ಕರ್ನಾಟಕ

karnataka

By

Published : Jan 1, 2023, 10:34 PM IST

ETV Bharat / bharat

ಸ್ಕೂಟಿಗೆ ಡಿಕ್ಕಿ ಹೊಡೆದು ಯುವತಿಯ ಎಳೆದೊಯ್ದ ಕಾರು.. 4 ಕಿಮೀ ದೂರದಲ್ಲಿ ನಗ್ನ ಸ್ಥಿತಿಯಲ್ಲಿ ಸಂತ್ರಸ್ತೆ ಶವ ಪತ್ತೆ

ದೆಹಲಿಯಲ್ಲಿ ಮತ್ತೊಂದು ಅಘಾತಕಾರಿ ಘಟನೆ - ಸ್ಕೂಟಿಗೆ ಡಿಕ್ಕಿ ಹೊಡೆದು ಯುವತಿಯನ್ನು ಎಳೆದೊಯ್ದ ಕಾರು - 4 ಕಿಲೋಮೀಟರ್​ ದೂರದಲ್ಲಿ ನಗ್ನ ಸ್ಥಿತಿಯಲ್ಲಿ ಯುವತಿ ಶವ ಪತ್ತೆ

scooty-riding-girl-dragged-for-4-km-by-five-boys-in-car-in-delhi-found-nude-body
ಸ್ಕೂಟಿಗೆ ಡಿಕ್ಕಿ ಹೊಡೆದು ಯುವತಿಯ ಎಳೆದೊಯ್ದ ಕಾರು: 4 ಕಿಮೀ ದೂರದಲ್ಲಿ ನಗ್ನ ಸ್ಥಿತಿಯಲ್ಲಿ ಸಂತ್ರಸ್ತೆ ಶವ ಪತ್ತೆ

ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಹೊಸ ವರ್ಷದ ಆಚರಣೆ ದಿನವೇ ಸ್ಕೂಟಿಯಲ್ಲಿ ಹೋಗುತ್ತಿದ್ದ 20 ವರ್ಷದ ಯುವತಿಯನ್ನು ಕಾರಿನಲ್ಲಿ ಬಂದ ಐವರು ಯುವಕರು ಸುಮಾರು 4 ಕಿಲೋಮೀಟರ್​ವರೆಗೆ ಎಳೆದೊಯ್ದಿದ್ದಾರೆ. ಈ ಘಟನೆ ನಂತರ ಸಂತ್ರಸ್ತ ಯುವತಿಯು ನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಹಲವು ಅನುಮಾನಗಳಿಗೂ ಕಾರಣವಾಗಿದೆ.

ದೆಹಲಿಯ ಹೊರವಲಯದ ಕಂಝವಾಲಾ ಪ್ರದೇಶದಲ್ಲಿ ಡಿಸೆಂಬರ್ 31 ಮತ್ತು ಜನವರಿ 1ರ ತಡರಾತ್ರಿ ಆಘಾತಕಾರಿ ಘಟನೆ ನಡೆದಿದೆ. ಈ ಬಗ್ಗೆ ಭಾನುವಾರ ಬೆಳಗಿನ ಜಾವ 3.24ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಯುವತಿಯ ಶವವು ನಗ್ನ ಸ್ಥಿತಿಯಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಹೀಗಾಗಿಯೇ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ನಂತರ ಆಕೆಯ ಶವವನ್ನು ಎಳೆದೊಯ್ದು ಬಿಸಾಡಲಾಗಿತ್ತು ಎಂದು ಪೊಲೀಸರು ಮೊದಲಿಗೆ ಶಂಕಿಸಿದ್ದರು.

ಆದರೆ, ನಂತರ ದುಷ್ಟರು, ಯುವತಿಯನ್ನು ಎಳೆದೊಯ್ದಿರುವ ಕಾರಣ ಆಕೆಯ ಸ್ಕೂಟಿ ಅಪಘಾತಕ್ಕೀಡಾಗಿ ಮತ್ತು ಕಾರಿನ ಚಕ್ರಕ್ಕೆ ಆಕೆಯ ಬಟ್ಟೆ ಸಿಕ್ಕಿಹಾಕಿಕೊಂಡು ಸಾವಿಗೀಡಾಗಿದ್ದಾಳೆ ಎಂಬ ಮಾಹಿತಿ ಸಹ ಪೊಲೀಸರಿಗೆ ಲಭ್ಯವಾಗಿದೆ. ಇದರ ಆಧಾರದ ಮೇಲೆ ಸದ್ಯ ಕಾರಿನಲ್ಲಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ದೀಪಕ್ ಖನ್ನಾ, ಅಮಿತ್ ಖನ್ನಾ, ಕ್ರಿಶನ್, ಮಿತ್ತು ಹಾಗೂ ಮನೋಜ್ ಮಿತ್ತಲ್ ಎಂದು ಗುರುತಿಸಲಾಗಿದೆ.

ನಡೆದಿದ್ದು ಏನು?: ಹೊಸ ವರ್ಷ ಆಚರಣೆಯ ಹೊಸ್ತಿಲಲ್ಲೇ ಯುವತಿಯೊಬ್ಬಳನ್ನು ಕಾರಿಗೆ ಕಟ್ಟಿ ಎಳೆದುಕೊಂಡು ಹೋಗಲಾಗುತ್ತಿದೆ ಎಂದು ಬೆಳಗಿನ ಜಾವ 3.24ರ ಸುಮಾರಿಗೆ ಪೊಲೀಸ್​ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಅಲ್ಲಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕರೆ ಮಾಡಿದವರ ಮೊಬೈಲ್ ಸಂಖ್ಯೆಗೆ ಕಾಂಜಾವಾಲಾ ಪೊಲೀಸ್ ಠಾಣೆಯ ತಂಡ ನಿರಂತರವಾಗಿ ಸಂಪರ್ಕಿಸಿತ್ತು. ಇದಾದ ನಂತರ ಯುವತಿಯನ್ನು ಎಳೆದೊಯ್ದುತ್ತಿದ್ದ ಕಾರಿನ ಗುರುತು ಪತ್ತೆಯಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಕರೆ ಸ್ವೀಕರಿಸಿದ ನಂತರ ಮತ್ತು ಕಾರಿನ ಗುರುತು ಪತ್ತೆಯಾದ ನಂತರ ತಕ್ಷಣವೇ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಸಿಬ್ಬಂದಿಯನ್ನು ಅಲರ್ಟ್​ ಮಾಡಿ ಕಾರಿಗಾಗಿ ಹುಡುಕಾಟ ನಡೆಸಲಾಗಿತ್ತು. ಈ ವೇಳೆ ಕಂಜ್ವಾಲಾ ಪ್ರದೇಶದಲ್ಲಿ ಯುವತಿಯ ಮೃತದೇಹದ ಬಿದ್ದಿರುವ ಬಗ್ಗೆ ಪೊಲೀಸ್​ ನಿಯಂತ್ರಣ ಕೊಠಡಿಗೆ ಬೆಳಗಿನ ಜಾವ 4.11ರ ಸುಮಾರಿಗೆ ಎರಡನೇ ಕರೆ ಬಂದಿತ್ತು ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ:ಹೊಸ ವರ್ಷಾಚರಣೆಯಲ್ಲಿ ಸ್ನೇಹಿತರ ನಡುವೆ ಗಲಾಟೆ: ಯುವಕನಿಗೆ ಚಾಕು ಇರಿತ

ಅಲ್ಲಿಂದ ನೇರವಾಗಿ ಯುವತಿಯ ಮೃತದೇಹ ಬಿದ್ದಿರುವ ಸ್ಥಳಕ್ಕೆ ರೋಹಿಣಿ ಜಿಲ್ಲಾ ಅಪರಾಧ ವಿಭಾಗದ ತಂಡ ರವಾನಿಸಲಾಯಿತು. ನಂತರ ಯುವತಿಯನ್ನು ಮಂಗೋಲ್ಪುರಿಯ ಎಸ್‌ಜಿಎಂ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಯುವತಿ ಸಾವನ್ನಪ್ಪಿರುವ ಬಗ್ಗೆ ಎಂದು ಘೋಷಿಸಿದರು. ನಂತರ ಅಪರಾಧ ವಿಭಾಗದ ಪೊಲೀಸರು ಇಡೀ ಸ್ಥಳವನ್ನು ಪರಿಶೀಲಿಸಿದರು. ನಂತರ ವಿವಿಧ ಕೋನಗಳಿಂದಲೂ ಘಟನಾ ಸ್ಥಳದಲ್ಲಿ ವಿಧಿವಿಜ್ಞಾನದ ಸಾಕ್ಷ್ಯವನ್ನು ಸಹ ಸಂಗ್ರಹಿಸಲಾಗಿದೆ. ಈ ವೇಳೆ ಕಾರನ್ನು ಕೂಡ ಪತ್ತೆ ಹಚ್ಚಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಕಾರು ಪತ್ತೆಯಾದ ತಕ್ಷಣವೇ ಅದರಲ್ಲಿ ಚಲಿಸುತ್ತಿದ್ದ ಆರೋಪಿಗಳನ್ನೂ ಪತ್ತೆ ಹಚ್ಚಿ ವಶಕ್ಕೆ ಪಡೆಸಲಾಯಿತು. ನಂತರ ಪೊಲೀಸರು ಎಲ್ಲ ಆರೋಪಿಗಳನ್ನು ವಿಚಾರಣೆ ಒಳಪಡಿಸಿದ್ದು, ಆಗ ಸುಲ್ತಾನಪುರಿ ಪ್ರದೇಶದಲ್ಲಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತಕ್ಕೀಡಾಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈ ಅಪಘಾತದ ನಂತರ ಸಂತ್ರಸ್ತೆ ಕಾರಿನ ಚಕ್ರಗಳಿಗೆ ಸಿಕ್ಕಿಹಾಕಿಕೊಂಡು ಸ್ವಲ್ಪ ದೂರ ಎಳೆದುಕೊಂಡು ಹೋಗಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಇತ್ತ, ಸಂತ್ರಸ್ತೆಯ ಸೂಟ್ಕಿ ಸಹ ಪತ್ತೆಯಾಗಿದ್ದು, ಸ್ಕೂಟಿ ಸಂಖ್ಯೆಯನ್ನು ಆಧರಿಸಿ ಹೆಚ್ಚಿನ ತನಿಖೆ ನಡೆಸಿದಾಗ ಅದು ಸಂತ್ರಸ್ತೆಗೆ ಸೇರಿರುವುದಾಗಿಯೂ ಕಂಡುಬಂದಿದೆ ಎಂದು ಹೊರ ದೆಹಲಿಯ ಡಿಸಿಪಿ ಹರೇಂದ್ರ ಸಿಂಗ್ ತಿಳಿಸಿದ್ದಾರೆ.

ದೆಹಲಿ ಪೊಲೀಸರಿಗೆ ನೋಟಿಸ್​: ನಗ್ನ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾದ ಈ ಕುರಿತು ನಿಖರವಾದ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ನೋಟಿಸ್ ಜಾರಿ ಮಾಡಿದ್ದಾರೆ. ಕುಡಿದ ಅಮಲಿನಲ್ಲಿ ಕೆಲವು ಯುವಕರು ಯುವತಿಯ ಸ್ಕೂಟಿಗೆ ಕಾರಿನಿಂದ ಡಿಕ್ಕಿ ಹೊಡೆದು ಹಲವಾರು ಕಿಲೋಮೀಟರ್​ವರೆಗೆ ಎಳೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯು ತುಂಬಾ ಭಯಾನಕವಾಗಿದೆ. ಈ ಬಗ್ಗೆ ಸಂಪೂರ್ಣ ಸತ್ಯ ಹೊರಬರಬೇಕೆಂದು ಸ್ವಾತಿ ಮಲಿವಾಲ್​ ಹೇಳಿದ್ದಾರೆ.

ಇದನ್ನೂ ಓದಿ:ದಾವಣಗೆರೆಯಲ್ಲಿ ಹೊಸ ವರ್ಷಾಚರಣೆ ವೇಳೆ ಫೋಟೋ ಗಲಾಟೆ : ಯುವಕ ಯುವತಿಯರ ಮೇಲೆ ಪುಂಡರಿಂದ ಹಲ್ಲೆ

ABOUT THE AUTHOR

...view details