ಮುಂಬೈ: 'ಕ್ರಿಕೆಟ್ ದೇವರು' ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಬಡ ಯುವತಿಯೊಬ್ಬಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ನೀಡಿದ್ದಾರೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಝಾರಿ ಗ್ರಾಮದ ವಿದ್ಯಾರ್ಥಿನಿ ದೀಪ್ತಿ ವಿಶ್ವಾಸ್ಗೆ ವೈದ್ಯಕೀಯ ಶಿಕ್ಷಣ ಪಡೆಯಲು ಸಚಿನ್ ಧನಸಹಾಯ ಮಾಡಿದ್ದಾರೆ. ಬಡತನದಲ್ಲಿ ಬೆಳೆದು ಬಂದಿರುವ ದೀಪ್ತಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಲಾಕ್ಡೌನ್ ವೇಳೆ ಆನ್ಲೈನ್ ಶಿಕ್ಷಣ ಪಡೆಯುವ ಸಲುವಾಗಿ ಇವರು ಕುಗ್ರಾಮದಿಂದ ಕಿಲೋಮೀಟರ್ಗಳಷ್ಟು ದೂರ ಹೋಗಿ ನೆಟ್ವರ್ಕ್ ಸಿಗುವ ಸ್ಥಳದಲ್ಲಿ ಕುಳಿತು ಆನ್ಲೈನ್ ಕ್ಲಾಸ್ ಕೇಳುತ್ತಿದ್ದರು.
ಹೀಗೆ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದ ಫಲವಾಗಿ ಎನ್ಇಇಟಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದರು. ಅಲ್ಲದೆ ಅಕೋಲಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್ ಕೂಡ ಪಡೆದುಕೊಂಡಿದ್ದಾರೆ. ಆದರೆ, ತಮ್ಮ ಕುಟುಂಬದಲ್ಲಿ ಹಣಕಾಸಿನ ಸಮಸ್ಯೆ ತೀವ್ರವಾಗಿದ್ದ ಕಾರಣ ಅವರಿಗೆ ಕಾಲೇಜಿನ ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ. ಇನ್ನೇನು ವೈದ್ಯಕೀಯ ಶಿಕ್ಷಣ ಕೊನೆಯಾಗಿಬಿಡುತ್ತೇನೋ ಎನ್ನುವಷ್ಟರಲ್ಲಿ ಅವರಿಗೆ ಸಚಿನ್ ತೆಂಡೂಲ್ಕರ್ ಪ್ರತಿಷ್ಠಾನದಿಂದ ಸ್ಕಾಲರ್ಶಿಪ್ ದೊರೆತಿದೆ.