ನವದೆಹಲಿ: ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ನೂತನ ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದರು.
ಮೇ 16 ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಆಂಧ್ರ ಪ್ರದೇಶದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಿಶ್ರಾ ಮತ್ತು ವಿಶ್ವನಾಥನ್ ಅವರನ್ನು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾಗಿ ಉನ್ನತೀಕರಿಸಲು ಶಿಫಾರಸು ಮಾಡಿತ್ತು. ಈ ಸಂಬಂಧ ಕೇಂದ್ರ ಸರ್ಕಾರವು ಗುರುವಾರ ಇಬ್ಬರ ಹೆಸರನ್ನು ಖಚಿತಪಡಿಸಿತ್ತು. ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಸ್ಕೆ ಕೌಲ್, ಕೆಎಂ ಜೋಸೆಫ್, ಅಜಯ್ ರಸ್ತೋಗಿ ಮತ್ತು ಸಂಜೀವ್ ಖನ್ನಾ ಅಧ್ಯಕ್ಷತೆಯಲ್ಲಿ ನಡೆದ ಕೊಲಿಜಿಯಂನಲ್ಲಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಮಿಶ್ರಾ ಮತ್ತು ವಿಶ್ವನಾಥನ್ ಹೆಸರನ್ನು ನೇಮಕ ಮಾಡಲು ನಿರ್ಧರಿಸಲಾಗಿತ್ತು.
ಇದನ್ನೂ ಓದಿ :ಜಾತಿ ಆಧಾರಿತ ಗಣತಿಗೆ ಪಾಟ್ನಾ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಹಿಂಪಡೆಯಲು ಸುಪ್ರೀಂ ನಕಾರ..!
ಮೇ 26, 1966 ರಂದು ಜನಿಸಿರುವ ವಿಶ್ವನಾಥನ್ ಅವರು ಕೊಯಮತ್ತೂರು ಕಾನೂನು ಕಾಲೇಜು, ಭಾರತಿಯಾರ್ ವಿಶ್ವವಿದ್ಯಾಲಯದಲ್ಲಿ ಐದು ವರ್ಷಗಳ ಸಮಗ್ರ ಕಾನೂನು ಪದವಿಯನ್ನು ಪೂರ್ಣಗೊಳಿಸಿದರು. 1988 ರಲ್ಲಿ ತಮಿಳುನಾಡಿನ ಬಾರ್ ಕೌನ್ಸಿಲ್ಗೆ ಸೇರಿಕೊಂಡರು. ಎರಡು ದಶಕಗಳ ಕಾಲ ಸುಪ್ರೀಂ ಕೋರ್ಟ್ನಲ್ಲಿ ಅಭ್ಯಾಸ ಮಾಡಿದ ನಂತರ 2009 ರಲ್ಲಿ ಹಿರಿಯ ವಕೀಲರಾಗಿ ನೇಮಿಸಲಾಯಿತು. ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ವಿಶ್ವನಾಥನ್ ಅವರು ಸಾಂವಿಧಾನಿಕ ಕಾನೂನು, ಕ್ರಿಮಿನಲ್ ಕಾನೂನು, ವಾಣಿಜ್ಯ ಕಾನೂನು, ದಿವಾಳಿತನದ ಕಾನೂನು ಮತ್ತು ಮಧ್ಯಸ್ಥಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಂಡ ನಂತರ ಮೇ 25, 2031 ರವರೆಗೆ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.