ಕರ್ನಾಟಕ

karnataka

ಆಂಧ್ರಪ್ರದೇಶ: ಸಂಕ್ರಾಂತಿ ಕೋಳಿ ಕಾಳಗಕ್ಕೆ ಇಬ್ಬರು ಬಲಿ!

By

Published : Jan 16, 2023, 12:12 PM IST

ಹೈಕೋರ್ಟ್​ ಆದೇಶ ಮೀರಿ ಆಯೋಜಿಸಲಾಗಿದ್ದ ಹುಂಜಗಳ ಕಾದಾಟದಲ್ಲಿ ಪೂರ್ವ ಗೋದಾವರಿ ಹಾಗೂ ಕಾಕಿನಾಡ ಜಿಲ್ಲೆಗಳ ಇಬ್ಬರು ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ.

Two died in Sankranthi Cockfight in Andhrapradesh
ಸಂಕ್ರಾಂತಿ ಕೋಳಿ ಕಾಳಗದಲ್ಲಿ ಇಬ್ಬರ ದರ್ಮರಣ

ಆಂಧ್ರಪ್ರದೇಶ:ಸಂಕ್ರಾಂತಿ ಬಂತೆಂದರೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಪ್ರಾರಂಭವಾದಂತೆ ಆಂಧ್ರಪ್ರದೇಶದಲ್ಲಿ ಕೋಳಿ ಕಾಳಗ ನಡೆಯುತ್ತದೆ. ಮೂರು ದಿನಗಳ ಸಂಕ್ರಾಂತಿ ಸಡಗರದಲ್ಲಿ ಗೋದಾವರಿ, ಕೃಷ್ಣ, ಗುಂಟೂರು ಜಿಲ್ಲೆಗಳ ಭಾಗಗಳು ಮತ್ತು ಕರಾವಳಿ ಆಂಧ್ರದಲ್ಲಿ ಈ ಕೋಳಿ ಕಾಳಗ ಮತ್ತು ಜೂಜಾಟ ನಡೆಯುತ್ತದೆ. ಆದರೆ ಇದೇ ಹಬ್ಬದ ಸಂದರ್ಭದ ಕೋಳಿ ಕಾಳಗದಲ್ಲಿ ಇಬ್ಬರು ವ್ಯಕ್ತಿಗಳು ಬಲಿಯಾಗಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಶಾಸಕ, ಸಂಸದರಿಂದಲೇ ಆಯೋಜನೆ!: ಆಂಧ್ರಪ್ರದೇಶದಲ್ಲಿ ನಡೆಯುವ ಈ ಕೋಳಿ ಕಾಳಗವನ್ನು ತಡೆಯಲು ಸರ್ಕಾರ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಕಡಿವಾಣ ಬಿದ್ದಿಲ್ಲ. ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದರೂ ಕೋಳಿ ಕಾಳಗ ಆಯೋಜಕರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕೋಳಿ ಕಾಳಗವನ್ನು ಆಯೋಜನೆ ಮಾಡುವವರ ಸಂಘಟನೆಗಳಲ್ಲಿ ರಾಜಕಾರಣಿಗಳ ಕೈವಾಡ ಇರುವುದರಿಂದ ಪೊಲೀಸರು ಹಿಂದೆ ಸರಿಯುತ್ತಿದ್ದಾರೆ. ಇನ್ನೂ ಕೆಲವೆಡೆ ಆಡಳಿತ ಪಕ್ಷದ ಶಾಸಕರು, ಸಂಸದರು ಬಹಿರಂಗವಾಗಿಯೇ ಇಂಥ ಸ್ಪರ್ಧೆಗಳನ್ನು ನಡೆಸುತ್ತಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗದ ಪರಿಸ್ಥಿತಿ ಇದೆ.

ಹೀಗಾಗಿ, ಕೋಳಿ ಕಾಲಿಗೆ ಕಟ್ಟಿರುವ ಹರಿತವಾದ ಆಯುಧ (ಕೋಳಿ ಚಾಕು) ಇರಿದು ಇಬ್ಬರು ಸಾವನ್ನಪ್ಪಿರುವ ಘಟನೆ ಆಂಧ್ರದ ಪೂರ್ವ ಗೋದಾವರಿ ಹಾಗೂ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ. ಪೂರ್ವ ಗೋದಾವರಿ ಜಿಲ್ಲೆಯ ನಲ್ಲಜರ್ಲ ಮಂಡಲದ ಅನಂತಪಲ್ಲಿಯಲ್ಲಿ ಪದ್ಮರಾಜು ಕೋಳಿ ಚಾಕು ಇರಿದು ಸಾವನ್ನಪ್ಪಿರುವ ವ್ಯಕ್ತಿ. ಹುಂಜಗಳ ಕಾದಾಟವನ್ನು ನೋಡುತ್ತಿದ್ದಾಗ ಕೋಳಿಯೊಂದು ಪದ್ಮರಾಜು ಮೈಮೇಲೆ ಹಾರಿ ಬಂದಿದೆ. ಹಾರಿ ಬಂದ ರಭಸಕ್ಕೆ ಕೋಳಿ ಕಾಲಿನಲ್ಲಿದ್ದ ಆಯುಧ ಪದ್ಮರಾಜು ಕಾಲಿಗೆ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ತೀವ್ರ ರಕ್ತಸ್ರಾವವಾದ ಕಾರಣ ಅವರು ಮೃತಪಟ್ಟಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ನಲ್ಲಜರ್ಲ ಠಾಣೆ ಪೋಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಹುಂಜಗಳ ಕಾಳಗವನ್ನು ಆಯೋಜಿಸಿದವರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಕೋಳಿ ಕಾಳಗ, ಮತ್ತೋರ್ವ ಸಾವು: ಕಾಕಿನಾಡ ಜಿಲ್ಲೆಯ ಕಿರ್ಲಂಪುಡಿ ಮಂಡಲದ ವೆಲಂಕಾದಲ್ಲಿ ಇನ್ನೊಂದು ದುರಂತ ನಡೆದಿದೆ. ಕೋಳಿ ಕಾಳಗದಲ್ಲಿ ಕೋಳಿಯ ಕಾಲಿಗೆ ಚಾಕು (ಚಾಕು ಮಾಧರಿಯ ಹರಿತವಾದ ಆಯುಧ) ಕಟ್ಟುವ ವೇಳೆ ಈ ಅವಘಡ ಸಂಭವಿಸಿದೆ. ಸುರೇಶ್​ ಎಂಬ 45 ವರ್ಷದ ವ್ಯಕ್ತಿ ಕೋಳಿಯ ಕಾಲಿಗೆ ಚಾಕು ಕಟ್ಟುತ್ತಿದ್ದಾಗ ಮಣಿಕಟ್ಟಿಗೆ ಪೆಟ್ಟು ಬಿದ್ದು ನರ ತುಂಡಾಗಿದೆ. ಸುರೇಶ್ ಅವರನ್ನು ಆಟೋದಲ್ಲಿ ಪ್ರತ್ತಿಪಾಡು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಸುರೇಶ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕಿರ್ಲಂಪುಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವರ್ಷದ ಮೊದಲ ಹಬ್ಬ ಸಂಕ್ರಾಂತಿ ದೇಶದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಆಚರಣೆಗಳ ಜೊತೆಗೆ ಕೆಲವು ಭಾಗಗಳಲ್ಲಿ ಪ್ರಾಣಿಗಳ ಕಾಳಗವನ್ನೂ ನಡೆಸಲಾಗುತ್ತದೆ. ತಮಿಳುನಾಡಿನಲ್ಲಿ ಹೇಗೆ ಜಲ್ಲಿಕಟ್ಟು ಪ್ರಾರಂಭವಾಗುತ್ತದೆಯೋ ಅದೇ ರೀತಿ ಆಂಧ್ರಪ್ರದೇಶದಲ್ಲಿ ಕೋಳಿ ಕಾಳಗ ಬಹಳ ಪ್ರಸಿದ್ಧವಾಗಿದೆ. ಗೋದಾವರಿ ಮತ್ತು ಕೃಷ್ಣಾ ಮತ್ತು ಗುಂಟೂರು ಜಿಲ್ಲೆಗಳ ಭಾಗಗಳಲ್ಲಿ ಕೋಳಿ ಕಾಳಗ ಆಕರ್ಷಣೀಯವಾಗಿರುತ್ತದೆ. ಇದನ್ನು ನೋಡಲೆಂದೇ ದೂರದ ಊರಿನಿಂದ ಜನರು ಬರುತ್ತಾರೆ.

ಹೈಕೋರ್ಟ್‌ ಆದೇಶ ಉಲ್ಲಂಘನೆ: ಆಂಧ್ರಪ್ರದೇಶದಲ್ಲಿ ಈ ರೀತಿಯ ಕೋಳಿ ಕಾಳಗವನ್ನು ನಿಷೇಧಿಸಿ ಹೈಕೋರ್ಟ್ ಆದೇಶ ನೀಡಿದ್ದರೂ ಸಂಕ್ರಾಂತಿ ಆಚರಣೆ ನೆಪದಲ್ಲಿ ಸ್ಥಳೀಯ ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳ ಬೆಂಬಲದೊಂದಿಗೆ ವ್ಯವಸ್ಥಿತವಾಗಿ ಕೋಳಿ ಕಾಳಗ ಆಯೋಜನೆ ಮಾಡಲಾಗುತ್ತದೆ. ಹುಂಜಗಳ ಮೇಲೆ ಪಣತೊಡುವವರನ್ನು ಹೊರತುಪಡಿಸಿ ಬೇರೆ ಯಾರಿಗೂ ಅಖಾಡದ ಒಳಗೆ ಪ್ರವೇಶ ನೀಡದೆ, ಕೋಳಿಗಳ ಕಾಳಗವನ್ನು ನಡೆಸಲಾಗುತ್ತದೆ. ಆದರೂ ಇಂತಹ ದುರ್ಘಟನೆಗಳು ವರದಿಯಾಗುತ್ತವೆ.

ಇದನ್ನೂ ಓದಿ:ಹೈಕೋರ್ಟ್ ಆದೇಶ ಉಲ್ಲಂಘಿಸಿ ಆಂಧ್ರದಲ್ಲಿ ಕೋಳಿ ಕಾಳಗ... ಜನಪ್ರತಿನಿಧಿಗಳಿಂದಲೇ ಉದ್ಘಾಟನೆ!

ABOUT THE AUTHOR

...view details