ಶ್ರೀನಗರ:ಬಿಜೆಪಿ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸಾಂವಿಧಾನಿಕ ಸ್ಥಾನಮಾನ ರದ್ದುಗೊಳಿಸಿ ಮೂರು ವರ್ಷಗಳಾದವು. 2019ರ ಇದೇ ದಿನದಂದು ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಆರ್ಟಿಕಲ್ 370 ಮತ್ತು 35 ಎ ರದ್ದತಿ ಮಸೂದೆ ಮಂಡಿಸುವ ಮೂಲಕ ಅದನ್ನು ರದ್ದುಗೊಳಿಸಿದ್ದರು. ಇದಕ್ಕೆ ಸಂಸತ್ ಅನುಮೋದನೆ ಕೂಡಾ ನೀಡಿತ್ತು.
ಆರ್ಟಿಕಲ್ 370 ರ ರದ್ದತಿಯೊಂದಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಮಾಡಲಾಗಿತ್ತು. ಆ ಮೂಲಕ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ಥಿತ್ವಕ್ಕೆ ಬಂದಿದ್ದವು.
ಆಗಸ್ಟ್ 5ಕ್ಕೆ ಒಂದು ದಿನ ಮೊದಲು, ಕಣಿವೆಯ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಾಯಕರನ್ನು ಬಂಧಿಸಲಾಗಿತ್ತು. ಅಷ್ಟೇ ಅಲ್ಲ ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದಲ್ಲಿ ಹಲವಾರು ತಿಂಗಳುಗಳ ಕಾಲ ಕರ್ಫ್ಯೂ ವಿಧಿಸಲಾಗಿತ್ತು. ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು ಮತ್ತು ಇಂಟರ್ನೆಟ್ ಸೇರಿದಂತೆ ಫೋನ್ ಸೇವೆಗಳನ್ನು ಹಲವಾರು ತಿಂಗಳುಗಳವರೆಗೆ ಸ್ಥಗಿತಗೊಳಿಸಲಾಗಿತ್ತು.