ಕರ್ನಾಟಕ

karnataka

ಮಮತಾ ಮೇಲೆ ಹಲ್ಲೆ ಆರೋಪ: ಉನ್ನತ ಮಟ್ಟದ ತನಿಖೆಗೆ ಟಿಎಂಸಿ ಆಗ್ರಹ

By

Published : Mar 12, 2021, 3:24 PM IST

ಮಮತಾ ಬ್ಯಾನರ್ಜಿ ಮೇಲೆ ನಡೆದ ಹಲ್ಲೆ ಬಹುದೊಡ್ಡ ಪಿತೂರಿಯಾಗಿದೆ. ಈ ಬಗ್ಗೆ ಪಕ್ಷಪಾತವಿಲ್ಲದ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಚುನಾವಣಾ ಆಯೋಗಕ್ಕೆ ಟಿಎಂಸಿ ನಾಯಕರು ಒತ್ತಾಯಿಸಿದ್ದಾರೆ.

TMC demands high-level probe into attack on Mamata Banerjee at Nandigram
ಉನ್ನತ ಮಟ್ಟದ ತನಿಖೆಗೆ ಟಿಎಂಸಿ ಆಗ್ರಹ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ನಂದಿಗ್ರಾಮ ಭೇಟಿ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿರುವ ತೃಣಮೂಲ ಕಾಂಗ್ರೆಸ್​ (ಟಿಎಂಸಿ), ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

ತನಿಖೆಯ ಮೂಲವನ್ನು ನಿರ್ಧರಿಸುವ ವಿಚಾರ ಭಾರತದ ಚುನಾವಣಾ ಆಯೋಗಕ್ಕೆ ಬಿಟ್ಟಿದ್ದು. ನಾವು ಯಾವುದೇ ನಿರ್ದಿಷ್ಟ ತನಿಖೆಗೆ ಒತ್ತಾಯಿಸಲಿಲ್ಲ. ಆದರೆ ಪಕ್ಷಪಾತವಿಲ್ಲದ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದೇವೆ. ನಂದಿಗ್ರಾಮದಲ್ಲಿ ಘಟನೆ ನಡೆದಾಗ ಅಲ್ಲಿ ಪೊಲೀಸರು ಉಪಸ್ಥಿತರಿರಲಿಲ್ಲ. ಈ ದಾಳಿಯು ಬಹುದೊಡ್ಡ ಪಿತೂರಿಯಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಟಿಎಂಸಿ ಮುಖಂಡ ಸೌಗತಾ ರಾಯ್ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಪ್ರಸ್ತುತ ದೇಶದಲ್ಲಿರುವ ಏಕೈಕ ಮಹಿಳಾ ಮುಖ್ಯಮಂತ್ರಿ. ಈ ಘಟನೆಯ ಬಗ್ಗೆ ಎಲ್ಲರೂ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ದೇಶದ ಪ್ರಧಾನಿ ಮತ್ತು ಗೃಹ ಸಚಿವರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಯಾಕೆ, ಹೇಗೆ ಹಲ್ಲೆ ನಡೆಯಿತು ಎಂಬುದನ್ನು ಸಾಬೀತುಪಡಿಸುವ ಸಂಪೂರ್ಣ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಪಾರ್ಥ ಚಟರ್ಜಿ ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಕದನ: ತಾವು ಕಣಕ್ಕಿಳಿಯುವ ಕ್ಷೇತ್ರ ಬಹಿರಂಗ ಪಡಿಸಿದ ಕಮಲ್ ಹಾಸನ್​

ಪಶ್ಚಿಮ ಬಂಗಾಳದಲ್ಲಿ 294 ಸ್ಥಾನಗಳಿಗೆ ಎಂಟು ಹಂತಗಳಲ್ಲಿ ಮಾರ್ಚ್ 27 ಮತ್ತು ಏಪ್ರಿಲ್ 29 ರವರೆಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸುತ್ತಿದ್ದಾರೆ.

ಬುಧವಾರ ನಂದಿಗ್ರಾಮದಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ನಡೆದ ತಳ್ಳಾಟದಲ್ಲಿ ದೀದಿ ಗಾಯಗೊಂಡಿದ್ದರು. ಕೋಲ್ಕತ್ತಾ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಮಮತಾರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನು ಹಲ್ಲೆ ಎಂದು ಆರೋಪಿಸಿರುವ ಟಿಎಂಸಿ ಮುಖಂಡರು, ಕಾರ್ಯಕರ್ತರು ನಿನ್ನೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು.

ABOUT THE AUTHOR

...view details