ಕರ್ನಾಟಕ

karnataka

ETV Bharat / bharat

ಚಳಿ ಹಿನ್ನೆಲೆ ಕೋಣೆಯಲ್ಲಿ ಬೆಂಕಿ ಹಾಕಿ ನಿದ್ದೆಗೆ ಜಾರಿದರು: ಹೊಗೆಯಿಂದ ಉಸಿರುಗಟ್ಟಿ ಇಬ್ಬರು ಮಕ್ಕಳ ಸಾವು

ಬೆಂಕಿಯ ಹೊಗೆಯಿಂದ ಉಸಿರುಗಟ್ಟಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

By ETV Bharat Karnataka Team

Published : Jan 9, 2024, 10:55 PM IST

Updated : Jan 9, 2024, 11:05 PM IST

Etv Bharattwo-children-brother-and-sister-died-due-to-suffocation-in-lakhimpur-kheri-condition-of-parents-critical
ಚಳಿ ಹಿನ್ನೆಲೆ ಕೋಣೆಯಲ್ಲಿ ಬೆಂಕಿ ಹಾಕಿ ನಿದ್ರೆ: ಹೊಗೆಯಿಂದ ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವು

ಲಖಿಂಪುರ ಖೇರಿ(ಉತ್ತರ ಪ್ರದೇಶ): ಉತ್ತರ ಭಾರತದಲ್ಲಿ ದಿನದಿನಕ್ಕೂ ಚಳಿಗಾಳಿ ಹೆಚ್ಚಾಗುತ್ತಿದೆ. ಹೀಗಾಗಿ ಜನ ಅಗ್ಗಿಷ್ಟಿಕೆಗಳ ಮೊರೆ ಹೋಗ್ತಿದ್ದಾರೆ. ಈ ನಡುವೆ ಕುಟುಂಬವೊಂದಕ್ಕೆ ಮೈಕೊರೆಯುವ ಚಳಿ ಹಿನ್ನೆಲೆ ಕೋಣೆಯಲ್ಲಿ ರಾತ್ರಿ ಬೆಂಕಿ ಹಾಕಿ ನಿದ್ರೆಗೆ ಜಾರಿತ್ತು. ಈ ವೇಳೆ ಮನೆ ತುಂಬಾ ಹೊಗೆ ಆವರಿಸಿಕೊಂಡಿದೆ. ಇದರಿಂದ ಇಬ್ಬರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಮೈಲಾನಿಯಲ್ಲಿ ನಡೆದಿದೆ. ಅನ್ಶಿಕಾ (8) ಮತ್ತು ಕೃಷ್ಣ (7) ಮೃತ ಮಕ್ಕಳಾಗಿದ್ದಾರೆ. ಇನ್ನು ಇವರ ಜತೆಯೇ ಮಲಗಿದ್ದ ಪೋಷಕರಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ ಸ್ಥಳೀಯರು ಮನೆಯಿಂದ ಯಾರೂ ಹೊರ ಬಾರದ ಹಿನ್ನೆಲೆ ಅನುಮಾನಕೊಂಡ ಅಕ್ಕಪಕ್ಕದವರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಹೊರಗಿನಿಂದ ಎಷ್ಟು ಕೂಗಿದರು ಯಾರು ಸ್ಪಂದಿಸಿಲ್ಲ. ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ರಮೇಶ್ ಲೋಹರ್ (42), ಅವರ ಪತ್ನಿ ರೇಣು (40) ಮತ್ತು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಪೊಲೀಸರು ತಕ್ಷಣ ನಾಲ್ವರನ್ನು ಮೈಲಾನಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ವೈದ್ಯರು ಪರಿಶೀಲಿಸಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಪೋಷಕರ ಸ್ಥಿತಿ ಗಂಭೀರವಾಗಿದ್ದು, ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ಮೈಲಾನಿ ಇನ್ಸ್​ಪೆಕ್ಟರ್​ ಪಂಕಜ್ ತ್ರಿಪಾಠಿ ಪ್ರತಿಕ್ರಿಯಿಸಿ, "ರಾತ್ರಿಯ ಚಳಿಯಿಂದಾಗಿ ರಮೇಶ್ ಮನೆಯ ಕೋಣೆಯಲ್ಲಿ ಬೆಂಕಿಯನ್ನು ಹಾಕಿದ್ದರು. ನಂತರ ಇಡೀ ಕುಟುಂಬವು ನಿದ್ರೆಗೆ ಜಾರಿತ್ತು. ಆದರೆ ಬೆಳಗ್ಗೆ, ಎಷ್ಟು ಹೊತ್ತಾದರೂ ಬಾಗಿಲು ತೆರೆಯದಿದ್ದಾಗ ನೆರೆಹೊರೆಯವರು ಹೋಗಿ ಬಾಗಿಲು ತಟ್ಟಿದ್ದಾರೆ. ಆದರೆ ಮನೆಯವರು ಯಾರು ಬಾಗಿಲು ತೆರೆದಿಲ್ಲ. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಳಗೆ ಹೋಗಿ ನೋಡಿದಾಗ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ರಮೇಶ್ ಮತ್ತು ರೇಣುದೇವಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಇಬ್ಬರನ್ನೂ ತಕ್ಷಣವೇ ಮೈಲಾನಿ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಪೊಲೀಸರು ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಕ್ಕಳು ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿರುವುದು ಪ್ರಾಥಮಿಕವಾಗಿ ತನಿಖೆಯಿಂದ ತಿಳಿದುಬಂದಿದೆ" ಎಂದು ಅವರು ಘಟನೆಯ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಜಮೀನು ವಿವಾದ: ವರಾಂಡದಲ್ಲಿ ಮಲಗಿದ್ದ ಅಜ್ಜ, ಮೊಮ್ಮಗನ ಗುಂಡಿಕ್ಕಿ ಕೊಲೆ

Last Updated : Jan 9, 2024, 11:05 PM IST

ABOUT THE AUTHOR

...view details