ಕರ್ನಾಟಕ

karnataka

'ಹತ್ಯೆ ಬಗ್ಗೆ ಪಶ್ಚಾತ್ತಾಪವಿಲ್ಲ': ಬಾಲಕಿ ಹಂತಕ ಸಾಹಿಲ್ ಖಾನ್​ ಹೇಳಿಕೆ, 2 ದಿನ ಪೊಲೀಸ್​ ಕಸ್ಟಡಿಗೆ

By

Published : May 30, 2023, 12:53 PM IST

ದೆಹಲಿಯ ಬಾಲಕಿ ಹತ್ಯೆಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಾಲಕಿಯ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ಭೀಕರತೆ ಅದರಲ್ಲಿದೆ. ದೆಹಲಿ ಸ್ಥಳೀಯ ಕೋರ್ಟ್​, ಆತನನ್ನು 2 ದಿನ ಪೊಲೀಸ್​ ಕಸ್ಟಡಿಗೆ ನೀಡಿದೆ.

ಬಾಲಕಿ ಹಂತಕ ಸಾಹಿಲ್
ಬಾಲಕಿ ಹಂತಕ ಸಾಹಿಲ್

ನವದೆಹಲಿ:ದೆಹಲಿಯ ಶಹಬಾದ್​ ಡೈರಿಯಲ್ಲಿ 16 ವರ್ಷದ ಬಾಲಕಿಯನ್ನು ಬರ್ಬರವಾಗಿ ಇರಿದು ಕೊಂದ ಆರೋಪಿ, ರಾತ್ರೋರಾತ್ರಿ ನಗರದಿಂದ ತಪ್ಪಿಸಿಕೊಂಡು 2 ಬಸ್​ ಬದಲಿಸಿ ಉತ್ತರ ಪ್ರದೇಶದ ಬುಲಂದ್​ಶಹರ್​ಗೆ ತಲುಪಿದ್ದ. ಪ್ರೇಯಸಿಯ ಕೊಂದ ಬಗ್ಗೆ ತನಗೆ ಯಾವುದೇ ಭಯ, ವಿಷಾದವಿಲ್ಲ ಎಂದು ತನಿಖೆಯ ವೇಳೆ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಹಂತಕನಾದ 20 ವರ್ಷದ ಸಾಹಿಲ್​ ಖಾನ್, ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಎಸಿ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದ. ಭಾನುವಾರ ರಾತ್ರಿ ಬಾಲಕಿಯನ್ನು ರಸ್ತೆ ಮೇಲೆಯೇ ಕೊಚ್ಚಿದ್ದಲ್ಲದೇ, ಸಿಮೆಂಟ್​ ಚಪ್ಪಡಿಯಿಂದ ಜಜ್ಜಿ ಕೊಲೆ ಮಾಡಿದ ಆರೋಪದ ಮೇರೆಗೆ ಬಂಧಿಸಲಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಘಟನೆಯ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಕೊಲೆಯಾದ ಬಾಲಕಿಯ ಜೊತೆಗೆ ತನಗೆ 3 ವರ್ಷಗಳ ಪರಿಚಯವಿತ್ತು. ತನ್ನನ್ನು ಪ್ರೀತಿಸುತ್ತಿದ್ದ ಈಕೆ ಇತ್ತೀಚೆಗೆ ದೂರವಾಗಲು ಪ್ರಯತ್ನಿಸಿದ್ದಳು. ಹುಡುಗಿ ತನ್ನನ್ನು ನಿರ್ಲಕ್ಷಿಸುತ್ತಿದ್ದರಿಂದ ತಾನು ಕೋಪಗೊಂಡಿದ್ದೆ. ಅಲ್ಲದೇ, ಬೇರೊಬ್ಬನ ಜೊತೆಗೆ ಸಂಪರ್ಕ ಹೊಂದಿದ್ದಳು. ಈ ವಿಷಯವಾಗಿ ಹಲವಾರು ಬಾರಿ ಕಿತ್ತಾಡಿಕೊಂಡಿದ್ದೇವೆ. ಇದು ವಿಕೋಪಕ್ಕೆ ತಿರುಗಿ ನಿನ್ನೆ ಕೊಲೆ ಮಾಡಿದೆ ಎಂದು ಸಾಹಿಲ್ ಪೊಲೀಸರೆದುರು ಒಪ್ಪಿಕೊಂಡಿದ್ದಾನೆ. ತಾನು ಕೊಲೆ ಮಾಡಿದ್ದರ ಬಗ್ಗೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದೂ ತಿಳಿಸಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

2 ಬಸ್​ ಬದಲಿಸಿ ಪರಾರಿ:ಭೀಕರವಾಗಿ ಕೊಲೆ ಮಾಡಿದ ಬಳಿಕ ಸಾಹಿಲ್ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದ. ಉತ್ತರ ಪ್ರದೇಶದ ಬುಲಂದ್​ಶಹರ್ ತಲುಪಲು ಎರಡು ಬಸ್​ಗಳನ್ನು ಬದಲಾಯಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೊದಲು ಆತ ರಿಥಾಲಾಗೆ ತೆರಳಿದ್ದ. ಅಲ್ಲಿ ಶಸ್ತ್ರಾಸ್ತ್ರಗಳನ್ನು ಎಸೆದಿದ್ದಾನೆ. ಬಳಿಕ ಬುಲಂದ್‌ಶಹರ್‌ಗೆ ಪರಾರಿಯಾಗಿದ್ದ. ಪ್ರಯಾಣದ ವೇಳೆ ಎರಡು ಬಸ್‌ಗಳನ್ನು ಬದಲಾಯಿಸಿದ್ದ. ಬಳಿಕ ಅಲ್ಲಿನ ತನ್ನ ಚಿಕ್ಕಮ್ಮನ ನಿವಾಸದಲ್ಲಿ ಅಡಗಿಕೊಂಡಿದ್ದ. ಸಾಹಿಲ್‌ನ ದಿಢೀರ್​ ಆಗಮನ ಕಂಡು ಚಿಕ್ಕಮ್ಮ, ಆತನ ತಂದೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆರೋಪಿ ಬುಲಂದ್​ಶಹರ್​ನಲ್ಲಿ ಇರುವುದು ಗೊತ್ತಾಗಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ಮರಣೋತ್ತರ ಪರೀಕ್ಷಾ ವರದಿ:ಬಾಲಕಿಯ ಭೀಕರ ಹತ್ಯೆ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಮಾಹಿತಿ ಬಂದಿದ್ದು, ಬೆಚ್ಚಿ ಬೀಳಿಸಿದೆ. ಬಾಲಕಿಯ ದೇಹದ ಮೇಲೆ 34 ಗಾಯದ ಗುರುತುಗಳಿವೆ. 20 ಕ್ಕೂ ಹೆಚ್ಚು ಬಾರಿ ಬರ್ಬರವಾಗಿ ಇರಿತವಾಗಿದೆ. ಸಿಮೆಂಟ್ ಚಪ್ಪಡಿಯಿಂದ ಎತ್ತಿ ಹಾಕಿದ ಕಾರಣ ತಲೆಬುರುಡೆ ಛಿದ್ರವಾಗಿದೆ ಎಂಬುದು ವರದಿಯಲ್ಲಿದೆ.

ಸಿಸಿಟಿವಿಯಲ್ಲಿ ಭೀಕರತೆ ಸೆರೆ:ರಾತ್ರಿ ವೇಳೆ ಬಾಲಕಿಯನ್ನು ಅಡ್ಡಗಟ್ಟಿದ ಹಂತಕ ಅವಳ ಮೇಲೆ ಹರಿತವಾದ ವಸ್ತುವಿನಿಂದ ದಾಳಿ ಮಾಡುತ್ತಿದ್ದ. ಈ ವೇಳೆ ಜನರು ಅಲ್ಲಿಯೇ ಓಡಾಡುತ್ತಿದ್ದರೂ ಸಹಾಯಕ್ಕೆ ಧಾವಿಸಿಲ್ಲ. ಬಾಲಕಿಯನ್ನು ಭೀಕರವಾಗಿ ಇರಿದ ಬಳಿಕ, ಅಲ್ಲಿಯೇ ಇದ್ದ ಸಿಮೆಂಟ್​ ಚಪ್ಪಡಿಯನ್ನು ಎತ್ತಿ ಹಾಕಿದ್ದಾನೆ. ತಲೆ, ದೇಹದ ಮೇಲೆ ಚಪ್ಪಡಿ ಎತ್ತಿ ಹಾಕಿದ್ದರಿಂದ ತಲೆಬುರುಡೆ ಛಿದ್ರವಾಗಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಹಾಯಕ್ಕೆ ಬರದ ಜನರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಎರಡು ದಿನ ಪೊಲೀಸ್​ ಕಸ್ಟಡಿಗೆ:ಬಾಲಕಿ ಹಂತಕ ಸಾಹಿಲ್​ನನ್ನು ದೆಹಲಿಯ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ವಿಚಾರಣೆಗಾಗಿ ಕೋರ್ಟ್​ ಆತನನ್ನು 2 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು ಉತ್ತರ ಪ್ರದೇಶದ ಬುಲನ್‌ಶಹರ್‌ನಿಂದ ಬಂಧಿಸಲ್ಪಟ್ಟ ಸಾಹಿಲ್‌ನನ್ನು ಮಂಗಳವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಏಳು ದಿನಗಳ ಕಸ್ಟಡಿಗೆ ನೀಡುವಂತೆ ಕೋರಿದರು. ಆದರೆ, ನ್ಯಾಯಾಲಯವು ಕೇವಲ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

ಇದನ್ನೂ ಓದಿ:ಮಗಳನ್ನು ಬರ್ಬರವಾಗಿ ಕೊಂದ ಸಾಹಿಲ್‌ ಖಾನ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ಪೋಷಕರ ಆಗ್ರಹ

ABOUT THE AUTHOR

...view details