ಕರ್ನಾಟಕ

karnataka

By

Published : Jan 2, 2023, 10:37 AM IST

Updated : Jan 2, 2023, 11:23 AM IST

ETV Bharat / bharat

ಲೋಕಸಭೆ ಎಲೆಕ್ಷನ್‌ಗೆ 'ಸೆಮಿಫೈನಲ್‌': ಈ ವರ್ಷ ದೇಶದ ಎಲ್ಲೆಲ್ಲಿ ವಿಧಾನಸಭೆ ಚುನಾವಣೆ?

ದೇಶದ 9 ರಾಜ್ಯಗಳಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿಗಾಗಿ ಪೈಪೋಟಿಗೆ ಬಿದ್ದು ಸೆಣಸಾಟ ನಡೆಸಲಿವೆ. ಅಷ್ಟೇ ಅಲ್ಲ, ಈ ಚುನಾವಣೆಯನ್ನು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಜಿದ್ದಾಜಿದ್ದಿಗೆ ಸೆಮಿಫೈನಲ್‌ ಎಂದು ಕೂಡಾ ಬಣ್ಣಿಸಲಾಗಿದೆ.

elections
ಚುನಾವಣೆ

ಈ ವರ್ಷ ದೇಶದ ಒಂಬತ್ತು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಭಾರಿ ಮಹತ್ವ ಪಡೆದಿದೆ. ಈ ಚುನಾವಣೆಯನ್ನು ಲೋಕಸಭೆ ಸಮರಕ್ಕೆ ದಿಕ್ಸೂಚಿ ಎಂದೇ ರಾಜಕೀಯ ವಿಶ್ಲೇಷಕರು ಪರಿಗಣಿಸಿದ್ದಾರೆ.

ಈಶಾನ್ಯ ರಾಜ್ಯಗಳಾದ ಮೇಘಾಲಯ, ತ್ರಿಪುರಾ ಮತ್ತು ನಾಗಾಲ್ಯಾಂಡ್​ನಲ್ಲಿ ಫೆಬ್ರವರಿ-ಮಾರ್ಚ್​ನಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್​ನಲ್ಲಿ ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಹಾಗು ಜಮ್ಮು ಕಾಶ್ಮೀರದಲ್ಲಿಯೂ 'ವಿಧಾನ ಕದನ' ನಡೆಯಲಿದೆ.

ತ್ರಿಪುರ:ಈಶಾನ್ಯ ಭಾಗದಲ್ಲಿರುವ ಪುಟ್ಟರಾಜ್ಯ ತ್ರಿಪುರಾದಲ್ಲಿ 2018 ರಲ್ಲಿ ಬಿಜೆಪಿ 35 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿತ್ತು. ಈ ಮೂಲಕ ಸುಮಾರು ಎರಡು ದಶಕಗಳ ಕಾಲ ರಾಜ್ಯ ಆಳಿದ ಸಿಪಿಐ(ಎಂ) ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆದಿತ್ತು. ಡಾ.ಮಾಣಿಕ್​ ಸಹಾ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ರಾಜ್ಯದ ಬಿಜೆಪಿ ಘಟಕದಲ್ಲಿ ಒಳಜಗಳಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ:ಕರ್ನಾಟಕ ಚುನಾವಣೆಯತ್ತ ಮೋದಿ - ಶಾ ಚಿತ್ತ.. ಕಾಂಗ್ರೆಸ್, ಜೆಡಿಎಸ್ ಮತ ಬ್ಯಾಂಕ್​ಗಳೇ ಟಾರ್ಗೆಟ್

ಈ ಸಲದ ಚುನಾವಣೆಯಲ್ಲಿ ತ್ರಿಪುರ ಮೋಥಾ ಪಕ್ಷವು ಬಿಜೆಪಿಯನ್ನು ಎದುರಿಸುವ ನಿರೀಕ್ಷೆ ಇದೆ. ಹಂಗ್​ಶಾ ಕುಮಾರ್​ ಅವರು 6000 ಬುಡಕಟ್ಟು ಬೆಂಬಲಿಗರೊಂದಿಗೆ ತ್ರಿಪುರ ಮೋಥಾ ಪಕ್ಷ ಕಟ್ಟಿದ್ದಾರೆ. ಬುಡಕಟ್ಟು ಸಂಘಟನೆ ರಚನೆಯಾದ ಕೇವಲ ಎರಡು ತಿಂಗಳಲ್ಲಿ ಅಂದರೆ ಕಳೆದ ಏಪ್ರಿಲ್‌ನಲ್ಲಿ ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಮಂಡಳಿ (TTAADC) ಚುನಾವಣೆಯಲ್ಲಿ ಗೆದ್ದಿದೆ.

ಮೇಘಾಲಯ: ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎಸ್​ಪಿಪಿ) ಜೊತೆ ಬಿಜೆಪಿ ತನ್ನ ಮೈತ್ರಿಯನ್ನು ಭದ್ರಪಡಿಸಲು ಹವಣಿಸುತ್ತಿದೆ. ಕಳೆದ ತಿಂಗಳು ಇಬ್ಬರು ಎನ್​ಪಿಪಿ ಶಾಸಕರು ಬಿಜೆಪಿ ಸೇರಿದಾಗ ಉಭಯ ಪಕ್ಷಗಳ ನಡುವೆ ಜಗಳ ಆರಂಭವಾಗಿತ್ತು. ಮೇಘಾಲಯದ 60 ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್​ 21 ಸ್ಥಾನಗಳನ್ನು ಪಡೆದುಕೊಂಡ ಬಳಿಕ ಬಿಜೆಪಿ ಎನ್​ಪಿಪಿಯೊಂದಿಗೆ ಸೇರಿಕೊಂಡು ಮೇಘಾಲಯದಲ್ಲಿ ಸರ್ಕಾರ ರಚಿಸಿತು.

ನಾಗಾಲ್ಯಾಂಡ್​: ಇಲ್ಲಿ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಯೊಂದಿಗೆ ಬಿಜೆಪಿಯ ಮೈತ್ರಿ ಸರ್ಕಾರವಿದೆ. ಆದರೆ ರಾಜ್ಯದಿಂದ ಬೇರ್ಪಟ್ಟು ಪ್ರತ್ಯೇಕ 'ಗಡಿನಾಡು ನಾಗಾಲ್ಯಾಂಡ್​' ರಾಜ್ಯ ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ ನಾಯಕರು ಮನವಿ ಸಲ್ಲಿಸಿದ್ದಾರೆ. ಈ ವಿಷಯವಾಗಿ ನಾಗಲ್ಯಾಂಡ್​ ಮುಖ್ಯಮಂತ್ರಿ ನೆಫಿಯು ರಿಯೊ ರಾಜ್ಯತ್ವ ಬೇಡಿಕೆ ತಪ್ಪಲ್ಲ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್ 2023 ರ ವಿಧಾನಸಭಾ ಚುನಾವಣೆ ನಡೆಯಲಿದೆ.

ಮಿಜೋರಾಂ​: ರಾಜ್ಯದಲ್ಲಿ ಬಿಜೆಪಿ ಮತ್ತು ಮಿಜೋ ನ್ಯಾಷನಲ್​ ಫ್ರಂಟ್(ಎಂಎನ್​ಎಫ್) ಮೈತ್ರಿ ಸರ್ಕಾರವಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್​ ಅದನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಎಂಎನ್‌ಎಫ್ ಅಧಿಕಾರಕ್ಕೆ ಬರಲು ನೋಡುತ್ತಿದೆ.

ಇದನ್ನೂ ಓದಿ:ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬೆಂಬಲಿಸುವಂತೆ ಅಮಿತ್ ಶಾ ಕರೆ

ಕರ್ನಾಟಕ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಇದ್ದಾರೆ. ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್​ ಪಕ್ಷ ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದಲ್ಲಿ ಚುನಾವಣೆಗೆ ಭಾರಿ ಸಿದ್ದತೆ ನಡೆಸುತ್ತಿದೆ. ಜೆಡಿಎಸ್‌ ಕೂಡಾ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ.

ಛತ್ತೀಸ್​ಗಢ: 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಭುಪೇಲ್​ ಬಾಘೆಲ್ ಇದ್ದಾರೆ. ಇದೀಗ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ಧತೆ ನಡೆಸುತ್ತಿದ್ದು, ಕಾಂಗ್ರೆಸ್​ ಮತ್ತೆ ಅಧಿಕಾರಕ್ಕೆ ಬರುವ ಭರವಸೆಯಲ್ಲಿದೆ.

ಮಧ್ಯಪ್ರದೇಶ: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಮುಖ್ಯಮಂತ್ರಿಯಾಗಿ ಶಿವರಾಜ್​ ಸಿಂಗ್​ ಚೌಹಾಣ್​ ಇದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ, ರಾಜ್ಯದಲ್ಲಿ ಚೌಹಾಣ್ ಅವರೇ ಚುಕ್ಕಾಣಿ ಹಿಡಿದರೂ ಸಂಪುಟ ಪುನಾರಚನೆ ಆಗಬಹುದೆಂಬ ಅನುಮಾನವಿದೆ. ಆದರೆ ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿಯುವ ಇರಾದೆಯಲ್ಲಿದೆ.

ರಾಜಸ್ಥಾನ: ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರದಲ್ಲಿದೆ. ಮುಖ್ಯಮಂತ್ರಿಯಾಗಿ ಅಶೋಕ್​ ಗೆಹ್ಲೋಟ್​ ಇದ್ದಾರೆ. ಗೆಹ್ಲೋಟ್ ಮತ್ತು ಸಚಿನ್​ ಪೈಲೆಟ್​ ನಡುವೆ ಇರುವ ಕಲಹವನ್ನು ಪಕ್ಷ​ ನಿಭಾಯಿಸಬೇಕಿದೆ. ಇದನ್ನೇ ಲಾಭವನ್ನಾಗಿ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ಇತ್ತೀಚೆಗೆ ರಾಹುಲ್​ ಗಾಂಧಿ ಭಾರತ್​ ಜೋಡೋ ಯಾತ್ರೆ ರಾಜಸ್ಥಾನಕ್ಕೆ ಆಗಮಿಸಿದ್ದ ಸಮಯದಲ್ಲಿ ಗೆಹ್ಲೋಟ್​ ಮತ್ತು ಪೈಲೆಟ್ ಜೊತೆಯಾಗಿ ರಾಹುಲ್​ ಗಾಂಧಿಯನ್ನು ಸ್ವಾಗತಿಸಿದ್ದರು. ​

ತೆಲಂಗಾಣ: ರಾಜ್ಯದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್​ಎಸ್)​ ಪಕ್ಷ ಆಡಳಿತದಲ್ಲಿದ್ದು, ಮುಖ್ಯಮಂತ್ರಿಯಾಗಿ ಕೆ.ಚಂದ್ರಶೇಖರ ರಾವ್​ ಇದ್ದಾರೆ. ಇತ್ತೀಚೆಗೆ ನಡೆದ ಮುನುಗೋಡು ಉಪಚುನಾವಣೆಯಲ್ಲಿ ಬಿಆರ್‌ಎಸ್ ಬಿಜೆಪಿಯನ್ನು ಸೋಲಿಸಿದ್ದರೂ, ಕೇವಲ 10 ಸಾವಿರ ಮತಗಳ ಅಂತರವಿತ್ತಷ್ಟೇ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಆರ್​ಎಸ್​ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ.

ಜಮ್ಮು ಮತ್ತು ಕಾಶ್ಮೀರ: ಬಿಜೆಪಿಯ ಪ್ರಮುಖರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇನ್ನೆರಡು ತಿಂಗಳಲ್ಲಿ ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಜೊತೆಗೆ ವಿರೋಧ ಪಕ್ಷಗಳು ಕೂಡ ಚುನಾವಣೆ ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ:ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರು? ರಾಹುಲ್‌ ಗಾಂಧಿ ಬಗ್ಗೆ ನಿತೀಶ್ ಕುಮಾರ್ ಹೇಳಿದ್ದಿಷ್ಟು..

Last Updated : Jan 2, 2023, 11:23 AM IST

ABOUT THE AUTHOR

...view details