ಕರ್ನಾಟಕ

karnataka

By ETV Bharat Karnataka Team

Published : Sep 14, 2023, 7:41 PM IST

ETV Bharat / bharat

ಕೆಲ ರಾಜ್ಯಗಳಲ್ಲಿ ಮಾತ್ರ ಹಿಂದಿ ಪ್ರಧಾನ ಭಾಷೆ: ಅಮಿತ್​ ಶಾ ಹೇಳಿಕೆಗೆ ಉದಯನಿಧಿ ತಿರುಗೇಟು

ಹಿಂದಿ ಭಾಷೆ ಭಾರತದ ಏಕೀಕರಣದ ಶಕ್ತಿ ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್​ ವಾಗ್ದಾಳಿ ನಡೆಸಿದ್ದಾರೆ.

tn-minister-udhayanithi-stalin-strongly-criticizes-amit-shahs-assertion-on-hindi-as-indias-uniting-force
ಕೆಲ ರಾಜ್ಯಗಳಲ್ಲಿ ಮಾತ್ರ ಹಿಂದಿ ಪ್ರಧಾನ ಭಾಷೆ : ಅಮಿತ್​ ಶಾ ಹೇಳಿಕೆಗೆ ಉದಯನಿಧಿ ತಿರುಗೇಟು

ಚೆನ್ನೈ(ತಮಿಳುನಾಡು): ಈಗಾಗಲೇ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುವ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರ​ ಪುತ್ರ, ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್​ ಇದೀಗ ಕೇಂದ್ರ ಗೃಹ ಸಚಿವ ಅಮಿತ್​ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಹಿಂದಿ ಭಾಷೆ ಕುರಿತ ಹೇಳಿಕೆಯನ್ನು ಖಂಡಿಸಿರುವ ಉದಯನಿಧಿ ಸ್ಟಾಲಿನ್​, ಭಾರತದ ಭಾಷಾ ವೈವಿಧ್ಯತೆಯನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಟೀಕಿಸಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಅವರು ಹಿಂದಿ ಭಾಷೆಯನ್ನು ಭಾರತದ ಏಕೀಕರಣದ ಶಕ್ತಿ ಎಂದು ಹೇಳಿದ್ದರು. ಈ ಬಗ್ಗೆ ವಾಗ್ದಾಳಿ ನಡೆಸಿರುವ ಸಚಿವ ಉದಯನಿಧಿ, ದೇಶಾದ್ಯಂತ ಕೆಲವೇ ಕೆಲವು ರಾಜ್ಯಗಳಲ್ಲಿ ಹಿಂದಿಯನ್ನು ಪ್ರಧಾನ ಭಾಷೆಯಾಗಿ ಮಾತನಾಡುತ್ತಾರೆ. ಭಾರತದ ನಿಜವಾದ ಶಕ್ತಿ ಇಲ್ಲಿನ ವಿವಿಧ ಭಾಷೆ, ಸಂಸ್ಕೃತಿ, ಸಂಪ್ರದಾಯಗಳಲ್ಲಿ ಅಡಗಿದೆ ಎಂದು ಹೇಳಿದರು.

ಇದು ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾಡುವ ಪರೋಕ್ಷ ಪ್ರಯತ್ನ ಎಂಬುದನ್ನು ನಾವು ಅರಿಯಬಹುದು. ಭಾರತದಲ್ಲಿರುವ ಪ್ರತಿಯೊಂದು ಭಾಷೆಗೂ ಸಮಾನ ಮನ್ನಣೆ ಮತ್ತು ಗೌರವ ಇದೆ. ಈ ಭಾಷೆಗಳನ್ನು ಪ್ರಾದೇಶಿಕ ಭಾಷೆಗಳು ಎಂದು ಹೇಳುವ ಮೂಲಕ ಅದರ ಐತಿಹಾಸಿಕ ಪ್ರಾಮುಖ್ಯತೆ ಕುಗ್ಗಿಸುವ ಕೆಲಸವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಉದಯನಿಧಿಯವರು ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯ ವೈವಿಧ್ಯತೆಯನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. ಉದಯನಿಧಿ ಹೇಳಿಕೆಗಳು ಭಾಷಾ ರಾಜಕೀಯದಲ್ಲಿ ವೈವಿಧ್ಯತೆ ಎತ್ತಿ ಹಿಡಿಯುವ ಸಮತೋಲಿತ ಚರ್ಚೆಯನ್ನು ಹುಟ್ಟು ಹಾಕಿದೆ.

ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ :ರಾಜ್ಯ ಕ್ರೀಡಾ ಸಚಿವ ಉದಯನಿಧಿ ಅವರು ಇತ್ತೀಚೆಗೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡುವಾಗ ಮಲೇರಿಯಾ, ಡೆಂಘಿ, ಕೊರೊನಾ ಮುಂತಾದ ಕಾಯಿಲೆಗಳಿಗೆ ಹೋಲಿಸಿದ್ದರು. ಇಂತಹವುಗಳನ್ನು ವಿರೋಧಿಸಬಾರದು, ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.

ತಮಿಳುನಾಡಿನ ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘವು ಆಯೋಜಿಸಿದ್ದ ಸಭೆ ಉದ್ದೇಶಿಸಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ‘ಸನಾತನಂ’ ಎಂದು ಉಲ್ಲೇಖಿಸಿದ್ದರು. ಅಲ್ಲದೇ, ಸನಾತನ ಧರ್ಮ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದರು. ಉದಯನಿಧಿ ಹೇಳಿಕೆ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಈ ಸಂಬಂಧ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಉದಯನಿಧಿ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು.

ಇದನ್ನೂ ಓದಿ :ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ: ಉದಯನಿಧಿ ಸ್ಟಾಲಿನ್​​ ವಿರುದ್ದ ದೂರು ದಾಖಲು

ABOUT THE AUTHOR

...view details