ಭಾಗಲ್ಪುರ (ಬಿಹಾರ): ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರ ಕಿರಿಯ ಸಹೋದರ ನಿರ್ಮಲ್ ಚೌಬೆ ಶುಕ್ರವಾರ ಬಿಹಾರದ ಭಾಗಲ್ಪುರದಲ್ಲಿ ನಿಧನರಾಗಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಇಲ್ಲಿನ ಮಾಯಾಗಂಜ್ನಲ್ಲಿರುವ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತುರ್ತು ಚಿಕಿತ್ಸಾ ಘಟಕ (ಐಸಿಯು)ದಲ್ಲಿ ವೈದ್ಯರು ಇರದೇ ಇರುವ ಕಾರಣ ಸೂಕ್ತ ಚಿಕಿತ್ಸೆ ದೊರೆಯದೆ ನಿರ್ಮಲ್ ಚೌಬೆ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಇಬ್ಬರು ವೈದ್ಯರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ನಿರ್ಮಲ್ ಚೌಬೆ ಆರೋಗ್ಯವು ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ರಕ್ತದೊತ್ತಡ ಹೆಚ್ಚಾಗಿ, ಉಸಿರಾಡಲು ತೊಂದರೆಯಾಗಿತ್ತು. ಈ ಸಮಯದಲ್ಲಿ ನಿರ್ಮಲ್ ಚೌಬೆ ರಕ್ತದ ವಾಂತಿ ಮಾಡಲು ಶುರು ಮಾಡಿದರು. ಇದರಿಂದ ಕ್ಷಣವೇ ಅವರನ್ನು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಗೆ ಸಾಗಿಸುವಾಗಲೇ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ನೇರವಾಗಿ ಐಸಿಯುಗೆ ದಾಖಲಿಸಲಾಯಿತು. ಆದರೆ, ಐಸಿಯು ವಾರ್ಡ್ನಲ್ಲಿ ಯಾವುದೇ ಹಿರಿಯ ವೈದ್ಯರು ಇರಲಿಲ್ಲ. ಆಗ ನರ್ಸ್ಗಳೇ ಅವರಿಗೆ ಚಿಕಿತ್ಸೆ ನೀಡಿದರು ಎಂದು ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ.
ಎರಡು ಗಂಟೆಗಳ ಕಾಲ ನರಳಾಟ ಆರೋಪ: ಹೃದಯಾಘಾತಕ್ಕೆ ಒಳಗಾಗಿ ರಕ್ತದ ವಾಂತಿ ಮಾಡುತ್ತಿದ್ದ ನಿರ್ಮಲ್ ಚೌಬೆ ಅವರನ್ನು ದೊಡ್ಡ ಆಸ್ಪತ್ರೆಯಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಪರಿಸ್ಥಿತಿಯಲ್ಲಿ ಐಸಿಯು ವಾರ್ಡ್ಗೂ ಅವರನ್ನು ದಾಖಲು ಮಾಡಿದ್ದರೂ, ಯಾವುದೇ ವೈದ್ಯರು ಬರಲಿಲ್ಲ. ಕೇಂದ್ರ ಸಚಿವರು ಸಹೋದರ ಎಂದು ಹೇಳಿದರೂ ಆಸ್ಪತ್ರೆಯ ಸಿಬ್ಬಂದಿ ಏನೂ ಮಾಡಲಿಲ್ಲ. ಇದರಿಂದ ಎರಡು ಗಂಟೆಗಳ ಕಾಲ ಅವರು ನರಳಾಡುತ್ತಿದ್ದರು. ಕೊನೆಗೆ ಸಂಜೆ 6.30ರ ಸುಮಾರಿಗೆ ತಮ್ಮ ಕೊನೆಯುಸಿರೆಳೆದರು ಎಂದು ಚೌಬೆ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ, ನಿರ್ಮಲ್ ಚೌಬೆ ನಿಧನ ನಂತರ ಆಸ್ಪತ್ರೆಯ ಆಡಳಿತ ಮಂಡಳಿದ ವಿರುದ್ಧ ಆಸ್ಪತ್ರೆಯಲ್ಲಿ ಸಂಬಂಧಿಕರು ಗಲಾಟೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.