ಕರ್ನಾಟಕ

karnataka

By ETV Bharat Karnataka Team

Published : Nov 27, 2023, 10:00 AM IST

ETV Bharat / bharat

ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ: 19.2 ಮೀಟರ್ ಲಂಬವಾಗಿ ಕೊರೆಯುವಿಕೆ ಪೂರ್ಣ

Day 16-Silkyara tunnel rescue operation: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ವೇಗಗೊಳಿಸಲು ಬಹು ವಿಧದ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇದೀಗ 19.2 ಮೀಟರ್‌ಗಿಂತಲೂ ಹೆಚ್ಚು ಲಂಬವಾಗಿ ಭೂಮಿ ಕೊರೆಯುವಿಕೆ ಕೆಲಸ ಪೂರ್ಣಗೊಂಡಿದ್ದು, ಇನ್ನೂ 86 ಮೀಟರ್‌ ಕೊರೆಯಬೇಕಾಗಿದೆ.

Silkyara tunnel rescue
ಸಿಲ್ಕ್ಯಾರಾ ಸುರಂಗ

ಉತ್ತರಕಾಶಿ(ಉತ್ತರಾಖಂಡ):ಕಳೆದ 16 ದಿನಗಳಿಂದ ಸಿಲ್ಕ್ಯಾರಾ ಸುರಂಗದ ಒಳಗಡೆ ಸಿಲುಕಿರುವ 41 ಮಂದಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವ ತಜ್ಞರು ಬಹು ವಿಧದ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ಒಟ್ಟು 19.2 ಮೀಟರ್ ವರ್ಟಿಕಲ್ ಡ್ರಿಲ್ಲಿಂಗ್ (ಲಂಬವಾಗಿ ಭೂಮಿಯನ್ನು ಕೊರೆಯುವುದು) ಕೆಲಸ ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (ಎನ್‌ಹೆಚ್‌ಐಡಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಮಹ್ಮದ್ ಅಹ್ಮದ್ ಹೇಳಿದ್ದಾರೆ.

"ನಾವು ಸುಮಾರು 19.2 ಮೀಟರ್ ಕೊರೆಯುವ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ನವೆಂಬರ್ 30ರೊಳಗೆ ಅಂದರೆ ಮುಂದಿನ ನಾಲ್ಕು ದಿನಗಳಲ್ಲಿ ಸುಮಾರು 86 ಮೀಟರ್​ ಕೊರೆಯಬೇಕಿದೆ. ಮತ್ತೆ ಕಾರ್ಯಾಚರಣೆಗೆ ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸಲಾಗುವುದು" ಎಂದರು.

ಉತ್ತರಾಖಂಡ ಸರ್ಕಾರದ ಕಾರ್ಯದರ್ಶಿ ಮತ್ತು ರಕ್ಷಣಾ ಕಾರ್ಯಾಚರಣೆಯ ನೋಡಲ್ ಅಧಿಕಾರಿ ನೀರಜ್ ಖೈರ್ವಾಲ್ ಅವರು, "ಸುರಂಗದೊಳಗೆ ಸಿಲುಕಿರುವ ಆಗರ್ ಯಂತ್ರವನ್ನು ತೆಗೆಯುವ ಕಾರ್ಯವನ್ನು ವೇಗಗೊಳಿಸಲಾಗಿದೆ. ಪ್ಲಾಸ್ಮಾ ಕತ್ತರಿಸುವ ಯಂತ್ರಗಳು ಮತ್ತು ಇತರೆ ಯಂತ್ರಗಳು ಬಂದ ನಂತರ ಕೆಲಸವು ಅತ್ಯಂತ ವೇಗದಲ್ಲಿ ನಡೆಯುತ್ತಿದೆ. ಆಗರ್ ಯಂತ್ರವನ್ನು ತೆಗೆಯುವ ಕಾರ್ಯಾಚರಣೆಗೆ ಇಲ್ಲಿಯವರೆಗೆ ಯಾವುದೇ ಅಡಚಣೆ ಉಂಟಾಗಿಲ್ಲ, ಆದರೆ, ಅದನ್ನು ಹೊರ ತೆಗೆದುಹಾಕಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಗರ್ ಯಂತ್ರ ತೆರವುಗೊಳಿಸಿದ ನಂತರ ನಾವು ಒಳಗೆ ಮ್ಯಾನ್ಯುವಲ್ ಡ್ರಿಲ್ಲಿಂಗ್ ಮಾಡುತ್ತೇವೆ. ಸೇನೆಯ ಇಂಜಿನಿಯರಿಂಗ್ ರೆಜಿಮೆಂಟ್ ಮುಂದೆ ಹೇಗೆ ಕೆಲಸ ಮಾಡಬೇಕೆಂಬುದರ ಬಗ್ಗೆ ಯೋಜನೆಯನ್ನು ಸಿದ್ಧಪಡಿಸುತ್ತದೆ" ಎಂದರು.

"41 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವುದು ನಮ್ಮ ಮೊದಲ ಗುರಿ. ಸುಮಾರು 70-80 ಮೀಟರ್‌ವರೆಗೆ 8 ಇಂಚಿನ ಪೈಪ್‌ಲೈನ್ ಕೊರೆದು ಸ್ಥಗಿತಗೊಳಿಸಲಾಗಿದೆ. 1.2 ಮೀಟರ್ ವ್ಯಾಸದ ಪೈಪ್‌ಲೈನ್ ಅನ್ನು ಸುಮಾರು 20 ಮೀಟರ್‌ಗೆ ಕೊರೆಯಲಾಗಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ, ಲೆಫ್ಟಿನೆಂಟ್ ಜನರಲ್ ಸೈಯದ್ ಅತಾ ಹಸ್ನೈನ್ ಭಾನುವಾರ ಮಾತನಾಡಿ, "ಉತ್ತರಕಾಶಿಯ ಸುರಂಗದ ಹೊರಪದರವನ್ನು ತಲುಪಲು 86 ಮೀಟರ್ ಲಂಬ ಕೊರೆಯುವ ಅಗತ್ಯವಿದೆ. ಅಲ್ಲಿ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಈಗಾಗಲೇ 17 ಮೀಟರ್ ಕೊರೆಯುವಿಕೆ ಕೆಲಸ ನಡೆದಿದೆ" ಎಂದಿದ್ದರು.

ಇದನ್ನೂ ಓದಿ:ಸುರಂಗದೊಳಗಿರುವ ಕಾರ್ಮಿಕರಿಗೆ ವಿಡಿಯೋ ಗೇಮ್‌ ಆಡಲು ಮೊಬೈಲ್ ಫೋನ್ ರವಾನೆ: ಬ್ಯಾಟ್‌, ಬಾಲ್‌ ಕಳುಹಿಸಲು ಚಿಂತನೆ

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎನ್‌ಡಿಎಂಎ ಸದಸ್ಯ ಸೈಯದ್ ಅತಾ ಹಸ್ನೈನ್, "ಪ್ರಸ್ತುತ ಪ್ಲಾನ್​ 2 ಅಳವಡಿಸಲಾಗಿದೆ. ಡ್ರಿಲ್ಲಿಂಗ್ ಯಂತ್ರ ಶುಕ್ರವಾರ ತಲುಪಿದೆ. ಭಾನುವಾರ ಮಧ್ಯಾಹ್ನ 12 ಗಂಟೆಗೆ ಲಂಬ ಡ್ರಿಲ್ಲಿಂಗ್ ಕೊರೆಯುವ ಕೆಲಸ ಪ್ರಾರಂಭವಾಯಿತು. ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು 86 ಮೀಟರ್ ಲಂಬ ಅಗೆಯುವ ಅಗತ್ಯವಿದೆ. 17 ಮೀಟರ್‌ಗಳಷ್ಟು ಕೊರೆಯುವಿಕೆಯು ಈಗಾಗಲೇ ನಡೆದಿದೆ. ನಾವು ಭೂವೈಜ್ಞಾನಿಕ ಅಧ್ಯಯನಗಳನ್ನು ಮಾಡಿದ್ದೇವೆ ಮತ್ತು ಅಧ್ಯಯನಗಳು ಯಾವುದೇ ಅಡಚಣೆಯಿಲ್ಲ ಎಂದು ಸೂಚಿಸುತ್ತಿವೆ. ಸ್ಥಿರತೆಯನ್ನು ಪರಿಶೀಲಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

"ಸುರಂಗದ ಒಳಗೆ ಸಿಲುಕಿರುವ ಕೆಲಸಗಾರರು ಅಗತ್ಯ ವಸ್ತುಗಳು, ಆಹಾರ ಮತ್ತು ಔಷಧವನ್ನು ಪಡೆಯುತ್ತಿದ್ದಾರೆ. ವೈದ್ಯಕೀಯ ಮತ್ತು ಮಾನಸಿಕ-ಸಾಮಾಜಿಕ ತಜ್ಞರು ಸಹ ಕೆಲಸ ಮಾಡುತ್ತಿದ್ದಾರೆ. ಎಲ್ಲರ ಸುರಕ್ಷತೆಗಾಗಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details