ಚಿತ್ತೂರು(ಆಂಧ್ರಪ್ರದೇಶ):ಬೆಳಗಾದರೆ ಮದುವೆ ಇತ್ತು. ಸಂಭ್ರಮದಿಂದ ತೆರಳುತ್ತಿದ್ದ ಕುಟುಂಬದ ಮೇಲೆ ಜವರಾಯ ರಾತ್ರಿ ಬಂದು ಎರಗಿದ್ದ. ಮದುವೆ ಮಂಟಪಕ್ಕೆ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ಮಗುಚಿ ಒಂದೇ ಕುಟುಂಬದ ಮೂವರು ಸೇರಿ 6 ಮಂದಿ ಮೃತಪಟ್ಟ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಬುಧವಾರ ರಾತ್ರಿ ನಡೆದಿದೆ.
ಚಿತ್ತೂರು ಜಿಲ್ಲೆಯ ಲಕ್ಷ್ಮಯ್ಯೂರು ಗ್ರಾಮದ ಕುಟುಂಬವೊಂದು ಮದುವೆ ಕಾರ್ಯಕ್ರಮದ ಸಂಭ್ರಮದಲ್ಲಿತ್ತು. ಬೆಳಗ್ಗೆ ಮದುವೆ ಇದ್ದ ಕಾರಣ ಬಂಧುಗಳ ಸಮೇತ ವರ ಕಲ್ಯಾಣ ಮಂಟಪಕ್ಕೆ ಬುಧವಾರ ರಾತ್ರಿ ತೆರಳುತ್ತಿದ್ದ. ಕಲ್ಯಾಣಮಂಟಪ 2 ಕಿಮೀ ದೂರವಿದ್ದಾಗ ವರನ ಸಮೇತ 26 ಜನರಿದ್ದ ಟ್ರ್ಯಾಕ್ಟರ್ ಎತ್ತರದ ಪ್ರದೇಶದಲ್ಲಿ ಸಾಗುತ್ತಿದ್ದಾಗ, ಚಾಲಕ ಇಂಧನ ಉಳಿಸಲೆಂದು ಇಂಜಿನ್ ಆಫ್ ಮಾಡಿದ್ದಾರೆ.
ಈ ವೇಳೆ ಟ್ರ್ಯಾಕ್ಟರ್ ವೇಗವಾಗಿ ಇಳಿಜಾರಿನೆಡೆಗೆ ಚಲಿಸಿದೆ. ನಿಯಂತ್ರಣ ಕಳೆದುಕೊಂಡ ವಾಹನ ಏಕಾಏಕಿ ರಸ್ತೆ ಪಕ್ಕದ 5 ಅಡಿ ಕಂದಕಕ್ಕೆ ಉರುಳಿ, ಟ್ರ್ಯಾಕ್ಟರ್ ಟ್ರಾಲಿ ಮಗುಚಿ ಬಿದ್ದಿದೆ. ಇದರಿಂದ 26 ಜನರು ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಘಟನೆಯಲ್ಲಿ ಉಸಿರುಗಟ್ಟಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು, ಮೂವರು ಮಹಿಳೆಯರು ಮತ್ತು ಟ್ರ್ಯಾಕ್ಟರ್ ಚಾಲಕ ಪ್ರಾಣ ಕಳೆದುಕೊಂಡಿದ್ದಾರೆ.
ಮಾಹಿತಿ ಪಡೆದ ಸ್ಥಳೀಯರು ಮತ್ತು ಪೊಲೀಸರು ರಕ್ಷಣೆಗೆ ಧಾವಿಸಿ ಗಾಯಗೊಂಡ 19 ಜನರನ್ನು ಚಿಕಿತ್ಸೆಗಾಗಿ ಚಿತ್ತೂರು, ತಿರುಪತಿ ಮತ್ತು ವೆಲ್ಲೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಚಾಲಕನ ಬುದ್ಧಿಗೇಡಿತನದಿಂದಾಗಿ ಶುಭಕಾರ್ಯ ನಡೆಯಬೇಕಿದ್ದ ವೇಳೆ ಅಚಾತುರ್ಯ ನಡೆದಿದೆ. ಟ್ರ್ಯಾಕ್ಟರ್ನಲ್ಲಿ ಇದ್ದ ವರ ಕೂಡ ಗಾಯಗೊಂಡು ಆಸ್ಪತ್ರೆ ಸೇರಿದ್ದು, ಮದುವೆ ಸದ್ಯಕ್ಕೆ ನಿಂತು ಹೋಗಿದೆ.
ಓದಿ:ಕಳೆದ ಐದು ವರ್ಷದಲ್ಲಿ 2900ಕ್ಕೂ ಹೆಚ್ಚು ಕೋಮು ಗಲಭೆ ಪ್ರಕರಣಗಳು ದಾಖಲು: ಕೇಂದ್ರ ಸರ್ಕಾರದ ಮಾಹಿತಿ