ಕರ್ನಾಟಕ

karnataka

Heart attack : ಹೃದಯಾಘಾತದಿಂದ ಇಬ್ಬರು ಯೋಧರು ಸಾವು

By

Published : Jun 13, 2023, 7:46 PM IST

ಜಾರ್ಖಂಡ್​ನಲ್ಲಿ 24 ಗಂಟೆಯ ಅವಧಿಯಲ್ಲಿ ಯೋಧರಿಬ್ಬರು ಸಾವನ್ನಪ್ಪಿದ್ದಾರೆ.

two-soldiers-died-of-heart-attack-in-jharkhand
ಜಾರ್ಖಂಡ್​​ : ಹೃದಯಾಘಾತದಿಂದ ಇಬ್ಬರು ಯೋಧರು ಸಾವು

ರಾಂಚಿ (ಜಾರ್ಖಂಡ್)​​ : ಹೃದಯಾಘಾತ ಸಮಸ್ಯೆ ಈಗ ಚಿಕ್ಕಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ದಿಢೀರ್​ ಬಂದರೆಗುತ್ತಿದೆ. ಈ ತೊಂದರೆ ಕಾಣಿಸಿಕೊಂಡರೆ ಕೆಲವೇ ಕ್ಷಣಗಳಲ್ಲಿ ಉಸಿರು ನಿಲ್ಲುತ್ತೆ, ಇನ್ನೂ ಕೆಲವರ ಪ್ರಾಣವೇ ಹಾರಿಹೋಗುತ್ತೆ. ಇತ್ತೀಚೆಗೆ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇಂತಹದ್ದೇ ಪ್ರಕರಣ ಜಾರ್ಖಂಡ್​ನಲ್ಲಿ ನಡೆದಿದ್ದು, ಇಬ್ಬರು ಯೋಧರು ಮೃತಪಟ್ಟಿದ್ದಾರೆ.

ಜಾರ್ಖಂಡ್​ನಲ್ಲಿ ಇಬ್ಬರು ಯೋಧರು ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಜಾರ್ಖಂಡ್​ನ ಪಲಾಮು ಜಿಲ್ಲೆಯಲ್ಲಿ ಇಬ್ಬರು ಯೋಧರು ಹಠಾತ್​ ಸಾವಿಗೀಡಾಗಿದ್ದಾರೆ. ಒಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರೆ, ಇನ್ನೊಬ್ಬರು ಕುಡಿತಕ್ಕೆ ದಾಸರಾಗಿದ್ದರು ಎಂದು ಹೇಳಲಾಗಿದೆ. ಇಬ್ಬರಿಗೂ ನಿನ್ನೆ ರಾತ್ರಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಇಬ್ಬರೂ ಯೋಧರು ಬಿಹಾರ ಮೂಲದವರಾಗಿದ್ದಾರೆ. ಮೃತರು ಜಾರ್ಖಂಡ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತ ಯೋಧರನ್ನು ಪ್ರಕಾಶ್ ಕಿರಣ್, ಜನಾರ್ದನ್ ಸಿಂಗ್ ಎಂದು ಗುರುತಿಸಲಾಗಿದೆ.

ಯೋಧ ಜನಾರ್ದನ್ ಸಿಂಗ್ ಅವರು ಕುಡಿತದ ಚಟ ಹೊಂದಿದ್ದರು. ಸೋಮವಾರ ರಾತ್ರಿ ಅವರ ತೀವ್ರ ಆರೋಗ್ಯ ಹದಗೆಟ್ಟಿದ್ದು, ಸಹ ಸೈನಿಕರು ಮತ್ತು ಕುಟುಂಬ ಸದಸ್ಯರು ಅವರನ್ನು ಚಿಕಿತ್ಸೆಗಾಗಿ ಎಂಎಂಸಿಎಚ್‌ಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದಾದ ಮರುದಿನ ಮಂಗಳವಾರ ಬೆಳಗ್ಗೆ ಬ್ಯಾರಕ್‌ನಲ್ಲಿ ಕೆಲಸದಲ್ಲಿದ್ದಾಗ ಪ್ರಕಾಶ್ ಕಿರಣ್ ಅವರು ಸಹ ಜವಾನರೊಂದಿಗೆ ಮಾತನಾಡುತ್ತಾ ನೀರು ಕುಡಿಯುತ್ತಿದ್ದರು. ನೀರು ಕುಡಿದ ಸ್ವಲ್ಪ ಸಮಯದಲ್ಲಿ ಉಸಿರಾಟ ಸಮಸ್ಯೆ ಎದುರಾಗಿದೆ. ಈ ವೇಳೆ ವೇಗವಾಗಿ ಏದುಸಿರು ಬಿಡುತ್ತಲೇ ಸ್ವಲ್ಪ ಸಮಯದ ನಂತರ ಜವಾನ ಸಾವನ್ನಪ್ಪಿದ್ದಾರೆ. 24 ಗಂಟೆ ಅವಧಿಯೊಳಗೆ ಇಬ್ಬರು ಯೋಧರು ಹಠಾತ್​ ನಿಧನ ಹೊಂದಿರುವುದು ಕುಟುಂಬಸ್ಥರಿಗೆ ಆಘಾತ ತಂದಿದೆ.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪಲಾಮು ಎಸ್​ಪಿ ಚಂದನ್ ಕುಮಾರ್ ಸಿನ್ಹಾ ಅವರು, ಒಬ್ಬ ಯೋಧ ಅನಾರೋಗ್ಯದಿಂದ ಸಾವನ್ನಪ್ಪಿದ್ದರೆ, ಮತ್ತೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎರಡೂ ಘಟನೆಗಳ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಮೃತ ಯೋಧರಿಬ್ಬರ ಮರಣೋತ್ತರ ಪರೀಕ್ಷೆಯನ್ನು ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಸಲಾಗಿದೆ. ನಂತರ ಚೌಕಾ ಪೊಲೀಸ್ ಲೈನ್‌ನಲ್ಲಿ ಇಬ್ಬರು ಯೋಧರಿಗೆ ಗೌರವ ವಂದನೆ ಸಲ್ಲಿಸಲಾಗುವುದು. ನಂತರ ಪಾರ್ಥಿವ ಶರೀರವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ :ಹೋಟೆಲ್​ಗೆ ನುಗ್ಗಿ ದಾಂಧಲೆ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ.. ಕರಸೇ ಸಂಸ್ಥಾಪಕ ರಮೇಶ್ ಗೌಡ ಅರೆಸ್ಟ್​

ABOUT THE AUTHOR

...view details