ಕರ್ನಾಟಕ

karnataka

ETV Bharat / bharat

ಬಂಡೆದ್ದ ಶಿವಸೇನೆ, ಎನ್​ಸಿಪಿ ಶಾಸಕರ ಅನರ್ಹತೆ ಪ್ರಕರಣ: ಮಹಾರಾಷ್ಟ್ರ ಸ್ಪೀಕರ್​ಗೆ ಅಂತಿಮ ಗಡುವು ನೀಡಿದ ಸುಪ್ರೀಂ ಕೋರ್ಟ್​ - ಸುಪ್ರೀಂಕೋರ್ಟ್

ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ವಿಪ್ಲವ ಶುರುವಾಗುವ ಲಕ್ಷಣಗಳು ಕಾಣಿಸುತ್ತಿವೆ. ಬಂಡೆದ್ದ ಶಿವಸೇನೆ ಮತ್ತು ಎನ್​ಸಿಪಿ ಶಾಸಕರ ಅನರ್ಹತೆಯನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ಇಂದು​ ಅಂತಿಮ ಗಡುವು ನೀಡಿತು.

ಮಹಾರಾಷ್ಟ್ರ ಸ್ಪೀಕರ್​ಗೆ ಅಂತಿಮ ಗಡುವು ನೀಡಿದ ಸುಪ್ರೀಂಕೋರ್ಟ್​
ಮಹಾರಾಷ್ಟ್ರ ಸ್ಪೀಕರ್​ಗೆ ಅಂತಿಮ ಗಡುವು ನೀಡಿದ ಸುಪ್ರೀಂಕೋರ್ಟ್​

By PTI

Published : Oct 30, 2023, 3:55 PM IST

ನವದೆಹಲಿ:ಈಗಿನ ಸಿಎಂ ಏಕನಾಥ್​ ಶಿಂಧೆ ನೇತೃತ್ವದಲ್ಲಿ ಕಳೆದ ವರ್ಷ (2022) ಶಿವಸೇನೆಯಿಂದ ಬಂಡೆದ್ದು ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿರುವ 38 ಶಾಸಕರ ಅನರ್ಹತೆಯನ್ನು ಡಿಸೆಂಬರ್​ 31ರೊಳಗೆ ಇತ್ಯರ್ಥ ಮಾಡಬೇಕು. ಜೂನ್​ನಲ್ಲಿ ಎನ್​ಸಿಪಿಯಿಂದ ಬಂಡೆದ್ದ ಡಿಸಿಎಂ ಅಜಿತ್​​ ಪವಾರ್​ ಸೇರಿದಂತೆ 9 ಎನ್​ಸಿಪಿ ಶಾಸಕರ ಅನರ್ಹತೆಯ ಕುರಿತು 2024 ರ ಜನವರಿ 31ರೊಳಗೆ ಅಂತಿಮ ತೀರ್ಪು ನೀಡಬೇಕು ಎಂದು ಮಹಾರಾಷ್ಟ್ರ ಸ್ಪೀಕರ್​ ರಾಹುಲ್ ನಾರ್ವೇಕರ್ ಅವರಿಗೆ ಸುಪ್ರೀಂ ಕೋರ್ಟ್​ ಸೋಮವಾರ ಅಂತಿಮ ಗಡುವು ವಿಧಿಸಿದೆ.

ಶಿವಸೇನೆಯ ಏಕನಾಥ್​ ಶಿಂಧೆ ಬಣ ಮತ್ತು ಉದ್ಧವ್​ ಠಾಕ್ರೆ ಬಣಗಳ ಶಾಸಕರು ಪರಸ್ಪರ ಅನರ್ಹತೆಗೆ ಅರ್ಜಿ ಸಲ್ಲಿಸಿದ್ದವು. ಇದು ವರ್ಷದಿಂದ ಹಾಗೆಯೇ ಉಳಿದುಕೊಂಡಿದೆ. ಸ್ಪೀಕರ್​ ವಿಳಂಬ ಧೋರಣೆ ವಿರುದ್ಧ ಉದ್ಧವ್​ ಠಾಕ್ರೆ ಬಣ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಈ ಹಿಂದೆ ಹಲವು ಗಡುವು ನೀಡಿತ್ತು. ಆದರೆ, ಮಹಾರಾಷ್ಟ್ರ ಸ್ಪೀಕರ್​ ಯಾವುದೇ ನಿರ್ಧಾರಕ್ಕೆ ಬಾರದ ಕಾರಣ ಇದೀಗ ಅಂತಿಮ ಗಡುವು ನೀಡಿದೆ.

ಸಂವಿಧಾನದ 10ನೇ ಶೆಡ್ಯೂಲ್‌ ಪಾವಿತ್ರ್ಯತೆ ಉಳಿಸಿ:ಇಂದಿನವಿಚಾರಣೆಯಲ್ಲಿ, ಪಕ್ಷಾಂತರ ವಿರೋಧದ ಬಗ್ಗೆ ವಿವರಿಸುವ ಸಂವಿಧಾನದ 10ನೇ ಶೆಡ್ಯೂಲ್‌ ಅನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್​, ಶಾಸಕರ ಪಕ್ಷಾಂತರ ಸರಿಯೇ ಅಥವಾ ತಪ್ಪೇ ಎಂಬುದನ್ನು ಇತ್ಯರ್ಥ ಮಾಡಿ 10ನೇ ಶೆಡ್ಯೂಲ್​ನ ಪಾವಿತ್ರ್ಯತೆಯನ್ನು ಕಾಪಾಡಬೇಕಿದೆ. ಅನರ್ಹತೆ ಅರ್ಜಿಗಳ ನಿರ್ಧಾರವನ್ನು ಇನ್ನಷ್ಟು ವಿಳಂಬ ಮಾಡುವ ಮೂಲಕ ಕಿತ್ತಾಟಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಹೇಳಿತು.

ಸಂವಿಧಾನದ 10ನೇ ಶೆಡ್ಯೂಲ್ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರು ಅವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಂದ ಪಕ್ಷಾಂತರ ಮಾಡುವುದನ್ನು ತಡೆಯುವುದಾಗಿದೆ. ಅದರ ವಿರುದ್ಧ ಕಠಿಣ ಕ್ರಮಗಳನ್ನೂ ಇದು ಸೂಚಿಸುತ್ತದೆ.

ಪಕ್ಷಾಂತರವಾಗಿರುವ ಸದಸ್ಯರು ಅರ್ಹರೇ, ಅನರ್ಹರೇ ಎಂಬುದನ್ನು ಶೀಘ್ರವಾಗಿ ನಿರ್ಧರಿಸಬೇಕಿದೆ. ಡಿಸೆಂಬರ್ 31ರೊಳಗೆ ಈ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ, ಅಂತಿಮ ತೀರ್ಪನ್ನು ಪ್ರಕಟಿಸಬೇಕು ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಆದೇಶಿಸಿತು.

ಗಡುವು ವಿಸ್ತರಣೆಗೆ ನಿರಾಕರಣೆ:ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳು ಸಲ್ಲಿಸಿರುವ ಪರಸ್ಪರ ಅನರ್ಹತೆ ಅರ್ಜಿಗಳನ್ನು ನಿರ್ಧರಿಸಲು ಸ್ಪೀಕರ್​ಗೆ ಫೆಬ್ರವರಿ 29, 2024 ರವರೆಗೆ ಸಮಯ ಬೇಕಾಗುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ಕೋರಿಕೊಂಡರು. ದೀಪಾವಳಿ ರಜೆಗಳು ಮತ್ತು ವಿಧಾನಸಭೆಯ ಚಳಿಗಾಲದ ಅಧಿವೇಶನದ ಕಾರಣ ನೀಡಿದ ಅಂತಿಮ ದಿನದೊಳಗೆ ನಿರ್ಧರಿಸುವುದು ಕಷ್ಟ ಎಂದು ತಿಳಿಸಿದರು. ಆದರೆ, ಇದನ್ನು ಪೀಠ ತಿರಸ್ಕರಿಸಿತು.

ಎನ್​ಸಿಪಿ ಶಾಸಕರ ಅನರ್ಹತೆಗೆ ಗಡುವು:ಕೆಲ ತಿಂಗಳ ಹಿಂದೆ ಡಿಸಿಎಂ ಅಜಿತ್​ ಪವಾರ್​ ನೇತೃತ್ವದಲ್ಲಿ 9 ಶಾಸಕರು ಎನ್​ಸಿಪಿಯಿಂದ ಬಂಡೆದ್ದು, ಮಹಾರಾಷ್ಟ್ರ ಸರ್ಕಾರದ ಜೊತೆ ಕೈ ಜೋಡಿಸಿದ್ದರು. ಇದರ ವಿರುದ್ಧ ಶರದ್ ಪವಾರ್ ಬಣವು ಈ ವರ್ಷದ ಜುಲೈನಲ್ಲಿ ಬಂಡೆದ್ದ 9 ಶಾಸಕರನ್ನು ಅನರ್ಹಗೊಳಿಸಲು ಅರ್ಜಿ ಸಲ್ಲಿಸಿತ್ತು. ಅದರ ಅರ್ಜಿಯೂ ಬಾಕಿ ಉಳಿದಿದ್ದು, 2024 ರ ಜನವರಿ 31ರೊಳಗೆ ಅಂತಿಮ ತೀರ್ಪು ನೀಡಲು ಸುಪ್ರೀಂ ಕೋರ್ಟ್​ ಸ್ಪೀಕರ್​ಗೆ ಸೂಚಿಸಿತು.

ಇದನ್ನೂ ಓದಿ:ಅಜಿತ್ ಪವಾರ್ ಬಣದ ಎನ್‌ಸಿಪಿ ಶಾಸಕನ ಮನೆ ಮೇಲೆ ಮರಾಠ ಮೀಸಲಾತಿ ಹೋರಾಟಗಾರರ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ

ABOUT THE AUTHOR

...view details