ಅಯೋಧ್ಯೆ:ಮೈಸೂರಿನಿಂದ ಧರ್ಮನಗರಕ್ಕೆ ಆಗಮಿಸಿದ ಖ್ಯಾತ ಧಾರ್ಮಿಕ ಮುಖಂಡ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿ ಶುಕ್ರವಾರ ಬೆಳಗ್ಗೆ ಸಾವಿರಾರು ಅನುಯಾಯಿಗಳ ಸಮ್ಮುಖದಲ್ಲಿ ಶ್ರೀ ರಾಮನ ಪವಿತ್ರ ನಗರಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಗಣಪತಿ ಸಚ್ಚಿದಾನಂದ ಆಶ್ರಮದ ಭೂಮಿಪೂಜೆ ನೆರವೇರಿಸಿದರು. ಈ ಆಶ್ರಮವು ಮೈಸೂರಿನ ಅವಧೂತ ದತ್ತ ಪೀಠದ ಶಾಖೆಯಾಗಲಿದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಯ ಸಹಸ್ರಾರು ಭಕ್ತರು ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶುಕ್ರವಾರ ಬೆಳಗ್ಗೆ ರಾಮಜನ್ಮಭೂಮಿ ಸಂಕೀರ್ಣದಿಂದ 1 ಕಿಲೋಮೀಟರ್ ದೂರದಲ್ಲಿರುವ ಈ ಭೂಮಿಯಲ್ಲಿ ವೇದಘೋಷಗಳ ಮಧ್ಯೆ ಹವನ ಮತ್ತು ಯಜ್ಞಕುಂಡದಲ್ಲಿ ನೈವೇದ್ಯ ಅರ್ಪಿಸಿ ಆಶ್ರಮ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಈ ಆಶ್ರಮದಲ್ಲಿ ಶ್ರೀರಾಮನ ಭವ್ಯವಾದ ಮಂದಿರವನ್ನು ನಿರ್ಮಿಸಲಾಗುವುದು. ಇದಲ್ಲದೇ ಆಶ್ರಮಕ್ಕೆ ಸಂಬಂಧಿಸಿದ ಭಕ್ತರಿಗೆ ತಂಗಲು ಆವರಣದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗುವುದು. ಮುಖ್ಯವಾಗಿ ದಕ್ಷಿಣ ಭಾರತದಿಂದ ಬರುವ ಭಕ್ತರಿಗೆ ಈ ಆಶ್ರಮದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುವುದು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿ ಮಹಾರಾಜ್ ಮಾತನಾಡಿ, ಅಯೋಧ್ಯೆ ನಗರವು ವಿಶ್ವದ ಅತ್ಯಂತ ಹಳೇಯ ನಗರವಾಗಿದೆ. ಮರ್ಯಾದಾ ಪುರುಷೋತ್ತಮ ರಾಮ ಹುಟ್ಟಿದ ನಾಡಿದು. ನಾವೆಲ್ಲರೂ ಅವನ ಭಕ್ತರು, ಅವನ ಪ್ರಜೆಗಳು. ಅಯೋಧ್ಯೆಯಲ್ಲೂ ನಮ್ಮ ಅವಧೂತ ದತ್ತ ಪೀಠದ ಶಾಖೆಯಾಗಬೇಕು ಎಂಬುದು ನಮ್ಮ ಪ್ರಯತ್ನವಾಗಿತ್ತು, ಅದಕ್ಕಾಗಿಯೇ ಅಯೋಧ್ಯೆಯಲ್ಲಿ ಸ್ಥಳವನ್ನು ಆಯ್ಕೆ ಮಾಡಿ ಗಣಪತಿ ಸಚ್ಚಿದಾನಂದ ಸ್ವಾಮಿ ಆಶ್ರಮವನ್ನು ನಿರ್ಮಿಸಲಾಗುತ್ತಿದೆ. ಇದರ ನಿರ್ಮಾಣ 1 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಈ ಆಶ್ರಮದಲ್ಲಿ ರಾಮನ ಮಂದಿರವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.