ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿ ಭೇಟಿಯಾದ ಉದಯನಿಧಿ ಸ್ಟಾಲಿನ್ - ತಮಿಳುನಾಡಿನ ಪ್ರವಾಹ

Udhayanidhi Stalin calls on PM Modi: ಚೆನ್ನೈನಲ್ಲಿ ಜನವರಿ 19ರಿಂದ 'ಖೇಲೋ ಇಂಡಿಯಾ ಯೂತ್ ಗೇಮ್ಸ್' ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರನ್ನು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಭೇಟಿ ಮಾಡಿದ್ದಾರೆ.

Udhayanidhi Stalin calls on PM Modi; seeks funds for flood relief in Tamil Nadu
ಪ್ರಧಾನಿ ಮೋದಿ ಭೇಟಿಯಾದ ಉದಯನಿಧಿ ಸ್ಟಾಲಿನ್

By ANI

Published : Jan 4, 2024, 10:28 PM IST

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್​ ಪುತ್ರ, ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಗುರುವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ತಮಿಳುನಾಡಿನ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ಕೇಂದ್ರದಿಂದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಪ್ರಧಾನಿಗೆ ಉದಯನಿಧಿ ಮನವಿ ಮಾಡಿದ್ದಾರೆ.

ಡಿಎಂಕೆ ನಾಯಕರಾದ ಉದಯನಿಧಿ ಸನಾತನ ಧರ್ಮದ ವಿರುದ್ಧ ನೀಡಿದ್ದ ಹೇಳಿಕೆಯು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಅಲ್ಲದೇ, ಬಿಜೆಪಿ ಸ್ಟಾಲಿನ್​ ಪುತ್ರನ ಮೇಲೆ ಮುಗಿಬಿದ್ದಿತ್ತು. ಇದಾದ ನಂತರ ಮೊದಲ ಬಾರಿಗೆ ಮೋದಿ ಅವರನ್ನು ಉದಯನಿಧಿ ಭೇಟಿಯಾಗಿದ್ದಾರೆ. ಅಲ್ಲದೇ, ಇತ್ತೀಚಿನ ಎರಡು ದಿನಗಳ ದಕ್ಷಿಣ ಭಾರತದ ಪ್ರವಾಸದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ಸಿಎಂ, ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರೊಂದಿಗೆ ಮೋದಿ ವೇದಿಕೆ ಹಂಚಿಕೊಂಡಿದ್ದರು. ಆಗಲೂ ಸಿಎಂ ಸ್ಟಾಲಿನ್ ತಮಿಳುನಾಡು ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಹೆಚ್ಚಿನ ಅನುದಾನ ಬಿಡುವಂತೆಗೆ ಪ್ರಧಾನಿಗೆ ಒತ್ತಾಯಿಸಿದ್ದರು.

ಖೇಲೋ ಇಂಡಿಯಾಗೆ ಪ್ರಧಾನಿ ಮೋದಿಗೆ ಆಹ್ವಾನ:ಚೆನ್ನೈನಲ್ಲಿ ಜನವರಿ 19ರಿಂದ 'ಖೇಲೋ ಇಂಡಿಯಾ ಯೂತ್ ಗೇಮ್ಸ್' ಆಯೋಜಿಸಲಾಗಿದೆ. ಇದರ ಉದ್ಘಾಟನಾ ಸಮಾರಂಭಕ್ಕೂ ಪ್ರಧಾನಿ ಮೋದಿ ಅವರನ್ನು ತಮಿಳುನಾಡು ಸಚಿವ ಉದಯನಿಧಿ ಆಹ್ವಾನಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಉದಯನಿಧಿ ಮಾಹಿತಿ ಹಂಚಿಕೊಂಡಿದ್ದಾರೆ.

''2024ರ ಜನವರಿ 19ರಂದು ಚೆನ್ನೈನಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಆಹ್ವಾನಿಸಿದ್ದಕ್ಕೆ ಸಂತೋಷವಾಗಿದೆ'' ಎಂದು ಉದಯನಿಧಿ ಸ್ಟಾಲಿನ್ ತಮ್ಮ ಅಧಿಕೃತ 'ಎಕ್ಸ್‌' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:ರಮಣೀಯ ಸೌಂದರ್ಯದ ಜೊತೆಗೆ ಲಕ್ಷದ್ವೀಪದ ಪ್ರಶಾಂತತೆ ಮೋಡಿಮಾಡುವಂತಿದೆ: ಪ್ರಧಾನಿ ಮೋದಿ

ಅಲ್ಲದೇ, ''ನಮ್ಮ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಕೋರಿಕೆಯಂತೆ ತಮಿಳುನಾಡಿನ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಮಗ್ರ ಪರಿಹಾರ, ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರದ ಪರವಾಗಿ ನಾನು ಪ್ರಧಾನಿ ಅವರಿಗೆ ಮನವಿ ಮಾಡಿದ್ದೇನೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ'' ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ತಮಿಳುನಾಡು ಪ್ರವಾಸ ಕೈಗೊಂಡಿದ್ದ ಮೋದಿ, ತಿರುಚಿರಾಪಳ್ಳಿ ಜಿಲ್ಲೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದ್ದರು. ಅಲ್ಲದೇ, 20,140 ಕೋಟಿ ರೂ. ವೆಚ್ಚದ ವಾಯು, ಬಂದರು, ರೈಲ್ವೆ, ಹೆದ್ದಾರಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಪರಮಾಣು ಶಕ್ತಿ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ 20 ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡಿದ್ದರು.

ಇದನ್ನೂ ಓದಿ:ತಮಿಳುನಾಡು: ₹ 20,140 ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ABOUT THE AUTHOR

...view details