ಪ್ರಯಾಗರಾಜ್ (ಉತ್ತರ ಪ್ರದೇಶ):ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಮಕ್ಕಳನ್ನು ಪೊಲೀಸರು ಕರೆದೊಯ್ದಿದ್ದಾರೆ ಎಂದು ಆರೋಪಿಸಿ ಅವರ ಪತ್ನಿ ಶೈಸ್ತಾ ಪರ್ವೀನ್ ಅಲಹಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಂದಿನಿಂದ ತಮ್ಮ ಮಕ್ಕಳನ್ನು ಈವರೆಗೂ ಭೇಟಿ ಮಾಡಿಸಿಲ್ಲ ಎಂದು ದೂರಿದ್ದಾರೆ. ಶೈಸ್ತಾ ಪರ್ವೀನ್ ಅವರು ಆರೋಪಿಸಿ ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ಇನ್ನು, ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಪ್ರಯಾಗ್ರಾಜ್ನ ಧೂಮಂಗಂಜ್ನ ನೆಹರು ಪಾರ್ಕ್ ಪ್ರದೇಶದ ಬಳಿ ನಡೆದ ಎನ್ಕೌಂಟರ್ನಲ್ಲಿ ಆರೋಪಿಯೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಎಸ್ಪಿ ಶಾಸಕ ರಾಜುಲ್ ಪಾಲ್ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಈತನನ್ನು ಹತ್ಯೆ ಮಾಡಲಾಗಿದ್ದು, ಹತ್ಯೆಗೆ ಬಳಸಿದ್ದ ಕಾರನ್ನು ಅರ್ಬಾಜ್ ಎಂಬಾತ ಓಡಿಸುತ್ತಿದ್ದ. ಎನ್ಕೌಂಟರ್ ವೇಳೆ ಅರ್ಬಾಜ್ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಎಡಿಜಿ ಪ್ರಶಾಂತ್ ಕುಮಾರ್ ಹೇಳಿದ್ದಿಷ್ಟು:ಪ್ರಯಾಗ್ರಾಜ್ನ ಧೂಮಂಗಂಜ್ನ ನೆಹರೂ ಪಾರ್ಕ್ ಬಳಿ ನಡೆದ ಎನ್ಕೌಂಟರ್ನಲ್ಲಿ ಆರೋಪಿ ಅರ್ಬಾಜ್ ಮೇಲೆ ಗುಂಡು ಹಾರಿಸಲಾಯಿತು. ಉಮೇಶ್ ಪಾಲ್ ಹತ್ಯೆಗೆ ಬಳಸಿದ ಕಾರನ್ನು ಈತನೇ ಓಡಿಸುತ್ತಿದ್ದ. ಈ ವೇಳೆ ಗುಂಡು ಹಾರಿಸಲಾಗಿದೆ" ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದರು. ಎನ್ಕೌಂಟರ್ನಲ್ಲಿ ಗಾಯಗೊಂಡಿದ್ದ ಅರ್ಬಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನ ಹೊಂದಿದ್ದಾನೆ. ಸರ್ಕಾರ ಮತ್ತು ಪೊಲೀಸರು ಎಲ್ಲ ದುಷ್ಕರ್ಮಿಗಳು, ದರೋಡೆಕೋರರು ಮತ್ತು ಮಾಫಿಯಾ ವಿರುದ್ಧ ತೊಡೆತಟ್ಟಿದೆ. ಇವರಿಗೆ ಆಶ್ರಯ ನೀಡುವವರ ವಿರುದ್ಧವೂ ಶಿಸ್ತುಕ್ರಮವಾಗಲಿದೆ ಎಂದು ಹೇಳಿದರು.