ಕರ್ನಾಟಕ

karnataka

By

Published : Jan 3, 2023, 11:18 AM IST

ETV Bharat / bharat

4 ದಿನದ ಹಿಂದೆ ಆರಂಭಗೊಂಡ ವಂದೇ ಭಾರತ್​ ರೈಲಿಗೆ ಕಲ್ಲು, ಕಿಟಿಕಿ ಗಾಜು ಜಖಂ

ತಾಯಿ ಸಾವಿನ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು 4 ದಿನಗಳ ಹಿಂದಷ್ಟೇ ಕೋಲ್ಕತ್ತಾದ ವಂದೇ ಭಾರತ್​ ರೈಲಿಗೆ ಚಾಲನೆ ನೀಡಿದ್ದರು. ಇಂದು ಅದರ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ, ಕಿಟಕಿಯ ಗಾಜು ಒಡೆದು ಹಾಕಿದ್ದಾರೆ.

vande-bharat-express
ವಂದೇ ಭಾರತ್​ ರೈಲಿಗೆ ಕಲ್ಲು ತೂರಾಟ

ಹೌರಾ (ಪಶ್ಚಿಮಬಂಗಾಳ):ಪಶ್ಚಿಮ ಬಂಗಾಳದಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿರುವ ಸೆಮಿ ಹೈಸ್ಪೀಡ್​ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಿ ಜಖಂಗೊಳಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಈ ಬಗ್ಗೆ ದೂರು ದಾಖಲಿಸಲಾಗಿದೆ.

ಹೌರಾದಿಂದ ನ್ಯೂ ಜಲಫೈಗುರಿಗೆ ಸಂಪರ್ಕ ನೀಡುವ ರೈಲು ಕಥಿಯಾ ವಿಭಾಗದ ಸಾಮ್ಸಿ ಕುಮಾರ್‌ಗಂಜ್ ಬಳಿ ತೆರಳುತ್ತಿದ್ದಾಗ ಅನಾಮಿಕರು ಕಲ್ಲು ತೂರಿದ್ದಾರೆ. ಇದರಿಂದ 2 ಬೋಗಿಯ ಬಾಗಿಲು ಮತ್ತು ಕಿಟಕಿಗಳಿಗೆ ಹಾನಿಯಾಗಿದೆ. ಕಿಟಿಕಿಯ ಗಾಜು ಒಡೆದು ಹೋಗಿದೆ. ಘಟನೆಯ ರೈಲಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕಲ್ಲು ತೂರಾಟ ನಡೆಸಿದ್ದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು. ಜಲಪೈಗುರಿಯಿಂದ ಹೌರಾಗೆ ತೆರಳುತ್ತಿದ್ದಾಗ ದಾಳಿ ನಡೆದಿದೆ. ರೈಲಿನ ಸಿ-13 ಬೋಗಿಗೆ ಕಲ್ಲೇಟು ಬಿದ್ದಿವೆ. ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.

ಡಿಸೆಂಬರ್​ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಾಯಿ ಹೀರಾಬೆನ್​ ಸಾವಿನ ನೋವಿನ ಮಧ್ಯೆಯೂ ಕರ್ತವ್ಯಕ್ಕೆ ಹಾಜರಾಗಿ ಕೋಲ್ಕತ್ತಾದ ಮೊದಲ ವಂದೇ ಭಾರತ್​ ರೈಲಿಗೆ ವರ್ಚುಯಲ್​ ಮೂಲಕ ಚಾಲನೆ ನೀಡಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಲ್ಲು ತೂರಾಟದ ಬಳಿಕ ರೈಲ್ವೆ ಕಾಯ್ದೆಯ ಸೆಕ್ಷನ್ 154 ರ ಅಡಿಯಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪರಾಧ ಸಾಬೀತಾದರೆ ವ್ಯಕ್ತಿಯು 1 ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡಕ್ಕೂ ಒಳಪಡಬಹುದಾಗಿದೆ.

ಇದನ್ನೂ ಓದಿ:ವಂದೇ ಭಾರತ್ ರೈಲಿಗೆ ಸಿಲುಕಿ ಮಹಿಳೆ ದುರ್ಮರಣ

ಹೌರಾದಿಂದ ನ್ಯೂ ಜಲಪೈಗುರಿ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಈಶಾನ್ಯ ಭಾರತದಲ್ಲಿಯೇ ಮೊದಲನೆಯದು ಮತ್ತು ದೇಶದ ಏಳನೇ ರೈಲಾಗಿದೆ. ಇದು 7.45 ನಿಮಿಷಗಳಲ್ಲಿ 564 ಕಿಲೋ ಮೀಟರ್​ ದೂರ ಕ್ರಮಿಸುತ್ತದೆ. ಈ ಮಾರ್ಗದಲ್ಲಿನ ಇತರ ರೈಲುಗಳಿಗೆ ಹೋಲಿಸಿದರೆ ಇದು ಮೂರು ಗಂಟೆಗಳ ಪ್ರಯಾಣದ ಸಮಯವನ್ನು ಕಡಿಮೆ ಇದೆ. ಮೂರು ಕಡೆ ಮಾತ್ರ ಇದು ನಿಲ್ಲಲಿದೆ.

ಈ ಹಿಂದೆಯೂ ನಡೆದಿತ್ತು ಕಿಡಿಗೇಡಿತನ:ದೇಶಾದ್ಯಂತ ಆರಂಭಿಸಲಾಗುತ್ತಿರುವ ವಂದೇ ಭಾರತ್​ ರೈಲಿನ ಮೇಲೆ ಕಿಡಿಗೇಡಿ ಕೃತ್ಯ ನಡೆಯುತ್ತಲೇ ಇವೆ. AIMIM ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ನಾಯಕ ವಾರಿಸ್ ಪಠಾಣ್ ಅವರು ಕಳೆದ ವರ್ಷ ಗುಜರಾತ್‌ನ ಅಹಮದಾಬಾದ್‌ನಿಂದ ಸೂರತ್‌ಗೆ ರೈಲಿನಲ್ಲಿ ತೆರಳುತ್ತಿದ್ದಾಗ ಕಲ್ಲು ತೂರಾಟ ನಡೆದಿತ್ತು. ಇದಾದ ಬಳಿಕ ನವೆಂಬರ್‌ನಲ್ಲಿ ಎರಡನೇ ಕಲ್ಲು ತೂರಾಟದ ಘಟನೆ ವರದಿಯಾಗಿತ್ತು.

ವಂದೇ ಭಾರತ್​ ರೈಲಿಗೆ ಹಲವು ವಿಘ್ನ:ಮಹಾರಾಷ್ಟ್ರದ ನಾಗ್ಪುರ ಮತ್ತು ಛತ್ತೀಸ್‌ಗಢದ ಬಿಲಾಸ್‌ಪುರ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ಜಾನುವಾರುಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿತ್ತು. ಮುಂಬೈನ ಸೆಂಟ್ರಲ್ ವ್ಯಾಪ್ತಿಯ ಅತುಲ್ ಸ್ಟೇಶನ್ ಬಳಿ ತೆರಳುತ್ತಿದ್ದ ವೇಳೆ ಜಾನುವಾರುಗಳಿಗೆ ಗುದ್ದಿತ್ತು. ಇದರಿಂದಾಗಿ ರೈಲಿನ ಸಂಚಾರದಲ್ಲಿ 15 ನಿಮಿಷ ವಿಳಂಬವಾಗಿತ್ತು.

ಸೆಮಿ ಹೈಸ್ಪೀಡ್​ನ ವಂದೇ ಭಾರತ್ ರೈಲಿಗೆ ಸಿಲುಕಿ 54 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಗುಜರಾತ್‌ನಲ್ಲಿ ನಡೆದಿತ್ತು. ಗಾಂಧಿ ನಗರದ ನಿಲ್ದಾಣದಿಂದ ಮುಂಬೈಗೆ ತೆರಳುತ್ತಿದ್ದಾಗ ಹಳಿ ದಾಟುವ ವೇಳೆ ಮಹಿಳೆ ರೈಲಿಗೆ ಸಿಲುಕಿ ಅಸುನೀಗಿದ್ದರು. ಇದಕ್ಕೂ ಮೊದಲು ಇದೇ ರೈಲಿಗೆ ಜಾನುವಾರುಗಳು ಸಿಲುಕಿ ಮೃತಪಟ್ಟ ಘಟನೆಗಳು ನಡೆದಿದ್ದವು.

ಇದನ್ನೂ ಓದಿ:ವಂದೇ ಭಾರತ್ ರೈಲಿಗೆ ಸಿಲುಕಿ ಮೂರು ವರ್ಷದ ಬಾಲಕಿ ಸಾವು

ABOUT THE AUTHOR

...view details