ಕರ್ನಾಟಕ

karnataka

ರಸ್ತೆ ಅಪಘಾತ ಬಳಿಕ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಅದಾ ಶರ್ಮಾ

By

Published : May 15, 2023, 5:24 PM IST

ಬಾಲಿವುಡ್​​ ನಟಿ ಅದಾ ಶರ್ಮಾ ಮತ್ತು ನಿರ್ದೇಶಕ ಸುದಿಪ್ತೋ ಸೇನ್​ ಅವರು ಭಾನುವಾರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

the-kerala-story-lead-adah-sharma-shares-health-update-after-road-accident
ರಸ್ತೆ ಅಪಘಾತ ಬಳಿಕ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಅದಾ ಶರ್ಮಾ

ಹೈದರಾಬಾದ್ :ಬಾಲಿವುಡ್​​ ನಟಿ ಅದಾ ಶರ್ಮಾ ಅಭಿನಯದ "ದಿ ಕೇರಳ ಸ್ಟೋರಿ" ಸಿನೆಮಾ ದೇಶಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ತಮ್ಮ ಅದ್ಭುತ ಅಭಿನಯದ ಮೂಲಕ ಅದಾ ಶರ್ಮಾ ಎಲ್ಲರ ಮನಸ್ಸು ಗೆದ್ದಿದ್ದಾರೆ. ದೇಶದೆಲ್ಲೆಡೆ ಸಿನೆಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಈ ಸಿನೆಮಾಗೆ ತೆರಿಗೆ ಮುಕ್ತಗೊಳಿಸಲಾಗಿದೆ. ಇನ್ನೊಂದೆಡೆ ಕೇರಳ ಮತ್ತು ಪಶ್ಚಿಮ ಬಂಗಾಳ ಸೇರಿ ವಿವಿಧೆಡೆ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಿನೆಮಾವು ಬಿಡುಗಡೆಯಾದ ಕೇವಲ 10 ದಿನದಲ್ಲೇ 135 ಕೋಟಿ ರೂಪಾಯಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ.

ಭಾನುವಾರ ಬಾಲಿವುಡ್​ ನಟಿ ಅದಾ ಶರ್ಮಾ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ದಿ ಕೇರಳ ಸ್ಟೋರಿ ಸಿನೆಮಾ ನಿರ್ದೇಶಕ ಸುದಿಪ್ತೋ ಸೇನ್​ ಅವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ದಿ ಕೇರಳ ಸ್ಟೋರಿ ಚಿತ್ರ ತಂಡವು ತೆಲಂಗಾಣದ ಕರೀಂನಗರದಲ್ಲಿ ಹಮ್ಮಿಕೊಂಡಿದ್ದ ಹಿಂದು ಏಕ್ತಾ ಯಾತ್ರೆಗೆ ಆಗಮಿಸುತ್ತಿದ್ದರು. ಈ ವೇಳೆ ಇವರ ವಾಹನ ಅಪಘಾತವಾಗಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಕರೀಂನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಕ್ತಾ ಯಾತ್ರೆಯನ್ನು ರದ್ದುಗೊಂಡಿದೆ ಎಂದು ತಿಳಿದುಬಂದಿದೆ.

ಅಪಘಾತದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಅದಾ ಶರ್ಮಾ, ತಮಗಾಗಿ ಪ್ರಾರ್ಥಿಸಿದ ಎಲ್ಲಾ ಹಿಂಬಾಲಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಮ್ಮ ಚಿತ್ರ ತಂಡದ ಎಲ್ಲರೂ ಚೆನ್ನಾಗಿದ್ದಾರೆ ಎಂದು ಹೇಳಿದ್ದಾರೆ. ಟ್ವಿಟ್ಟರ್​ನಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಅದಾ ಶರ್ಮಾ, ನಾನು ಚೆನ್ನಾಗಿದ್ದೇನೆ. ನಮ್ಮ ಅಪಘಾತದ ಬಗ್ಗೆ ಹರಡಿರುವ ಸುದ್ದಿಯಿಂದಾಗಿ ತುಂಬಾ ಸಂದೇಶಗಳು, ಕರೆಗಳು ಬರುತ್ತಿವೆ. ನಮ್ಮ ಸಿನೆಮಾ ತಂಡ ಮತ್ತು ಎಲ್ಲರೂ ಚೆನ್ನಾಗಿದ್ದಾರೆ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಜೊತೆಗೆ ನಿರ್ದೇಶಕ ಸುದಿಪ್ತೋ ಸೇನ್​ ಕೂಡ ಈ ಬಗ್ಗೆ ಟ್ವೀಟ್​ ಮಾಡಿದ್ದು, ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ನಮ್ಮ ಆರೋಗ್ಯದ ಕುರಿತ ನಿಮ್ಮ ಕಾಳಜಿಗೆ ತುಂಬಾ ಧನ್ಯವಾದಗಳು. ನಾವೆಲ್ಲ ತುಂಬಾ ಚೆನ್ನಾಗಿದ್ದೇವೆ. ನಾವು ನಮ್ಮ ಪ್ರಚಾರ ಕಾರ್ಯವನ್ನು ಪುನಾರಂಭಿಸುತ್ತೇವೆ. ನಿಮ್ಮ ಪ್ರೀತಿ, ಬೆಂಬಲ ಹೀಗೆಯೇ ಇರಲಿ ಎಂದು ಹೇಳಿದ್ದಾರೆ.

ಇನ್ನು, ಈ "ದಿ ಕೇರಳ ಸ್ಟೋರಿ" ಸಿನೆಮಾವು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಎಸ್ಐಎಸ್) ಗೆ ಕಳ್ಳಸಾಗಣೆ ಮಾಡಲ್ಪಟ್ಟ ಮತ್ತು ಇಸ್ಲಾಂಗೆ ಮತಾಂತರಗೊಂಡ ಮಹಿಳೆಯರ ಕಥೆಯನ್ನು ವಿವರಿಸುತ್ತದೆ. ದಿ ಕೇರಳ ಸ್ಟೋರಿ ಸಿನೆಮಾವು ಕೇವಲ 10 ದಿನದಲ್ಲೇ ಬಾಕ್ಸ್ ಆಫೀಸ್​ನಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಮೇ 5 ರಂದು ಚಿತ್ರ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ :ಇದು ನನ್ನ ಕೊನೆಯ ಚಿತ್ರ ಅಂತಾನೇ ನಾನು ಕೆಲಸ ಮಾಡುವುದು: ಕೇರಳ ಸ್ಟೋರಿ ಸ್ಟಾರ್ ಅದಾ ಶರ್ಮಾ

ABOUT THE AUTHOR

...view details