ಕರ್ನಾಟಕ

karnataka

ETV Bharat / bharat

ವೆಲಂಕನ್ನಿ ಚರ್ಚ್‌ಗೆ ಹೊರಟಿದ್ದ ಪ್ರವಾಸಿ ಬಸ್​ ಅಪಘಾತ: ನಾಲ್ವರು ಸಾವು - ಉತ್ತರಾಖಂಡ್ ಬಸ್​ ಅಪಘಾತ

ತಮಿಳುನಾಡಿನ ತಂಜಾವೂರು ಸಮೀಪ ಕೇರಳದ ಪ್ರವಾಸಿ ಬಸ್​ ಅಪಘಾತಕ್ಕೀಡಾದ ನಾಲ್ವರು ಸಾವನ್ನಪ್ಪಿದ್ದಾರೆ.

tourist-bus-from-kerala-to-velankanni-met-an-accident-in-thanjavur
ವೆಲಂಕನ್ನಿ ಚರ್ಚ್‌ಗೆ ಹೊರಟಿದ್ದ ಪ್ರವಾಸಿ ಬಸ್​ ಅಪಘಾತ: ನಾಲ್ವರು ಸಾವು

By

Published : Apr 2, 2023, 7:24 PM IST

ತಂಜಾವೂರು (ತಮಿಳುನಾಡು): ಕೇರಳದ ಪ್ರವಾಸಿ ಬಸ್​ವೊಂದು ಅಪಘಾತಕ್ಕೀಡಾದ ಘಟನೆ ತಮಿಳುನಾಡಿನ ತಂಜಾವೂರು ಸಮೀಪ ಭಾನುವಾರ ನಡೆದಿದೆ. ಈ ಘಟನೆಯಲ್ಲಿ ಓರ್ವ ಬಾಲಕ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಸುಮಾರು 38 ಮಂದಿ ಗಾಯಗೊಂಡಿದ್ದಾರೆ.

ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ವೆಲಂಕನ್ನಿ ಚರ್ಚ್‌ಗೆ ಭೇಟಿ ನೀಡಲೆಂದು ಕೇರಳದ ತ್ರಿಶೂರ್ ಜಿಲ್ಲೆಯ ಒಲ್ಲೂರು ಮೂಲದ 51 ಜನರು ಐಷಾರಾಮಿ ಟೂರಿಸ್ಟ್ ಬಸ್​ನಲ್ಲಿ ಬರುತ್ತಿದ್ದರು. ತ್ರಿಶೂರ್​ನಿಂದ ಹೊರಟಿದ್ದ ಬಸ್​ ಬೆಳಗಿನ ಜಾವ ತಂಜಾವೂರು ಸಮೀಪದ ಒರತನಾಡು - ಮನ್ನಾರಗುಡಿ ರಸ್ತೆಯ ತಿರುವಿನಲ್ಲಿ ಪಲ್ಟಿ ಹೊಡೆದಿದೆ. ಪರಿಣಾಮ ಬಸ್​ನಲ್ಲಿ ವೃದ್ಧೆ ಲಿಲಿ (63) ಮತ್ತು ಬಾಲಕ ರೇಯಾನ್ (8) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಲ್ಲದೇ, ಸುಮಾರು 38 ಮಂದಿ ಗಾಯಗೊಂಡಿದ್ದು, ಇದರಲ್ಲಿ ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳು ಆಗಿವೆ. ಈ ಘಟನೆಯ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಡಿಎಸ್ಪಿ ಪ್ರಸನ್ನ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಅನ್ಬಜಗನ್ ನೇತೃತ್ವದಲ್ಲಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಗಾಯಾಳುಗಳು ಮತ್ತು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಒರ್ದನಾಡು ಸರ್ಕಾರಿ ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ತಂಜಾವೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಆಸ್ಪತ್ರೆಯಲ್ಲಿ ಮತ್ತಿಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಈ ಘಟನೆಯಿಂದ ಒರತನಾಡು-ಮನ್ನಾರಗುಡಿ ರಸ್ತೆಯಲ್ಲಿ ಸುಮಾರು 3 ಗಂಟೆಗಳ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಚಾಲಕ ನಿದ್ರೆಗೆ ಜಾರಿದ್ದ ಕಾರಣ ಬಸ್​ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಾಖಂಡ್ ಬಸ್​ ಅಪಘಾತ - ಇಬ್ಬರ ಸಾವು: ಮತ್ತೊಂದೆಡೆ, ಉತ್ತರಾಖಂಡ್​ನಲ್ಲಿ ಸಾರಿಗೆ ಸಂಸ್ಥೆಯೊಂದು ಚಾಲಕನ ನಿಯಂತ್ರಣ ತಪ್ಪಿ 150 ಅಡಿ ಕಮರಿಗೆ ಉರುಳಿದ ಘಟನೆ ನಡೆದಿದೆ. ಈ ಘಟನೆಯಲ್ಲಿ ಯುವತಿಯರು ಮೃತಪಟ್ಟಿದ್ದಾರೆ. ಇತರ 22 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಡೆಹ್ರಾಡೂನ್​ನಿಂದ ಹೊರಟಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ 34 ಪ್ರಯಾಣಿಕರು ಪ್ರಯಾಣಿಸಿದ್ದರು. ಈ ವೇಳೆ ಮಸ್ಸೂರಿ - ಡೆಹ್ರಾಡೂನ್ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಜರುಗಿದೆ. ಈ ವಿಷಯ ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಪೊಲೀಸರು ಮತ್ತು ಐಟಿಬಿಪಿ ಸಿಬ್ಬಂದಿ ಹರಸಾಹಸ ಪಟ್ಟು 26 ಜನರನ್ನು ಕಮರಿಯಿಂದ ರಕ್ಷಿಸಿದ್ದಾರೆ. ಇದರಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಧಾಮಿ ಟ್ವೀಟ್​ ಮಾಡಿದ್ದು, ಡೆಹ್ರಾಡೂನ್-ಮಸ್ಸೂರಿ ಹೆದ್ದಾರಿಯಲ್ಲಿ ನಡೆದ ಬಸ್ ಅಪಘಾತದ ಸುದ್ದಿ ಅತ್ಯಂತ ದುಃಖಕರವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ: ಪವಾಡ ಸದೃಶ್ಯ ರೀತಿಯಲ್ಲಿ‌ 7 ವರ್ಷದ ಬಾಲಕ ಪಾರು

ABOUT THE AUTHOR

...view details