ಕರ್ನಾಟಕ

karnataka

ETV Bharat / bharat

ಅಸ್ಸೋಂನಲ್ಲಿ ಒಂದೇ ದಿನ ಎರಡು ಎನ್​ಕೌಂಟರ್​: ಕಾಡುಪ್ರಾಣಿ ಬೇಟೆಗಾರ ಖತಂ, ಡ್ರಗ್ಸ್​ ಪೆಡ್ಲರ್​ಗೆ ಗುಂಡೇಟು

ಅಸ್ಸೋಂನಲ್ಲಿ ಭಾನುವಾರ ರಾತ್ರಿ ನಡೆದ ಪ್ರತ್ಯೇಕ ಎನ್​ಕೌಂಟರ್​ಗಳಲ್ಲಿ ಓರ್ವ ಕಾಡುಪ್ರಾಣಿ ಬೇಟೆಗಾರ ಬಲಿಯಾಗಿದ್ದರೆ, ಡ್ರಗ್ಸ್​ ಪೆಡ್ಲರ್​ ಗಂಭೀರ ಗಾಯಗೊಂಡಿದ್ದಾನೆ.

By

Published : Aug 14, 2023, 1:11 PM IST

ಅಸ್ಸೋಂನಲ್ಲಿ ಒಂದೇ ದಿನ ಎರಡು ಎನ್​ಕೌಂಟರ್
ಅಸ್ಸೋಂನಲ್ಲಿ ಒಂದೇ ದಿನ ಎರಡು ಎನ್​ಕೌಂಟರ್

ಚಿರಾಂಗ್/ಲಖಿಂಪುರ (ಅಸ್ಸೋಂ) :ಅಸ್ಸೋಂನಲ್ಲಿ ಕಾಡುಪ್ರಾಣಿ ಬೇಟೆ ಮತ್ತು ಡ್ರಗ್​ ದಂಧೆಗೆ ಓರ್ವ ಬಲಿಯಾಗಿದ್ದರೆ, ಇನ್ನೊಬ್ಬ ಗುಂಡೇಟಿಗೆ ತೀವ್ರವಾಗಿ ಗಾಯಗೊಂಡಿದ್ದಾನೆ. ಭಾನುವಾರ ರಾತ್ರಿ ಒಂದೇ ದಿನ ನಡೆದ ಪ್ರತ್ಯೇಕ ಎನ್​ಕೌಂಟರ್​ನಲ್ಲಿ ಪೊಲೀಸರು ಆರೋಪಿಯನ್ನು ಹೊಡೆದುರುಳಿಸಿದ್ದಾರೆ. ಲಖಿಂಪುರ ಮತ್ತು ಚಿರಾಂಗ್ ಜಿಲ್ಲೆಗಳಲ್ಲಿ ಈ ಎರಡು ಎನ್‌ಕೌಂಟರ್‌ಗಳು ನಡೆದಿವೆ.

ತಪ್ಪಿಸಿಕೊಳ್ಳುವಾಗ 'ಬೇಟೆ':ಚಿರಾಂಗ್‌ ಜಿಲ್ಲೆಯ ಜಲುಕಾನಿ ಎಂಬಲ್ಲಿ ಕಳ್ಳ ಬೇಟೆಗಾರರ ಸೆರೆ ಹಿಡಿಯುವ ವೇಳೆ ಬಂಧಿತ ಬೇಟೆಗಾರ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಎನ್​ಕೌಂಟರ್ ನಡೆಸಲಾಗಿದೆ. ಜಲುಕಾನಿ ಭಾರತ ಮತ್ತು ಭೂತಾನ್​ ಗಡಿ ಭಾಗದಲ್ಲಿದೆ. ಘೇಂಡಾಮೃಗಗಳು ಮತ್ತು 40 ಕಾಡು ಆನೆಗಳ ಹತ್ಯೆಯಲ್ಲಿ ಭಾಗಿಯಾಗಿರುವ ಮೂವರು ಬೇಟೆಗಾರರ ಪೈಕಿ ಓರ್ವನನ್ನು ಬಂಧಿಸಲಾಗಿದೆ.

ಉಳಿದವರ ಬೇಟೆಗಾಗಿ ಪೊಲೀಸರು ಬಂಧಿತನ ನೆರವಿನಿಂದ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದಾಗ, ಬಂಧಿತ ಬೇಟೆಗಾರ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಸೆರೆಯಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ಬೇಟೆಗಾರನಿಗೆ ತಾಕಿ ಗಂಭೀರ ಗಾಯಗೊಂಡು ಆತ ಅರಣ್ಯದಲ್ಲೇ ಸಾವನ್ನಪ್ಪಿದ್ದಾನೆ. ಇದೇ ವೇಳೆ, ಇನ್ನಿಬ್ಬರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಎನ್​ಕೌಂಟರ್​ ಬಳಿಕ ಅಸ್ಸೋಂ ಪೊಲೀಸ್ ಮಹಾನಿರ್ದೇಶಕ ಜಿ ಪಿ ಸಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಘೇಂಡಾಮೃಗದ ಚಿತ್ರ ಅಪ್ಲೋಡ್ ಮಾಡುತ್ತಿದ್ದಾರೆ. 'ಅಸ್ಸೋಂ ಪೊಲೀಸರು ನಿಮ್ಮ ಜೊತೆಗಿದ್ದಾರೆ, ಸುರಕ್ಷಿತವಾಗಿರಿ' ಎಂದು ಬರೆದುಕೊಂಡಿದ್ದಾರೆ.

ಡ್ರಗ್ಸ್​ ಪೆಡ್ಲರ್​ ಮೇಲೆ ಗುಂಡಿನ ದಾಳಿ​:ಇನ್ನೊಂದೆಡೆ ಲಖಿಂಪುರದಲ್ಲಿ ನಡೆದ ಎರಡನೇ ಎನ್​ಕೌಂಟರ್​ನಲ್ಲಿ ಡ್ರಗ್ಸ್​ ಪೆಡ್ಲರ್​ ಒಬ್ಬನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಇದರಿಂದ ಆತ ಗಂಭೀರ ಗಾಯಗೊಂಡಿದ್ದಾನೆ. ಲಖಿಂಪುರ ಜಿಲ್ಲೆಯ ಇಸ್ಲಾಂಪುರ ಗ್ರಾಮದಲ್ಲಿ ಪೊಲೀಸ್ ತಂಡವು ಭಾನುವಾರ ರಾತ್ರಿ ಆರೋಪಿ ಅನಾರುಲ್ ಇಸ್ಲಾಂ ಮನೆ ಮೇಲೆ ದಾಳಿ ನಡೆಸಿದೆ.

ಅನಾರುಲ್ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಬಂಧಿತ ಅನಾರುಲ್​ ಪೊಲೀಸರ ತಂಡವು ಡ್ರಗ್ಸ್​ ದಂಧೆ ನಡೆಸುತ್ತಿದ್ದ ಪ್ರದೇಶಕ್ಕೆ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸುವ ವೇಳೆ ಆರೋಪಿ ತಪ್ಪಿಸಿಕೊಳ್ಳು ಯತ್ನಿಸಿದ್ದಾನೆ. ಆಗ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ಆರೋಪಿ ಕಾಲಿಗೆ ತಗುಲಿ, ತೀವ್ರ ಗಾಯಗೊಳಿಸಿದೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎನ್​ಕೌಂಟರ್​ಗಳಿಗೆ ಹೆಸರುವಾಸಿಯಾಗಿರುವ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ಅವರು ಲಖಿಂಪುರ ಜಿಲ್ಲೆಯ ಎಸ್​​ಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಮೊದಲ ಎನ್‌ಕೌಂಟರ್ ಆಗಿದೆ. ನಾಗಾಂವ್ ಜಿಲ್ಲೆಯಲ್ಲಿ ಅವರ ಅಧಿಕಾರಾವಧಿಯಲ್ಲಿ ಹಲವಾರು ಎನ್‌ಕೌಂಟರ್‌ಗಳು ನಡೆದಿದ್ದವು.

ಇದನ್ನೂ ಓದಿ:ಬೆಂಗಳೂರು: ಮದ್ಯದ ಅಮಲಿನಲ್ಲಿ ನಡು ರಸ್ತೆ ಮೇಲೆ ಬಡಿದಾಡಿಕೊಂಡ ಯುವಕರು

ABOUT THE AUTHOR

...view details