ಕರ್ನಾಟಕ

karnataka

Falaknuma Express: ಫಲಕ್ನುಮಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾರಿ ಬೆಂಕಿ; 4 ಬೋಗಿಗಳು ಸುಟ್ಟು ಕರಕಲು

By

Published : Jul 7, 2023, 12:34 PM IST

Updated : Jul 7, 2023, 3:10 PM IST

ಫಲಕ್ನುಮಾ ಎಕ್ಸ್‌ಪ್ರೆಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ನಾಲ್ಕು ಬೋಗಿಗಳು ಸಂಪೂರ್ಣ ಸುಟ್ಟು ಹೋಗಿವೆ.

Telangana Falaknuma Express catches fire four bogies burnt no loss of life
Telangana Falaknuma Express catches fire four bogies burnt no loss of life

ಫಲಕ್ನುಮಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾರಿ ಬೆಂಕಿ

ಹೈದರಾಬಾದ್ (ತೆಲಂಗಾಣ):ಫಲಕ್ನುಮಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡು ನಾಲ್ಕು ಬೋಗಿಗಳು ಸುಟ್ಟು ಕರಕಲಾದ ಘಟನೆ ಇಂದು ನಡೆದಿದೆ. ಯಾದಾದ್ರಿ ಭುವನಗಿರಿ ಜಿಲ್ಲೆಯ ಪಗಿಡಿಪಲ್ಲಿ ಮತ್ತು ಬೊಮ್ಮಾಯಿಪಲ್ಲಿ ನಡುವೆ ಅವಘಡ ಸಂಭವಿಸಿತು. ವಿಷಯ ತಿಳಿದ ತಕ್ಷಣ ರೈಲ್ವೇ ಸಿಬ್ಬಂದಿ ರೈಲು ನಿಲ್ಲಿಸಿ ಎರಡೂ ಬೋಗಿಗಳಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಹೀಗಾಗಿ ಪ್ರಾಣಾಪಾಯ ತಪ್ಪಿದೆ. ಅಪಾರ ಪ್ರಮಾಣದ ಬೆಂಕಿ 5 ಮತ್ತು 6ನೇ ಬೋಗಿಗೆ ಹರಡಿಕೊಂಡಿತು. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೋಗಿಗಳ ನಡುವಿನ ಸಂಪರ್ಕವನ್ನು ಬೇರ್ಪಡಿಸಿ ರೈಲು ಮುಂದಕ್ಕೆ ಸರಿಸಿದ್ದಾರೆ.

ಅಗ್ನಿಶಾಮಕ ವಾಹನಗಳು ಸ್ಥಳ ತಲುಪಲು ಸರಿಯಾದ ರಸ್ತೆ ಮಾರ್ಗವಿಲ್ಲದ ಬೆಂಕಿ ನಂದಿಸುವ ಪ್ರಕ್ರಿಯೆ ತಡವಾಯಿತು. ಸ್ಥಳೀಯ ಪೊಲೀಸರು ಮತ್ತು ಆರ್‌ಡಿಒ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತಲುಪಿದ್ದರು. ಮತ್ತೊಂದೆಡೆ, ರೈಲ್ವೆ ಜಿಎಂ ಅರುಣ್ ಕುಮಾರ್ ಜೈನ್ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಆರ್‌ಡಿಒ ಭೂಪಾಲ್ ರೆಡ್ಡಿ ಅವರು ಘಟನಾ ಸ್ಥಳದಿಂದ ರೈಲ್ವೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಬೋಗಿಗಳ ಕೊಂಡಿ ತಪ್ಪಿರುವುದರಿಂದ ಇತರ ಬೋಗಿಗಳಿಗೂ ಬೆಂಕಿ ತಗುಲುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದರು.

ಮತ್ತೊಂದೆಡೆ, ಬದುಕುಳಿದಿರುವ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅವರ ಸಾಮಾಗ್ರಿಗಳು ಸುಟ್ಟುಹೋಗಿವೆ ಎಂದು ತಿಳಿದುಬಂದಿದೆ. ಉದ್ಯೋಗನಿಮಿತ್ತ ಹೈದರಾಬಾದ್‌ಗೆ ಹೋಗುತ್ತಿದ್ದು, ಎಲ್ಲ ಸರ್ಟಿಫಿಕೇಟ್‌ಗಳನ್ನು ರೈಲಿನಲ್ಲಿ ಬಿಟ್ಟು ಹೋಗಿರುವುದಾಗಿ ಯುವತಿಯೊಬ್ಬರು ಅಳಲು ತೋಡಿಕೊಂಡರು. ಅಪಘಾತದ ಮಾಹಿತಿ ತಿಳಿದ ರೈಲ್ವೇ ಅಧಿಕಾರಿಗಳು ಅಲ್ಲಿಂದ ಹೈದರಾಬಾದ್‌ಗೆ ಪ್ರಯಾಣಿಕರನ್ನು ಸಾಗಿಸಲು 6 ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆ. ಉಳಿದ ಪ್ರಯಾಣಿಕರನ್ನು ಕರೆತರಲು ಸಿಕಂದರಾಬಾದ್‌ನಿಂದ ಲೋಕಮಾನ್ಯ ತಿಲಕ್ ರೈಲು ಸ್ಥಳಕ್ಕೆ ತೆರಳಿದೆ.

ಫಲಕ್‌ನುಮಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಅವಘಡದ ಬಗ್ಗೆ ಸಿಪಿಆರ್‌ಒ ರಾಕೇಶ್ ಪ್ರತಿಕ್ರಿಯಿಸಿದ್ದು, ತನಿಖೆಯ ನಂತರವಷ್ಟೇ ಅಪಘಾತಕ್ಕೆ ಕಾರಣ ಹೇಳಬಹುದು. ಅಪಘಾತಕ್ಕೂ, ಇತ್ತೀಚೆಗೆ ಬಂದ ಬೆದರಿಕೆ ಪತ್ರಕ್ಕೂ ಯಾವುದೇ ಸಂಬಂಧವಿಲ್ಲ. ಬೆದರಿಕೆ ಪತ್ರದ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದಿದ್ದಾರೆ. ಇತ್ತಿಚೆಗೆ ಒಂದು ಬೆದರಿಕೆ ಪತ್ರ ಬಂದಿದ್ದು, ಅದರಲ್ಲಿ, ಹೈದರಾಬಾದ್-ದೆಹಲಿ ಮಾರ್ಗದಲ್ಲಿ ಒಡಿಶಾ ಮಾದರಿಯ ರೈಲು ದುರಂತ ಸಂಭವಿಸಲಿದೆ ಎಂದು ಬರೆಯಲಾಗಿತ್ತು.

ಇತ್ತೀಚೆಗೆ ಒಡಿಶಾದಲ್ಲಿ ಭೀಕರ ರೈಲು ದುರಂತ ನಡೆದಿದ್ದು ಯಾರ ಸ್ಮೃತಿ ಪಟಲದಿಂದಲೂ ಮಾಸಿಲ್ಲ. ಇದರ ಬೆನ್ನಲ್ಲೇ ಅಲ್ಲಲ್ಲಿ ಸಣ್ಣ ಪುಟ್ಟ ರೈಲ್ವೆ ದುರಂತಗಳು ವರದಿಯಾಗುತ್ತಿವೆ. ಒಡಿಶಾದ ಬಾಲಸೋರ್‌ ತ್ರಿವಳಿ ರೈಲು ದುರಂತಕ್ಕೆ 'ಮಾನವ ಲೋಪ'ವೇ ಕಾರಣ ಎಂದು ವರದಿಯಾಗಿದೆ. ಮೂರು ರೈಲುಗಳ ನಡುವಿನ ತಿಕ್ಕಾಟದಲ್ಲಿ 290 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಲೆಕ್ಕ ಸಿಕ್ಕಿದೆ.

ಅಂದು ನಡೆದ ತ್ರಿವಳಿ ರೈಲು ದುರಂತ: ಜೂನ್​ 2ರಂದು (ಶುಕ್ರವಾರ) ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್​ ರೈಲು ಚಲಿಸುತ್ತಿದ್ದಾಗಲೇ ಹಳಿ ತಪ್ಪಿತ್ತು. ಇದರಿಂದ ಇನ್ನೊಂದು ಲೈನ್​ನಲ್ಲಿ ನಿಂತಿದ್ದ ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರ ರಭಸಕ್ಕೆ ಗೂಡ್ಸ್​ ಮತ್ತು ಕೋರಮಂಡಲ್​ ರೈಲಿನ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದಿದ್ದವು. ಅದೇ ಸಮಯಕ್ಕೆ ವಿರುದ್ಧ ದಿಕ್ಕಿನಿಂದ ಎಸ್‌ಎಂವಿಪಿ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಯಶವಂತಪುರದಿಂದ ಬಂದ ಹೌರಾ ಎಕ್ಸ್​ಪ್ರೆಸ್​ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ವೇಗವಾಗಿ ಡಿಕ್ಕಿಯಾಗಿತ್ತು.

ಇದನ್ನೂ ಓದಿ:ಅಂತ್ಯಸಂಸ್ಕಾರದ ವೇಳೆ ರುದ್ರಭೂಮಿಗೆ ನುಗ್ಗಿದ ಮಳೆ ನೀರು; ಜನರ ಪರದಾಟ

Last Updated : Jul 7, 2023, 3:10 PM IST

ABOUT THE AUTHOR

...view details