕ್ಷದ ಸಾಧನೆಯನ್ನು ಕೊಂಡಾಡಿದ್ದರು.

ಇದನ್ನೂ ಓದಿ:ಶಂಕಿತ ಉಗ್ರರಿಂದ ಪೆಟ್ರೋಲ್ ಪಂಪ್ ಉದ್ಯೋಗಿ ಅಪಹರಣ: ಜಿಪಂ ಸದಸ್ಯನ ಕಾರು ಚಾಲಕನಿಗೆ ಗುಂಡಿಕ್ಕಿ ಹತ್ಯೆಗೆ ಯತ್ನ

ABOUT THE AUTHOR

...view details