ಕರ್ನಾಟಕ

karnataka

ತೆಲಂಗಾಣ ವಿಧಾನಸಭಾ ಚುನಾವಣೆ: 9 ಕ್ಷೇತ್ರಗಳಲ್ಲಿ ಎಐಎಂಐಎಂ ಕಣಕ್ಕೆ..

By PTI

Published : Nov 3, 2023, 10:55 PM IST

ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹೆಸರನ್ನು ಅಧ್ಯಕ್ಷ ಅಸಾದುದ್ದೀನ್ ಓವೈಸಿ ಶುಕ್ರವಾರ ಪ್ರಕಟಿಸಿದರು.

Telangana polls: AIMIM to contest nine seats
Telangana polls: AIMIM to contest nine seats

ಹೈದರಾಬಾದ್​: ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ 9 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್- ಎ -ಇತ್ತೆಹಾದುಲ್ ಮುಸ್ಲಿಮೀನ್) ಘೋಷಿಸಿದೆ. ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ವಿವರಗಳನ್ನು ಶುಕ್ರವಾರ ಬಹಿರಂಗಪಡಿಸಿದರು.

''ಚಂದ್ರಾಯನಗುಟ್ಟ ಮತಕ್ಷೇತ್ರದಿಂದ ಅಕ್ಬರುದ್ದೀನ್ ಓವೈಸಿ, ನಾಂಪಲ್ಲಿಯಿಂದ ಮಾಜಿದ್ ಹುಸೇನ್, ಚಾರ್ಮಿನಾರ್‌ನಿಂದ ಮಾಜಿ ಮೇಯರ್ ಜುಲ್ಫಿಕರ್, ಯಾಕತ್‌ಪುರದಿಂದ ಜಾಫರ್ ಹುಸೇನ್ ಮಿರಾಜ್ ಸ್ಪರ್ಧಿಸಲಿದ್ದಾರೆ. ಅಹ್ಮದ್ ಬಲಾಲ್​ ಮಲಕಪೇಟ್​ದಿಂದ ಮತ್ತು ಕೌಸರ್ ಮೊಯಿನುದ್ದೀನ್ ಕಾರ್ವಾನ್‌ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಬಹದ್ದೂರ್‌ಪುರ, ಜುಬ್ಲಿ ಹಿಲ್ಸ್ ಮತ್ತು ರಾಜೇಂದ್ರನಗರ ಕ್ಷೇತ್ರಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಇನ್ನೆರಡು ದಿನಗಳಲ್ಲಿ ಚುನಾವಣಾ ಪ್ರಚಾರ ಆರಂಭಿಸಲಾಗುವುದು'' ಎಂದು ಓವೈಸಿ ಹೇಳಿದರು.

ಇದೇ ವೇಳೆ, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ''ಉಭಯ ಪಕ್ಷಗಳ ನಾಯಕರು ಸುಳ್ಳಿನ ಕೋಟೆ ಕಟ್ಟಿದ್ದಾರೆ. ತಮ್ಮದು ಜಾತ್ಯತೀತ ಪಕ್ಷಗಳೆಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಾಬರಿ ಮಸೀದಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಎಲ್ಲರಿಗೂ ಗೊತ್ತು. ಬಾಬರಿ ಮಸೀದಿ ಘಟನೆಯಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕನಿಗೆ ಶಿಕ್ಷೆಯಾಗಿಲ್ಲ. ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮತ್ತು ಆರ್​ಎಸ್​ಎಸ್​ ನಷ್ಟೇ ಕಾಂಗ್ರೆಸ್ ಸಮಪಾಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಹಿಂದುತ್ವದ ಸಿದ್ಧಾಂತದ ಮೇಲೆ ಕೆಲಸ ಮಾಡುತ್ತವೆ'' ಎಂದು ಅವರು ಆರೋಪ ಮಾಡಿದರು.

''ಇತ್ತೀಚೆಗೆ ನೀಡದ ಕಮಲ್ ನಾಥ್ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಬಾಬರಿ ಮಸೀದಿ ಧ್ವಂಸದಲ್ಲಿ ಕಾಂಗ್ರೆಸ್‌ಗೆ ಸಮಾನ ಪಾತ್ರವಿದೆ ಎಂದು ಕಮಲ್ ನಾಥ್ ಮತ್ತೊಮ್ಮೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಕಮಲ್ ನಾಥ್ ಮತದಾರರ ಮುಂದೆ ಆಟವಾಡುತ್ತಿದ್ದಾರೆ. ರಾಹುಲ್ ಗಾಂಧಿಯ ತಂದೆಯ ಕಾಲದಲ್ಲಿ ಏನಾಗಿದೆ ಅನ್ನೋದು ದೇಶದ ಜನ ಮರೆತಿಲ್ಲ. ಜನವರಿಯಲ್ಲಿ ಉದ್ಘಾಟನೆ ಆಗಲಿರುವ ಅಯೋಧ್ಯಾ ಮಂದಿರದ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿಯನ್ನು ಕರೆದುಕೊಂಡು ಹೋಗಲಿದ್ದಾರಂತೆ. ಅದು ಅವರ (ರಾಹುಲ್ ಗಾಂಧಿ) ತಂದೆ ಪ್ರಾರಂಭಿಸಿದ ಕೆಲಸ. ಮೋದಿ ಅದನ್ನು ಪೂರ್ಣಗೊಳಿಸುತ್ತಿದ್ದಾರೆ. ಹಾಗಾಗಿ 'ರಾಮ್-ಶ್ಯಾಮ್' ಅಲ್ಲಿ ಒಂದಾಗಲಿದ್ದಾರೆ'' ಎಂದು ಓವೈಸಿ ವ್ಯಂಗ್ಯವಾಡಿದರು.

''ಭಾರತ್ ಜೋಡೋ ಹೆಸರಿನಲ್ಲಿ ರಾಹುಲ್ ಗಾಂಧಿ ಎಷ್ಟು ಸುಳ್ಳು ಹೇಳಿಲ್ಲ? ಅವರ ಸುಳ್ಳುಗಳನ್ನು ಜನ ಗಮನಿಸಿದ್ದಾರೆ. ಕಾಂಗ್ರೆಸ್​ 60 ವರ್ಷಗಳ ಕಾಲ ದೇಶ ಮತ್ತು ರಾಜ್ಯಗಳನ್ನು ಆಳಿದ್ದು ಹೀಗೆ ಅಲ್ಲವೇ?. ರಾಹುಲ್ ಗಾಂಧಿ ಹೈದರಾಬಾದ್​ ಜನರಿಂದ ತೆಗೆದುಕೊಂಡು ಹೋದ ಹಣವನ್ನು ಹಿಂದಿರುಗಿಸುವುದಾಗಿ ಹೇಳಿದ್ದರು. ಈವರೆಗೂ ನೀಡಿಲ್ಲ. ಅವರು ಮೋದಿಯ 2.O ಆಗಿದ್ದಾರೆ. 2014 ರಲ್ಲಿ ಪ್ರಧಾನಿ ಮೋದಿ ಇದೇ ರೀತಿಯ ಭರವಸೆ ನೀಡಿದ್ದರು. ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಹೇಳಿದ್ದರು. ಈವರೆಗೂ 15 ಪೈಸೆಯೂ ಬಂದಿಲ್ಲ. ಅವರು ಅದೇ ಡೈಲಾಗ್ ಹೇಳುತ್ತಿದ್ದಾರೆ'' ಎಂದು ಟೀಕಿಸಿದರು.

ಇದನ್ನೂ ಓದಿ:ತೆಲಂಗಾಣದಲ್ಲಿ ಚುನಾವಣೆಗೆ ಸ್ಪರ್ಧಿಸಲ್ಲ, ಕಾಂಗ್ರೆಸ್​ ಬೆಂಬಲಿಸುತ್ತೇವೆ: ವೈಎಸ್​ಆರ್​ಟಿಪಿ ಅಧ್ಯಕ್ಷೆ ಶರ್ಮಿಳಾ

ABOUT THE AUTHOR

...view details