ನವದೆಹಲಿ:ಕರ್ನಾಟಕದಿಂದ 24,000 ಕ್ಯೂಸೆಕ್ ಕಾವೇರಿ ನೀರು ಬಿಡಲು ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರಕಾರ ಸಲ್ಲಿಸಿರುವ ಮನವಿಗೆ ಯಾವುದೇ ಆದೇಶ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಸೋಮವಾರ ಕಾವೇರಿ ನದಿ ನೀರು ಪ್ರಾಧಿಕಾರದ ಸಭೆ ನಿಗದಿಪಡಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಪೀಠದ ಗಮನಕ್ಕೆ ತಂದರು. ಆ ಬಳಿಕ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ (ಸಿಡಬ್ಲ್ಯೂಎಂಎ) ಕರ್ನಾಟಕ ಬಿಡುಗಡೆ ಮಾಡಿರುವ ನೀರಿನ ಪ್ರಮಾಣದ ಬಗ್ಗೆ ವರದಿ ನೀಡುವಂತೆ ಪ್ರಾಧಿಕಾರಕ್ಕೆ ಸೂಚನೆ ನೀಡಿತು.
ಈ ವಿಷಯದಲ್ಲಿ ನಮಗೆ ಯಾವುದೇ ಪರಿಣತಿ ಇಲ್ಲ. ಮುಂದಿನ ಹದಿನೈದು ದಿನಗಳ ಕಾಲ ನೀರು ಹರಿಸುವುದನ್ನು ನಿರ್ಧರಿಸಲು ಸೋಮವಾರ ಪ್ರಾಧಿಕಾರ ಸಭೆ ನಡೆಸುತ್ತಿದೆ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಇದೇ ವೇಳೆ ಕೋರ್ಟ್ಗೆ ಮಾಹಿತಿ ನೀಡಿದರು. ನೀರು ಬಿಡಲು ನೀಡಿರುವ ನಿರ್ದೇಶನಗಳನ್ನು ಪಾಲಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸಿಡಬ್ಲ್ಯೂಎಂಎ ತನ್ನ ವರದಿಯನ್ನು ಸಲ್ಲಿಸುವುದು ಸೂಕ್ತ ಎಂದು ನಾವು ಕಂಡುಕೊಂಡಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಪಿಕೆ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿತು. ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಹಾಗೂ ಕರ್ನಾಟಕದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರು.
ಸಿಡಬ್ಲ್ಯುಎಂಎ ನಿಗದಿಪಡಿಸಿದ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಹೇಳಿದೆ. ಆದರೆ, ತಮಿಳುನಾಡಿಗೆ ತಲುಪಲು ಮೂರು ದಿನಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಪ್ರಾಧಿಕಾರ ಆದೇಶ ಹೊರಡಿಸಿದ್ದರೂ ಕರ್ನಾಟಕ ನೀರು ಹರಿಸಿಲ್ಲ ಎಂಬ ತಮಿಳುನಾಡಿನ ವಾದವನ್ನೂ ಸುಪ್ರೀಂ ಕೋರ್ಟ್ ಗಮನಿಸಿದೆ. ಕರ್ನಾಟಕ ಸರ್ಕಾರದ ಪರ ವಕೀಲರು ಇದು ಸಂಕಷ್ಟದ ವರ್ಷವಾಗಿದ್ದು, ಮಳೆಯ ಕೊರತೆಯಿದೆ ಎಂದು ವಾದಿಸಿದರು.
ಆಗಸ್ಟ್ 11 ರಂದು ಪ್ರಾಧಿಕಾರವು ತಮಿಳುನಾಡಿಗೆ ಬಿಡುಗಡೆ ಮಾಡುವ ನೀರಿನ ಪ್ರಮಾಣವನ್ನು 15,000 ಕ್ಯೂಸೆಕ್ನಿಂದ 10,000 ಕ್ಯೂಸೆಕ್ಗೆ ಇಳಿಸಿದೆ. ಇದರಿಂದ ತಮಿಳುನಾಡಿನಲ್ಲಿ ಬೆಳೆಯ ಮೇಲೆ ಪರಿಣಾಮ ಬೀರಿದೆ ಎಂದು ತಮಿಳುನಾಡು ಪರ ವಕೀಲರು ವಾದಿಸಿದರು. ‘ನೀವು ಪ್ರಾಧಿಕಾರದ ಮುಂದೆ ಏಕೆ ಹೋಗಬಾರದು. ನಮಗೆ ಇದರಲ್ಲಿ ಪರಿಣಿತಿ ಇಲ್ಲ’ ಎಂದು ಪೀಠವು ವಕೀಲರಿಗೆ ಹೇಳಿತು.
ಕೇಂದ್ರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಐಶ್ವರ್ಯ ಭಾಟಿ, ಮುಂದಿನ ಹದಿನೈದು ದಿನಗಳವರೆಗೆ ನೀರು ಬಿಡಲು ನಿರ್ಧರಿಸಲು ಪ್ರಾಧಿಕಾರವು ಸೋಮವಾರ ಸಭೆಯನ್ನು ನಿಗದಿಪಡಿಸಿದೆ ಎಂದು ಹೇಳಿದರು. ವಕೀಲರ ವಾದ ಆಲಿಸಿದ ನಂತರ, ಉನ್ನತ ನ್ಯಾಯಾಲಯವು "ನೀರಿನ ಬಿಡುಗಡೆಗೆ ನೀಡಲಾದ ನಿರ್ದೇಶನಗಳನ್ನು ಅನುಸರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು CWMA ತನ್ನ ವರದಿಯನ್ನು ಸಲ್ಲಿಸುವುದು ಸೂಕ್ತವೆಂದು ನಾವು ಕಂಡುಕೊಂಡಿದ್ದೇವೆ" ಎಂದು ಹೇಳಿತು.
ಈ ಆದೇಶವನ್ನು ಪ್ರಾಧಿಕಾರಕ್ಕೆ ತಿಳಿಸುವಂತೆ ಮತ್ತು ಮುಂದಿನ ಶುಕ್ರವಾರದೊಳಗೆ ವರದಿಯನ್ನು ನಮಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಎಎಸ್ಜಿಗೆ ಹೇಳಿದೆ. ಅಧಿಕಾರಿಗಳ ಆದೇಶಗಳು ತನ್ನ ಹಿತಾಸಕ್ತಿಗೆ ವ್ಯತಿರಿಕ್ತವಾಗಿದೆ ಎಂದು ಕರ್ನಾಟಕ ಸರ್ಕಾರ ವಾದಿಸಿದೆ ಮತ್ತು ಹಂಚಿಕೆ ಮಾಡಿದ ಪಾಲನ್ನು ಕಡಿಮೆ ಮಾಡಲು ಅರ್ಜಿ ಸಲ್ಲಿಸಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ನೀರಿನ ಹಂಚಿಕೆಯಲ್ಲಿ ಹೆಚ್ಚಳವಾಗಬೇಕು ಎಂಬ ತಮಿಳುನಾಡಿನ ವಾದವನ್ನು ಸುಪ್ರೀಂ ಕೋರ್ಟ್ ಕೂಡ ಗಮನಿಸಿದೆ. “ಇದನ್ನು ಅಧಿಕಾರಿಗಳು ನಿರ್ಧರಿಸಲಿ. ಮುಂದಿನ ಶುಕ್ರವಾರ ಪ್ರಕರಣ ಪಟ್ಟಿ ಮಾಡಲಾಗುವುದು”ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.