ಕರ್ನಾಟಕ

karnataka

ವಾರ್ಷಿಕ ಮಂಡಲ ಮಕರವಿಳಕ್ಕು ಯಾತ್ರೆ: ಭಕ್ತರಿಗೆ ಬಾಗಿಲು ತೆರೆದ ಶಬರಿಮಲೆ ದೇವಾಲಯ

By ETV Bharat Karnataka Team

Published : Nov 16, 2023, 10:50 PM IST

Sabarimala Temple: ವಾರ್ಷಿಕ ಮಂಡಲ ಮಕರವಿಳಕ್ಕು ಯಾತ್ರೆ ನಿಮಿತ್ತ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೆ.

Etv Bharat
Etv Bharat

ಪತ್ತನಂತಿಟ್ಟ (ಕೇರಳ): ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ಇಂದು ಭಕ್ತರಿಗಾಗಿ ಬಾಗಿಲು ತೆರೆದಿದೆ. ವಾರ್ಷಿಕ ಮಂಡಲ ಮಕರವಿಳಕ್ಕು ಯಾತ್ರೆ ನಿಮಿತ್ತ ಬಾಗಿಲು ತೆರೆಯಲಾಗಿದ್ದು, ಭಕ್ತಾದಿಗಳು ಸಾಲುಗಟ್ಟಿದ್ದರು.

ತಂತ್ರಿ ಕಾಂತಾರ ಮಹೇಶ್ ಮೋಹನರು ಸಮ್ಮುಖದಲ್ಲಿ ಪ್ರಧಾನ ಅರ್ಚಕ ಕೆ.ಜಯರಾಮನ್ ನಂಬೂದಿರಿ ಅವರು ಗುರುವಾರ ಸಂಜೆ 5 ಗಂಟೆಗೆ ಬಾಗಿಲು ತೆರೆದರು. ಇದೇ ವೇಳೆ, ಮುವಾಟ್ಟುಪುಳ ಎನನಲ್ಲೂರು ಪುತಿಲ್ಲಾತ್ ಮನಯಿಲ್ ಪಿ.ಎನ್.ಮಹೇಶ್ ನಂಬೂತಿರಿ ಅವರು ಶಬರಿಮಲೆ ಅಯ್ಯಪ್ಪ ದೇವಸ್ಥಾನದ ನೂತನ ಪ್ರಧಾನ ಅರ್ಚಕರಾಗಿ (ಮೇಲ್ಶಾಂತಿ) ಹಾಗೂ ಮಾಲಿಕಪ್ಪುರಂ ಮುಖ್ಯ ಅರ್ಚಕರಾಗಿ ತ್ರಿಶೂರ್ ವಡಕೆಕಾಡ್ ಪೂಂಗಟ್​ಮನದ ಪಿ.ಜಿ.ಮುರಳಿ ಅವರು ಮಹೇಶ್ ಮೋಹನರು ಅವರ ಸಮ್ಮುಖದಲ್ಲಿ ಸನ್ನಿಧಾನದಲ್ಲಿ ಅಧಿಕಾರ ಸ್ವೀಕರಿಸಿದರು.

ನಾಳೆ ಶುಕ್ರವಾರ (ನ.17) ಬೆಳಗ್ಗೆ 4 ಗಂಟೆಗೆ ನೂತನ ಪ್ರಧಾನ ಅರ್ಚಕರು ಗರ್ಭಗುಡಿಯನ್ನು ತೆರೆಯಲಿದ್ದಾರೆ. ನಂತರದ ದಿನಗಳಲ್ಲಿ ದೇವಸ್ಥಾನವು ಮುಂಜಾನೆ 4 ಗಂಟೆಗೆ ತೆರೆದು ಮಧ್ಯಾಹ್ನ 1 ಗಂಟೆಗೆ ಮುಚ್ಚಲಿದೆ. ಬಳಿಕ ಸಂಜೆ 4 ಗಂಟೆಗೆ ಮತ್ತೆ ದೇವಸ್ಥಾನ ತೆರೆಯಲಿದ್ದು, ರಾತ್ರಿ 11 ಗಂಟೆಗೆ ಮುಚ್ಚುತ್ತದೆ. ಡಿಸೆಂಬರ್ 27ರಂದು ಮಂಡಲ ಪೂಜೆ ಇರುತ್ತದೆ. ಧಾರ್ಮಿಕ ವಿಧಿ ವಿಧಾನಗಳ ನಂತರ ರಾತ್ರಿ 10 ಗಂಟೆಗೆ ದೇವಸ್ಥಾನ ಮುಚ್ಚಲಿದೆ. ಡಿಸೆಂಬರ್ 30ರ ಸಂಜೆ ಮಕರವಿಳಕ್ಕು ಉತ್ಸವಕ್ಕಾಗಿ ದೇವಾಲಯವು ಪುನಃ ತೆರೆಯಲ್ಪಡುತ್ತದೆ.

ಜನವರಿ 15ರಂದು ಮಕರವಿಳಕ್ಕು ನೆರವೇರಲಿದ್ದು, ತೀರ್ಥಯಾತ್ರೆಯು ಜನವರಿ 20ರಂದು ಮುಕ್ತಾಯಗೊಳ್ಳಲಿದೆ. ಸುಗಮ ದರ್ಶನವನ್ನು ಖಚಿತಪಡಿಸಿಕೊಳ್ಳಲು ಕೇರಳ ಪೊಲೀಸರು ಮತ್ತು ದೇವಸ್ವಂ ಮಂಡಳಿಯು ಸನ್ನಿಧಾನ, ನಿಲಕ್ಕಲ್ ಮತ್ತು ವಡಸ್ಸೆರಿಕ್ಕರ ಸೇರಿ ಹಲವೆಡೆ ಸಂಪೂರ್ಣ ವ್ಯವಸ್ಥೆಗಳನ್ನು ಮಾಡಿದೆ. ಈ ವರ್ಷ ಡ್ರೋನ್ ಕಣ್ಗಾವಲು ಇರಿಸಲಾಗಿದೆ. ಪ್ರಮುಖ ಕಡೆಗಳಲ್ಲಿ 76 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.

ಮುಂಬರುವ ಮಂಡಲ ಪೂಜೆ ಹಾಗೂ ಮಕರವಿಳಕ್ಕು ಪೂಜೆ ಋತುವಿನಲ್ಲಿ ಶಬರಿಮಲೆಗೆ ಬರುವ ಯಾತ್ರಿಕರಿಗಾಗಿ ಕೇರಳ ಅರಣ್ಯ ಇಲಾಖೆಯು 'ಅಯ್ಯನ್​' ಎಂಬ ಆ್ಯಪ್ ಅಭಿವೃದ್ಧಿ ಪಡಿಸಿದೆ. ಮಲಯಾಳಂ ಮತ್ತು ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲ ನಾಲ್ಕು ಭಾಷೆಗಳ ಜೊತೆಗೆ ಹಿಂದಿಯಲ್ಲೂ ಆ್ಯಪ್​ನಲ್ಲಿ ಮಾಹಿತಿ ಲಭ್ಯವಿದೆ. ಸನ್ನಿಧಾನಂ ಮಾರ್ಗಗಳಲ್ಲಿ ಲಭ್ಯವಿರುವ ಸೇವೆಗಳು, ನೈಸರ್ಗಿಕ ಚಾರಣ ಮಾರ್ಗಗಳ ಕುರಿತು ಈ ಆ್ಯಪ್ ಮೂಲಕ ತಿಳಿಯಬಹುದಾಗಿದೆ. ಯಾತ್ರೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಆಚರಣೆಗಳು ಮತ್ತು ಸಾಮಾನ್ಯ ಮಾರ್ಗಸೂಚಿಗಳನ್ನೂ ಆ್ಯಪ್‌ನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ:ಶಬರಿಮಲೆ ಯಾತ್ರಾರ್ಥಿಗಳಿಗಾಗಿ 'ಅಯ್ಯನ್​' ಮಾರ್ಗಸೂಚಿ ಆ್ಯಪ್ ಅಭಿವೃದ್ಧಿ: ಕನ್ನಡ ಸೇರಿ ಐದು ಭಾಷೆಗಳಲ್ಲಿ ಲಭ್ಯ

ABOUT THE AUTHOR

...view details