ಕರ್ನಾಟಕ

karnataka

ETV Bharat / bharat

ತಾಂಜೇನಿಯಾ ಅಧ್ಯಕ್ಷೆ ಸಮಿಯಾ ಹಸನ್​ಗೆ ಜೆಎನ್​ಯು ಡಾಕ್ಟರೇಟ್ ಪ್ರದಾನ; ಈ ಗೌರವ ಪಡೆದ ಮೊದಲ ಮಹಿಳೆ

ದೆಹಲಿ ಜೆಎನ್​ಯು ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಿದೆ. ತಾಂಜೇನಿಯಾ ಅಧ್ಯಕ್ಷೆ ಈ ಗೌರವಕ್ಕೆ ಪಾತ್ರರಾದರು.

By ETV Bharat Karnataka Team

Published : Oct 10, 2023, 6:25 PM IST

ತಾಂಜೇನಿಯಾ ಅಧ್ಯಕ್ಷೆಗೆ ಜೆಎನ್​ಯು ಡಾಕ್ಟ್​ರೇಟ್​
ತಾಂಜೇನಿಯಾ ಅಧ್ಯಕ್ಷೆಗೆ ಜೆಎನ್​ಯು ಡಾಕ್ಟ್​ರೇಟ್​

ನವದೆಹಲಿ:ಸೈದ್ಧಾಂತಿಕ ಸಂಘರ್ಷದಿಂದಲೇ ಹೆಚ್ಚು ಸುದ್ದಿಯಲ್ಲಿರುವ ಇಲ್ಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್​ಯು) ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಗೌರವ ಡಾಕ್ಟರೇಟ್​ ಪದವಿ ಪ್ರದಾನ ಮಾಡಿತು. ತಾಂಜೇನಿಯಾದ ಅಧ್ಯಕ್ಷೆ ಸಮಿಯಾ ಸುಲುಹು ಹಸನ್ ಅವರಿಗೆ ಮಂಗಳವಾರ ಡಾಕ್ಟರೇಟ್​ ನೀಡಲಾಗಿದೆ.

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಧ್ಯಕ್ಷೆ ಸಮಿಯಾ ಅವರು ಭಾರತ ಮತ್ತು ತಾಂಜೇನಿಯಾ ಸಂಬಂಧಗಳ ವೃದ್ಧಿ, ಆರ್ಥಿಕ, ರಾಜತಾಂತ್ರಿಕತೆಯ ಉತ್ತೇಜನ, ಪ್ರಾದೇಶಿಕ ಏಕೀಕರಣ ಮತ್ತು ಬಹುಪಕ್ಷೀಯತೆಯಲ್ಲಿ ಸಾಧಿಸಿದ ಯಶಸ್ಸಿಗೆ ಈ ಗೌರವ ನೀಡಿ ಪುರಸ್ಕರಿಸಲಾಗಿದೆ.

ಡಾಕ್ಟರೇಟ್​ ಪಡೆದ ಬಳಿಕ ಮಾತನಾಡಿದ ತಾಂಜೇನಿಯಾ ಅಧ್ಯಕ್ಷೆ, ಭಾರತದ ಹಾಡು, ಸಿನಿಮಾ, ಆಹಾರ ಎಲ್ಲವೂ ನನ್ನನ್ನು ಮೋಡಿ ಮಾಡಿದೆ. ನಾನು ಮೊದಲ ಬಾರಿಗೆ ಭಾರತಕ್ಕೆ ಬಂದಾಗ ಇಂತಹ ಅನುಭೂತಿಯನ್ನು ಅನುಭವಿಸಿದ್ದೇನೆ. ದೇಶ ಎಂದಿಗೂ ಪ್ರೀತಿಯನ್ನು ಹಂಚಿದೆ. ನಾನೀಗ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕುಟುಂಬ ಸದಸ್ಯಳು. ಇನ್ನು ಮುಂದೆ ಭೇಟಿ ನೀಡುವಾಗ ಅತಿಥಿಯಾಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ ಭಾರತ ಯಾವಾಗಲೂ ಸಾಥ್​ ನೀಡಿದೆ. ಪರಿಣಾಮಕಾರಿ ಧನಾತ್ಮಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ನಾವು ಧ್ವನಿಯಾಗಬೇಕು. ಶ್ರೇಷ್ಠ ವಿಶ್ವವಿದ್ಯಾನಿಲಯದಿಂದ ನಾನು ಈ ಗೌರವಕ್ಕೆ ಪಾತ್ರವಾಗಿದ್ದು ಹೆಮ್ಮೆ ತಂದಿದೆ. ವಿದೇಶಿ ವಿಶ್ವವಿದ್ಯಾನಿಲಯವೊಂದು ನೀಡಿದ ಮೊದಲ ಗೌರವ ಇದಾಗಿದೆ ಎಂದು ಅವರು ಹೇಳಿದರು.

ಶತಮಾನಗಳ ಹಳೆಯ ಸಂಬಂಧ:ಇದೇ ವೇಳೆ ಮಾತನಾಡಿದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್, ಎರಡು ದೇಶಗಳ ನಡುವಿನ ಸಂಬಂಧಗಳು ಬಲವಾಗಿವೆ. ತಾಂಜೇನಿಯಾ ಜೊತೆಗಿನ ವ್ಯಾಪಾರ ಸಂಬಂಧವು ಹಲವಾರು ಶತಮಾನಗಳ ಹಿಂದಿನದು. ಜಾಗತಿಕ ಅಡಚಣೆ ಮತ್ತು ಕೋವಿಡ್​ ಸಾಂಕ್ರಾಮಿಕ ಸವಾಲುಗಳ ನಡುವೆಯೂ ದ್ವಿಪಕ್ಷೀಯ ವ್ಯಾಪಾರವು ಗಮನಾರ್ಹ ಬೆಳವಣಿಗೆ ಕಂಡಿದೆ ಎಂದು ಹೇಳಿದರು.

ಘಟಿಕೋತ್ಸವವನ್ನು ನಾರಿ ಶಕ್ತಿ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯ ಅಮೃತಕಾಲ ಎಂದು ಕರೆದ ಜೆಎನ್​ಯು ಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್, ಜಿ20 ಶೃಂಗಸಭೆಯ ಯಶಸ್ಸು ಮತ್ತು ರಾಷ್ಟ್ರೀಯ ಶಿಕ್ಷಣದತ್ತ ಭಾರತ ದಾಪುಗಾಲು ಇಡುತ್ತಿರುವುದನ್ನು ಶ್ಲಾಘಿಸಿದರು.

ಸಂಗೀತಕ್ಕೆ ಮನಸೋತ ಅಧ್ಯಕ್ಷೆ:ಭಾರತ ಪ್ರವಾಸದಲ್ಲಿರುವ ತಾಂಜೇನಿಯಾದ ಅಧ್ಯಕ್ಷೆ ಸಮಿಯಾ ಸುಲುಹು ಹಸನ್​ ಮತ್ತು ಅಧಿಕಾರಿಗಳ ನಿಯೋಗ ದೆಹಲಿಯ ಹೈದರಾಬಾದ್​ ನಿವಾಸದಲ್ಲಿ ತಾಂಜೇನಿಯಾ ಸಂಗೀತವನ್ನು ಆನಂದಿಸಿ ಕುಣಿದು ಸಂಭ್ರಮಿಸಿದ್ದರು. ಭೋಜನಕೂಟದ ವೇಳೆ ಭಾರತದ ಕಲಾವಿದರು ತಾಂಜೇನಿಯಾ ಸಂಗೀತ ನುಡಿಸಿದರು. ಇದಕ್ಕೆ ಮನಸೋತ ಅಧ್ಯಕ್ಷೆ ಸಮಿಯಾ ಮತ್ತು ಅಧಿಕಾರಿಗಳು ನೃತ್ಯ ಮಾಡುತ್ತಾ ಸಂಗೀತವನ್ನು ಆಸ್ವಾದಿಸಿದರು. ಇದರ ಜೊತೆಗೆ ಸಾಮಿಯಾ ಸುಲುಹು ಅವರು ರಾಜ್‌ಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು.

ಇದನ್ನೂ ಓದಿ:ಭಾರತೀಯ ಕಲಾವಿದರು ನುಡಿಸಿದ ಸಂಗೀತಕ್ಕೆ ಮನಸೋತ ತಾಂಜೇನಿಯಾ ಅಧ್ಯಕ್ಷೆ: ವಿಡಿಯೋ

ABOUT THE AUTHOR

...view details