ತಿರುವನಂತಪುರಂ(ಕೇರಳ):ಅಮಾನುಷ ನರಬಲಿ ಪ್ರಕರಣದಲ್ಲಿ ಇಬ್ಬರು ಮಹಿಳೆಯರ ಹತ್ಯೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿ ಕೇರಳ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಆದೇಶ ಹೊರಡಿಸಿದ್ದಾರೆ. ಕೊಚ್ಚಿ ನಗರ ಉಪ ಪೊಲೀಸ್ ಆಯುಕ್ತ ಎಸ್ ಶಶಿಧರನ್ ಅವರು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥರಾಗಿದ್ದಾರೆ. ಪೆರುಂಬವೂರು ಎಎಸ್ಪಿ ಅನುಜ್ ಪಲಿವಾಲ್ ಮುಖ್ಯ ತನಿಖಾಧಿಕಾರಿಯಾಗಿರುತ್ತಾರೆ ಎಂದು ಹಿರಿಯ ಅಧಿಕಾರಿ ಅನಿಲ್ ಕಾಂತ್ ತಿಳಿಸಿದ್ದಾರೆ.
ಎರ್ನಾಕುಲಂ ಕೇಂದ್ರ ಸಹಾಯಕ ಕಮಿಷನರ್ ಸಿ ಜಯಕುಮಾರ್, ಕಡವಂತರ ಠಾಣಾಧಿಕಾರಿ ಬೈಜು ಜೋಸ್, ಕಾಲಡಿ ಠಾಣಾಧಿಕಾರಿ ಅನುಪ್ ಎನ್ಎ ತನಿಖಾಧಿಕಾರಿಗಳಾಗಿದ್ದು, ಎಲಮಕರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಐನೆ ಬಾಬು ಮತ್ತು ಕಾಲಡಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಬಿಪಿನ್ ಟಿಬಿ ವಿಶೇಷ ತನಿಖಾ ತಂಡದ ಸದಸ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇಲಾಖೆ ಎಡಿಜಿಪಿ ಕಾನೂನು ಸುವ್ಯವಸ್ಥೆಯ ನೇರ ನಿಗಾದಲ್ಲಿ ತನಿಖಾ ತಂಡ ಕಾರ್ಯನಿರ್ವಹಿಸಲಿದೆ. ಬುಧವಾರ ನರಬಲಿ ಪ್ರಕರಣದಲ್ಲಿ ಪೊಲೀಸರ ರಿಮಾಂಡ್ ವರದಿಯಲ್ಲಿ ಆಘಾತಕಾರಿ ವಿಷಯ ಹೊರಬಿದ್ದಿದೆ. ವರದಿಯ ಪ್ರಕಾರ, ನರಬಲಿ ಪ್ರಕರಣದ ಆರೋಪಿಗಳು ಸಂತ್ರಸ್ತ ಮಹಿಳೆಯೊಬ್ಬರನ್ನು 56 ತುಂಡುಗಳಾಗಿ ಕತ್ತರಿಸಿದ್ದಾರೆ. ಆರೋಪಿ ಮುಹಮ್ಮದ್ ಶಫಿ ಮತ್ತು ಮಹಿಳೆ ಆರೋಪಿ ಲೈಲಾ ಸಂತ್ರಸ್ತರ ಗುಪ್ತಾಂಗದೊಳಗೆ ಚಾಕು ಹಾಕಿದ್ದಾರೆ ಎಂದು ರಿಮಾಂಡ್ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.
ಪ್ರಕರಣದ ಹಿನ್ನೆಲೆ.. ಆರ್ಥಿಕ ಸಮೃದ್ಧಿಯನ್ನು ಪಡೆಯಲು ಇಬ್ಬರು ಆರೋಪಿಗಳಾದ ಭಗವಲ್ ಸಿಂಗ್ ಮತ್ತು ಲೈಲಾ ಪ್ರಮುಖ ಆರೋಪಿ ಮುಹಮ್ಮದ್ ಶಫಿಯ ಸಹಾಯದಿಂದ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ. 26-09-2022 ರಂದು ಶಫಿ ಅವರು ಕೊಚ್ಚಿಯಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ 52 ವರ್ಷದ ಪದ್ಮಾ ಅವರನ್ನು ಸಂಪರ್ಕಿಸಿದ್ದರು. ಶಫಿ ಲೈಂಗಿಕ ಕೆಲಸಕ್ಕೆ ರೂ 15,000 ನೀಡುವ ಮೂಲಕ ಆಕೆಗೆ ಆಮಿಷವೊಡ್ಡಿದ್ದರು. ಅದಕ್ಕೆ ಮಹಿಳೆ ಒಪ್ಪಿಗೆ ಸೂಚಿಸಿ ಶಫಿಯೊಂದಿಗೆ ಭಗವಲ್ ಸಿಂಗ್ ಮನೆಗೆ ಹೋದರು. ಪತ್ತನಂತಿಟ್ಟ ಜಿಲ್ಲೆಯ ಲೈಲಾ ಎಂಬುವರು ಅಲ್ಲಿ ಮಹಿಳೆಯ ಕುತ್ತಿಗೆಗೆ ಪ್ಲಾಸ್ಟಿಕ್ ದಾರದಿಂದ ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಶಫಿಯು ಪದ್ಮಾರ ಖಾಸಗಿ ಅಂಗದೊಳಗೆ ಚಾಕು ಇಟ್ಟು, ಬಳಿಕ ಅವರ ಕತ್ತು ಕೊಯ್ದು ಕೊಲೆಗೈದಿದ್ದಾರೆ. ಅಲ್ಲದೆ ದೇಹವನ್ನು 56 ತುಂಡುಗಳಾಗಿ ಕತ್ತರಿಸಿ ಬಕೆಟ್ಗಳಲ್ಲಿ ಹಾಕಿ ನಂತರ ಹಳ್ಳದಲ್ಲಿ ಹೂತುಹಾಕಿದರು ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ.