ಕರ್ನಾಟಕ

karnataka

ETV Bharat / bharat

ವಾರಾಂತ್ಯದಲ್ಲಿ ಶ್ರಮದಾನ ಮಾಡಿ 99 ದಿನದಲ್ಲಿ ಸ್ನೇಹಿತೆಗೆ ಮನೆ ನಿರ್ಮಿಸಿಕೊಟ್ಟ ವಿದ್ಯಾರ್ಥಿಗಳು - students build house

ತಮ್ಮ ಸ್ನೇಹಿತೆಯ ಮನೆಯ ಶೋಚನೀಯ ಸ್ಥಿತಿಯಿಂದ ಕಂಡ ಸ್ನೇಹಿತರು, ಆಕೆಗೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದಾರೆ. ಎನ್ಎಸ್ಎಸ್ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ವಾರಾಂತ್ಯದಲ್ಲಿ ಶ್ರಮದಾನದ ಜೊತೆಗೆ ನಿಧಿ ಸಂಗ್ರಹಿಸಿದ್ದಾರೆ. ಕೇವಲ 99 ದಿನಗಳಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದ್ದಾರೆ.

students build house for friend in kerala
ತಮ್ಮ ಸ್ನೇಹಿತೆಗಾಗಿ ಮನೆ ನಿರ್ಮಿಸಿ ಕೊಟ್ಟ ವಿದ್ಯಾರ್ಥಿಗಳು

By ETV Bharat Karnataka Team

Published : Nov 17, 2023, 2:04 PM IST

ತಿರುವನಂತಪುರ(ಕೇರಳ): ಕೆಲ ವಿದ್ಯಾರ್ಥಿಗಳು ತಮ್ಮ ಸ್ನೇಹಿತೆಯ ವಾಸದ ಮನೆಯ ದಯನೀಯ ಸ್ಥಿತಿಯನ್ನು ಕಂಡು ನೋವು ಅನುಭವಿಸಿದ್ದಾರೆ. ಹೇಗಾದರೂ ಮಾಡಿ ಆಕೆಗೆ ಒಳ್ಳೆಯ ಮನೆ ಕಟ್ಟಿಕೊಡಬೇಕೆಂದು ನಿರ್ಧರಿಸಿದ್ದಾರೆ. ಅದರಂತೆ ಸ್ನೇಹಿತೆ ವಾಸವಿರುವ ಪ್ರದೇಶದಲ್ಲೇ 99 ದಿನಗಳಲ್ಲಿ ಮನೆಯೊಂದನ್ನು ಕಟ್ಟಿಕೊಟ್ಟಿದ್ದಾರೆ.

ಈ ಮನೆ ನಿರ್ಮಾಣಕ್ಕೆ ಚಂದಾ ವಸೂಲಿ ಮಾಡುವ ಬದಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಹಣ ಸಂಗ್ರಹಿಸಿದ್ದಾರೆ. ಸ್ನೇಹಿತರೆಲ್ಲರೂ ಸೇರಿ ವಾರಾಂತ್ಯದಲ್ಲಿ ಕಷ್ಟಪಟ್ಟು ಮನೆ ನಿರ್ಮಾಣ ಮಾಡಿದ್ದಾರೆ. ವಿದ್ಯಾರ್ಥಿನಿ ಅನಸ್ಯ ಅಜಯನ್‌ಗಾಗಿ ಅವಿರತವಾಗಿ ಶ್ರಮಿಸಿದ ತಿರುವನಂತಪುರದ ವಿಠುರ ಸರ್ಕಾರಿ ವೃತ್ತಿ ಶಿಕ್ಷಣ ಕಾಲೇಜಿನ ವಿದ್ಯಾರ್ಥಿಗಳು ಎಲ್ಲರ ಪ್ರಶಂಸೆ ಪಾತ್ರರಾಗಿದ್ದಾರೆ.

ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಮಾತು: ''ವಿದ್ಯಾರ್ಥಿನಿ ಅನಸ್ಯ ಅವರ ಮನೆ ಸುಸ್ಥಿತಿಯಲ್ಲಿಲ್ಲ, ಮನೆಯ ಮುಖ್ಯಸ್ಥರು (ಅನಸ್ಯ ತಂದೆ) ಮೃತರಾಗಿದ್ದಾರೆ. ಆ ಮನೆಯಲ್ಲಿ ಐವರು ಮಹಿಳೆಯರು ವಾಸವಿದ್ದಾರೆ. ಇವರ ದಯನೀಯ ಸ್ಥಿತಿ ನೋಡಿದ ಎನ್‌ಎಸ್‌ಎಸ್‌ ಸಂಸ್ಥೆಯು ಅವರಿಗೆ ಮನೆ ನಿರ್ಮಿಸಿಕೊಡಲು ನಿರ್ಧರಿಸಿದೆ. ಮನೆ ನಿರ್ಮಾಣ ಪೂರ್ಣಗೊಳಿಸಲು ವಿದ್ಯಾರ್ಥಿಗಳನ್ನು ಹುರಿದುಂಬಿಸಿದೆವು. 100 ದಿನಗಳ ಯೋಜನೆ ಹಾಕಿಕೊಳ್ಳಲಾಗಿತ್ತು. ಅದರಂತೆ ನಿಗದಿತ ಸಮಯದೊಳಗೆ ವಿದ್ಯಾರ್ಥಿಗಳು ಕೆಲಸ ಪೂರ್ಣಗೊಳಿಸಿದ್ದಾರೆ" ಎಂದು ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಅರುಣ್ ತಿಳಿಸಿದರು.

ಪ್ರಾಧ್ಯಾಪಕರಿಂದ ಬೆಂಬಲ:ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಡಿ ಆಹಾರೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳ ನಡೆಸಿ ಮನೆ ನಿರ್ಮಾಣಕ್ಕೆ ಹಣ ಸಂಗ್ರಹಿಸಿದರು. ಜೊತೆಗೆ ಹಲವು ವಸ್ತುಗಳ ಮಾರಾಟವೂ ನಡೆದಿದೆ. ಬಿಡುವಿಲ್ಲದೆ ದುಡಿದು ನಾಲ್ಕು ಲಕ್ಷ ರೂಪಾಯಿ ಸಂಗ್ರಹಿಸಿದರು. ಈ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಕಾಲೇಜು ಪಿಟಿ ಮತ್ತು ಇತರ ಪ್ರಾಧ್ಯಾಪಕರು ಮನಃಪೂರ್ವಕವಾಗಿ ಬೆಂಬಲ ನೀಡಿದರು. ಸಂಗ್ರಹಿಸಿದ ನಾಲ್ಕು ಲಕ್ಷಕ್ಕೆ ಮತ್ತೆ ನಾಲ್ಕು ಲಕ್ಷ ರೂಪಾಯಿ ಠೇವಣಿ ಇರಿಸಿ ಮನೆ ಕಟ್ಟಲು ಆರಂಭಿಸಿದರು.

''ಅನಸ್ಯ ಮನೆಯ ಮುಖ್ಯಸ್ಥರು ಹಠಾತ್ ನಿಧನರಾದರು. ಆ ಸಮಯದಲ್ಲಿ ನಮ್ಮ ವಿದ್ಯಾರ್ಥಿಗಳು ಅವಳಿಗೆ ಮನೆ ನಿರ್ಮಿಸಲು ಯೋಚಿಸಿದರು. ವಿದ್ಯಾರ್ಥಿಗಳಿಂದ ಹಣವನ್ನು ಸಂಗ್ರಹಿಸುವ ಬದಲು ನಾವು ಅವರೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದ್ದೇವೆ. ಅದರಂತೆ ನಾವು ಮನೆ ನಿರ್ಮಾಣ ಪೂರ್ಣಗೊಳಿಸಿದ್ದೇವೆ'' ಎಂದು ಪ್ರಾಧ್ಯಾಪಕಿ ಮಂಜುಷಾ ಹೇಳಿದರು.

99 ದಿನಗಳಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಸಮ್ಮುಖದಲ್ಲಿ ಗೃಹಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಖುಷಿ ಹಂಚಿಕೊಂಡ ವಿದ್ಯಾರ್ಥಿನಿ:''99 ದಿನದಲ್ಲಿ ಮನೆ ಕಟ್ಟಿಸಿರುವುದು ನಮಗೆ ತುಂಬಾ ಸಂತಸ ತಂದಿದೆ. ಅಲ್ಲದೆ ಯಾರ ಬಳಿಯೂ ಹಣ ಕೇಳಲಿಲ್ಲ. ಹಳೆಯ ಸಮವಸ್ತ್ರ ಹಾಗೂ ಉಡುಗೊರೆ ಕೂಪನ್‌ಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸಿದ್ದೇವೆ. ಈ ಕೆಲಸವನ್ನು ಮಾಡಿರುವುದು ನಮಗೆ ತುಂಬಾ ಸಂತೋಷವಾಗಿದೆ. ಇದು ನಮಗೆ ದೊಡ್ಡ ಸಾಧನೆಯಾಗಿದೆ'' ಎಂದು ವಿದ್ಯಾರ್ಥಿನಿ ಫಸಿಲಾ ಎಸ್ ಖುಷಿ ಹಂಚಿಕೊಂಡರು.

ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಸ್ಥಳೀಯರಿಂದ ಅಭಿನಂದನೆ:''ನನಗೆ ಒಬ್ಬ ಅಕ್ಕ ಇದ್ದಾಳೆ, ಅಜ್ಜಿ, ತಾತ ಇದ್ದಾರೆ. ಎಲ್ಲ ಸ್ನೇಹಿತರು ಮನೆ ಕಟ್ಟಿಸಿದ್ದು ನನಗೆ ತುಂಬಾ ಖುಷಿ ತಂದಿದೆ'' ಎಂದು ಸ್ನೇಹಿತರ ನೆರವು ಪಡೆದ ವಿದ್ಯಾರ್ಥಿನಿ ಅನಸ್ಯ ಅಜಯನ್ ಹೇಳಿದರು. ತಮ್ಮ ಸ್ನೆಹಿತೆಗಾಗಿ ಮನೆ ಕಟ್ಟಿಸಿಕೊಟ್ಟ ಎನ್ಎಸ್ಎಸ್ ವಿದ್ಯಾರ್ಥಿಗಳನ್ನು ಸ್ಥಳೀಯರು ಅಭಿನಂದಿಸಿದರು.

ಇದನ್ನೂ ಓದಿ:'ಈ ಸಾರಿ ವರ್ಲ್ಡ್​ ಕಪ್​ ನಮ್ದೇ': ಫೈನಲ್​ ಪಂದ್ಯದ ಮೇಲೆ ರಜಿನಿಕಾಂತ್​ ವಿಶ್ವಾಸ

ABOUT THE AUTHOR

...view details