ನವದೆಹಲಿ:ಉಪರಾಷ್ಟ್ರಪತಿ ಚುನಾವಣೆಯ ಮತದಾನದಿಂದ ದೂರ ಉಳಿಯುವುದಾಗಿ ಹೇಳಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಪ್ರತಿಪಕ್ಷಗಳ ಅಭ್ಯರ್ಥಿಯಾದ ಮಾರ್ಗರೇಟ್ ಆಳ್ವಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಅಹಂಕಾರ, ಕೋಪದ ಸಮಯವಲ್ಲ. ಧೈರ್ಯ, ಒಗ್ಗಟ್ಟು ತೋರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಮತದಾನದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ತಮ್ಮ ಪಕ್ಷದ ಸಂಸದರು ಮತದಾನದಿಂದ ದೂರವಿರುತ್ತಾರೆ ಎಂದು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾರ್ಗರೇಟ್ ಆಳ್ವಾ ಅವರು, ಮತದಾನದಿಂದ ದೂರವಿರುವುದಾಗಿ ಘೋಷಿಸಿದ ತೃಣಮೂಲ ಕಾಂಗ್ರೆಸ್ ನಿರ್ಧಾರವು ನಿರಾಶದಾಯಕ. ಇದು ಅಹಂಕಾರ, ಕೋಪ ತೋರಿಸುವ ಸಮಯವಲ್ಲ. ಬದಲಾಗಿ ಒಗ್ಗಟ್ಟು, ನಾಯಕತ್ವವನ್ನು ಸಾರಬೇಕಿದೆ. ಧೈರ್ಯದ ಪ್ರತೀಕದಂತಿರುವ ಮಮತಾ ಅವರು ತಮ್ಮ ನಿರ್ಧಾರವನ್ನು ಬದಲಿತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ. ವಿರೋಧ ಪಕ್ಷಗಳ ಜೊತೆ ನಿಲ್ಲಬೇಕು ಎಂದು ಮಮತಾ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.