ನವದೆಹಲಿ:ವಿಶ್ವಕಪ್ಗೆ ಬೆದರಿಕೆ ಹಾಕಿ ಭೀತಿ ಮೂಡಿಸಿದ್ದ ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ಭಯೋತ್ಪಾದಕ ಗುಂಪಿನ ಮುಖ್ಯಸ್ಥ ಗುರುಪತ್ವಂತ್ ಪನ್ನುನ್ ಇದೀಗ, ಇಸ್ರೇಲ್ ಮೇಲೆ ಹಮಾಸ್ ಮಾಡಿದ ದಾಳಿಯಂತೆ ಭಾರತದ ಮೇಲೆ ದಾಳಿ ಮಾಡಲಾಗುವುದು ಎಂದು ಮತ್ತೊಂದು ಬೆದರಿಕೆ ಹಾಕಿದ್ದಾನೆ.
ಕೆನಡಾದಲ್ಲಿದ್ದುಕೊಂಡು ಸಿಖ್ಸ್ ಫಾರ್ ಜಸ್ಟಿಸ್ ಭಯೋತ್ಪಾದಕ ಸಂಘಟನೆಯ ಪರವಾಗಿ ಕೆಲಸ ಮಾಡುತ್ತಿರುವ, ಖಲಿಸ್ತಾನಿ ನಾಯಕನಾಗಿ ಗುರುತಿಸಿಕೊಂಡಿರುವ ಪನ್ನುನ್ ಮಂಗಳವಾರ ವಿಡಿಯೋ ಹರಿಬಿಟ್ಟಿದ್ದಾನೆ. ಅದರಲ್ಲಿ ಭಾರತದ ಮೇಲೆ ಹಮಾಸ್ ಮಾದರಿಯ ದಾಳಿಯ ಬೆದರಿಕೆ ಒಡ್ಡಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಇತ್ತೀಚಿನ ವಿಡಿಯೋದಲ್ಲಿ ದೇಶದ ಜನರಿಗೆ 'ಬುಲೆಟ್ ಅಥವಾ ಬ್ಯಾಲೆಟ್' ಆಯ್ಕೆ ನೀಡಿದ್ದಾನೆ.
ಪ್ರಧಾನಿ ಮೋದಿ ಅವರು ಪ್ಯಾಲೆಸ್ಟೀನ್-ಇಸ್ರೇಲ್ ಸಂಘರ್ಷದಿಂದ ಪಾಠ ಕಲಿಯಬೇಕು. ಹಿಂಸೆ, ಹಿಂಸೆಯನ್ನೇ ಹುಟ್ಟುಹಾಕುತ್ತದೆ. ಭಾರತ ಪಂಜಾಬ್ ಅನ್ನು ಆಕ್ರಮಿಸಿಕೊಳ್ಳಲು ನೋಡಿದರೆ, ಹಿಂಸೆಯ ಮೂಲಕವೇ ಪ್ರತಿಕ್ರಿಯಿಸಲಾಗುವುದು. ಇದಕ್ಕೆ ಮೋದಿ ಮತ್ತು ಭಾರತವೇ ಹೊಣೆ. ಸಿಖ್ ಸಂಘಟನೆಯು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದೆ. ಪಂಜಾಬ್ನ ವಿಮೋಚನೆಯ ಕಾಲ ಬಂದಿದೆ. ದೇಶದ ಜನರೇ ನಿಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು ಬ್ಯಾಲೆಟ್ ಮತ್ತೊಂದು ಬುಲೆಟ್. ನೀವೇ ಆಯ್ಕೆ ಮಾಡಿಕೊಳ್ಳಿ ಎಂದು ವಿಡಿಯೋದಲ್ಲಿ ಬೆದರಿಕೆ ಒಡ್ಡುವಂತೆ ಬಡಬಡಿಸಿದ್ದಾನೆ.