ಕರ್ನಾಟಕ

karnataka

ETV Bharat / bharat

ಸಾಮ್ನಾ ಸಂಪಾದಕೀಯದಲ್ಲಿ ಬೆಳಗಾವಿ ಘರ್ಷಣೆ ವಿವರ : ಸರ್ಕಾರಕ್ಕೆ ಘೇರಾವ್​ ಹಾಕಿದ ಪತ್ರಿಕೆ

ಶಿವಾಜಿ ಇಲ್ಲದಿದ್ದರೆ ಪಾಕಿಸ್ತಾನದ ಗಡಿ ನಮ್ಮ ಮನೆಗಳಿಗೆ ತಲುಪುತ್ತಿತ್ತು . ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಶಿವಾಜಿ ಮಹಾರಾಜರ ಇಂತಹ ಅವಹೇಳನ ನಡೆಯುತ್ತಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಇದೊಂದು ಸಣ್ಣ ಘಟನೆ ಎಂದು ಹೇಳಿಕೆ ನೀಡುವ ಮೂಲಕ ಮಹಾರಾಜರಿಗೆ ಮಾಡಿದ ಅವಮಾನ ಎಂದು ಸಾಮ್ನಾ ಪತ್ರಿಕೆಯಲ್ಲಿ ಬರೆಯಲಾಗಿದೆ..

By

Published : Dec 20, 2021, 4:04 PM IST

saamana-editorial-on-ch-shivaji-maharaj-statue-vandalisation-in-karnataka
ಸರ್ಕಾರಕ್ಕೆ ಘೇರಾವ್​ ಹಾಕಿದ ಪತ್ರಿಕೆ

ಹೈದರಾಬಾದ್​ : ಬೆಂಗಳೂರಿನಲ್ಲಿ ಶನಿವಾರ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅಪಮಾನ ಮಾಡಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಈ ಘಟನೆಗೆ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧೆಡೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ ನಡೆದ ಶಿವಾಜಿ ಅಪಮಾನದ ಘಟನೆಯನ್ನು ಸಣ್ಣ ಘಟನೆ ಎಂದು ಹೇಳಿಕೆ ನೀಡುವ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ ಶಿವಾಜಿ ಪ್ರೇಮಿಗಳ ಗಾಯಕ್ಕೆ ಉಪ್ಪು ಸವರಿದಿದ್ದಾರೆ ಎಂದು ಸಾಮ್ನಾ ಸಂಪಾದಕೀಯದಲ್ಲಿ ಬರೆಯಲಾಗಿದೆ.

ವಿವರ: ರಾಷ್ಟ್ರ ಪುರುಷ, ಹಿಂದೂಗಳ ಅಖಿಲ ಭಾರತ ಆಧುನಿಕ ಇತಿಹಾಸದ ಯುಗ-ನಿರ್ಮಾಪಕ, ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಕಳೆದ ನಾಲ್ಕು ಶತಮಾನಗಳಿಂದ ಸದಾ 'ಪುಣ್ಯಶ್ಲೋಕ ಅಭಿಮಾನ ಬಿಂದು'ರಾಗಿ ನಮ್ಮ ನಡುವೆ ಇದ್ದಾರೆ. ಎಂಟು ದಿನಗಳ ಹಿಂದೆ ದೇಶದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಾಯಗಡಕ್ಕೆ ತೆರಳಿ ಛತ್ರಪತಿಗೆ ನಮಸ್ಕರಿಸಿ ದೆಹಲಿಗೆ ಮರಳಿದ್ದರು.

ಹಾಗೆ ಸುಮಾರು ನಾಲ್ಕು ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ಕಾಶಿಯ ವಿಶ್ವನಾಥ ದೇವಾಲಯದ ಸಂಕೀರ್ಣದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ್ದರು. ಆ ಸಮಾರಂಭದಲ್ಲಿ ಮೋದಿಯವರು ಶಿವಾಜಿಯ ಶೌರ್ಯವನ್ನು ಮುಕ್ತಕಂಠದಿಂದ ಹೊಗಳಿದ್ದರು. ಮೊಘಲರು ಕಾಶಿ ಸೇರಿದಂತೆ ಅನೇಕ ಪ್ರಾಂತ್ಯಗಳಲ್ಲಿ ದೇವಾಲಯಗಳನ್ನು ಧ್ವಂಸಗೊಳಿದಾಗ ಆ ಸಮಯದಲ್ಲಿ ಶಿವಾಜಿಯ ಭವಾನಿ ಖಡ್ಗವು ರಕ್ಷಣೆಗಾಗಿ ಹೊಳೆಯಿತು ಎಂದು ಪ್ರಧಾನಿ ಮೋದಿ ಆ ವೇಳೆ ಹೇಳಿದ್ದರು.

ಶಿವಾಜಿ ಇಲ್ಲದಿದ್ದರೆ ಪಾಕಿಸ್ತಾನದ ಗಡಿ ನಮ್ಮ ಮನೆಗಳಿಗೆ ತಲುಪುತ್ತಿತ್ತು ಎಂದು ಯಶವಂತರಾವ್ ಚೌಹಾಣ್ ಒಮ್ಮೆ ಹೇಳಿದ್ದರು. ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಶಿವಾಜಿ ಮಹಾರಾಜರ ಇಂತಹ ಅವಹೇಳನ ನಡೆಯುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಇದೊಂದು ಸಣ್ಣ ಘಟನೆ ಎಂದು ಹೇಳಿಕೆ ನೀಡುವ ಮೂಲಕ ಮಹಾರಾಜರಿಗೆ ಮಾಡಿದ ಅವಮಾನವೂ ಹೌದು ಎಂದು ಬರೆಯಲಾಗಿದೆ.

ಛತ್ರಪತಿ ಶಿವಾಜಿಯ ಅವಹೇಳನದ ಸುದ್ದಿ ತಾಜಾ ಆಗಿರುವಾಗಲೇ ಅದೇ ರಾತ್ರಿ ಬೆಂಗಳೂರಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಕೃತಿಗೂ ಅವಹೇಳನವಾಗಿತ್ತು. ರಾಣಿ ಚೆನ್ನಮ್ಮನ ಪುತ್ಥಳಿಗೆ ಅವಹೇಳನ ಮಾಡಿದ ಘಟನೆ ನಡೆದಿದ್ದು, ಇದು ವಿರಳ ಘಟನೆಯಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ ಎಂದು ಸಂಪಾದಕೀಯದಲ್ಲಿ ಉಲ್ಲೇಖ ಮಾಡಲಾಗಿದೆ.

ಪತ್ರಿಕೆ ಸಂಪಾದಕೀಯ ಪುಟ

ಕರ್ನಾಟಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಅವರ ವಿಚಾರಗಳನ್ನು ಅವಮಾನಿಸುವ ಘಟನೆ ಪದೇಪದೆ ನಡೆಯುತ್ತಿದ್ದರೆ ಮತ್ತೊಂದೆಡೆ ಪ್ರಧಾನಿ ಮೋದಿ ಕಾಶಿಗೆ ತೆರಳಿ ಛತ್ರಪತಿ ಶಿವಾಜಿಯವರ ಶೌರ್ಯವನ್ನು ಹೇಳುತ್ತಿದ್ದಾರೆ. ಬೊಮ್ಮಾಯಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ಬೆಳಗಾವಿ ಸೇರಿದಂತೆ ಗಡಿ ಭಾಗದಲ್ಲಿ ಬಿಜೆಪಿ ಸರ್ಕಾರ ಜೈ ಭವಾನಿ, ಜೈ ಶಿವಾಜಿ ಘೋಷಣೆಗಳನ್ನು ನಿಷೇಧಿಸಿದೆ.

ಬೆಳಗಾವಿ ಮಹಾನಗರ ಪಾಲಿಕೆಯಿಂದ ಶಿವಾಜಿ ಕೇಸರಿ ಧ್ವಜವನ್ನು ಬಲವಂತವಾಗಿ ತೆರವು ಮಾಡಲಾಗಿದೆ. ಮಂಗುತ್ತಿಯಲ್ಲಿದ್ದ ಶಿವಾಜಿ ವಿಗ್ರಹವನ್ನು ರಾತ್ರೋರಾತ್ರಿ ಹೊರ ತೆಗೆಯಲಾಗಿದೆ. ಇಷ್ಟೆಲ್ಲಾ ಮಾಡುತ್ತಿರುವಾಗ ದೆಹಲಿಯ ಬಿಜೆಪಿ ನಾಯಕರಿಗೆ ಶಿವಾಜಿಯ ಶೌರ್ಯ ನೆನಪಾಗದಿರುವುದು ಅಚ್ಚರಿ ಮೂಡಿಸಿದೆ ಎಂದು ಪತ್ರಿಕೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

2014ರಲ್ಲಿ ಮೋದಿಯವರು ಮತ ಕೇಳಲು ಮಹಾರಾಷ್ಟ್ರಕ್ಕೆ ಬಂದಾಗ, ಶಿವಾಜಿ ಮಹಾರಾಜರ ಆಶೀರ್ವಾದವು ಮೋದಿಯವರಿಗೆ ಇದೆ ಎಂದು ಎಲ್ಲೆಡೆ ಪೋಸ್ಟರ್‌ಗಳು ಮತ್ತು ದೊಡ್ಡ ಹೋರ್ಡಿಂಗ್‌ಗಳನ್ನು ಹಾಕಲಾಗಿತ್ತು. ಇದರಿಂದಾಗಿ ಜನರು ಅವರಿಗೆ ಮತ ಹಾಕಿದರು. ಆದರೆ, ಶಿವಾಜಿ ಮಹಾರಾಜರ ನಂಬಿಕೆ ಈಗ ಎಲ್ಲಿ ಸೋತಿದೆ ಎಂಬುದು ಅರ್ಥವಾಗುತ್ತಿಲ್ಲ.

ಶಿವಾಜಿ ಮಹಾರಾಜರನ್ನು ಕೇವಲ ಚುನಾವಣೆಗೆ ಬಳಸಿಕೊಂಡು ಬಿಟ್ಟರೇ ಎಂದು ಜನ ಭಾವಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಇದೆ. ಹಾಗಾಗಿ, ಹಿಂದೂ ಮನಸ್ಸು ಗೆಲ್ಲುವಂತೆ ಶಿವಾಜಿ ಹೆಸರಿನಲ್ಲಿ ಮೋದಿ ಭಾವನಾತ್ಮಕ ಮನವಿ ಮಾಡಿದ್ದಾರೆ. ಇದು ಈಗ ಹಿಂದಿನ ವಿಷಯವಾಗಿದೆ. ಬೆಂಗಳೂರಿನಲ್ಲಿ ಶಿವಾಜಿಗೆ ಅವಮಾನ ಮಾಡಿದ್ದು, ಮಹಾರಾಷ್ಟ್ರ ಸೇರಿದಂತೆ ಇಡೀ ದೇಶದಲ್ಲಿ ಪ್ರತಿಕ್ರಿಯೆ ಬರುತ್ತಿರುವುದು ಸಹಜ. ಆದರೆ, ಮಹಾರಾಷ್ಟ್ರದ ಬಿಜೆಪಿ ನಾಯಕರಿಗೆ ಈ ವಿಚಾರದಲ್ಲಿ ಸಿಟ್ಟು ಬರುವುದು ಇರಲಿ, ಅವರು ಅದನ್ನು ಎದುರಿಸಲೂ ಸಿದ್ಧರಿಲ್ಲ.

ಶಿವಾಜಿ ಅವರು ಗತಕಾಲದ ವೈರತ್ವವನ್ನು ಜೀವಂತವಾಗಿಟ್ಟುಕೊಂಡು ಅದರ ಪ್ರತೀಕಾರವಾಗಿ ಕ್ರೂರ, ಹಿಂಸಾತ್ಮಕ ಆಡಳಿತ ಮಾಡಲಿಲ್ಲ. ಅವರು ಧರ್ಮಾಂಧತೆಯಲ್ಲಿ ನಂಬಿಕೆ ಇಟ್ಟಿರಲಿಲ್ಲ. ಆದರೆ, ಧರ್ಮ ಮತ್ತು ಸಂಸ್ಕೃತಿಯ ಮೇಲಿನ ದಬ್ಬಾಳಿಕೆ ಮತ್ತು ಆಕ್ರಮಣಗಳ ಯುಗ ಮುಗಿದಿದೆ. ದಾಳಿಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ. ಅದನ್ನು ಈಗ ಪುಡಿಮಾಡಲಾಗುತ್ತದೆ. ಇದಕ್ಕೆ ಶಿವಾಜಿ ಅವರೇ ಸಾಕ್ಷಿ.

ಶಿವಾಜಿ ಮಹಾರಾಜರಿಗೆ ಮುಸ್ಲಿಮರ ಬಗ್ಗೆ ಯಾವುದೇ ಅಸಮಾಧಾನವಿರಲಿಲ್ಲ. ಅವರ ರಾಜ್ಯದಲ್ಲಿ ಮಸೀದಿಗಳು ಮತ್ತು ದರ್ಗಾಗಳು ಸುರಕ್ಷಿತವಾಗಿದ್ದವು. ಅವರು ಮುಸ್ಲಿಮರನ್ನು ಕೊಂದಿಲ್ಲ. ಯಾರನ್ನೂ ಬಲವಂತವಾಗಿ ಹಿಂದೂ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಲಿಲ್ಲ. ಅವರ ಸೈನ್ಯ ಮತ್ತು ನೌಕಾಪಡೆಯಲ್ಲಿ ಮುಸ್ಲಿಮರೂ ಇದ್ದರು. ಮಸೀದಿಗಳಿಗೆ ಎಂದಿನಂತೆ ಸೌಲಭ್ಯಗಳು ಅವರ ಆಡಳಿತದಲ್ಲಿ ಮುಂದುವರೆಯಿತು. ವಿಶೇಷ ಸಂದರ್ಭಗಳಲ್ಲಿ ಹೊಸ ಸೌಲಭ್ಯಗಳನ್ನು ನೀಡಲಾಯಿತು. ಅದಕ್ಕೆ ಅವರನ್ನು ‘ಶಿವಶಾಹಿ’ ಎನ್ನುತ್ತಾರೆ.

ರಾಷ್ಟ್ರಮಟ್ಟದಲ್ಲಿ ಆ ಶಿವಶಾಹಿ ಕಣ್ಮರೆಯಾದಂತಿದೆ. ಶಿವಾಜಿ ಮಹಾರಾಜರು ಅನ್ಯ ಧರ್ಮದ ಬಗ್ಗೆ ಸಹಿಷ್ಣುತೆ ಹೊಂದಿದ್ದರು, ಹೀಗಿರುವಾಗ ಕರ್ನಾಟಕದಂತಹ ಹಿಂದೂಪರ ರಾಜ್ಯದಲ್ಲಿ ಶಿವಾಜಿಯನ್ನು ಅವಮಾನಿಸಲು ಕಾರಣವೇನು? ಕಾಶಿಯಲ್ಲಿ ಪ್ರಧಾನಿ ವ್ಯಕ್ತಪಡಿಸಿದ ವಿಚಾರ ನಾಲ್ಕು ದಿನ ಕಳೆದರೂ ಬೆಂಗಳೂರಿಗೆ ಬಂದಿಲ್ಲ. ಕಾಶಿಯಲ್ಲಿ ಶಿವಾಜಿಗೆ ಮರ್ಯಾದೆ ಸಿಕ್ಕರೆ ಬೆಂಗಳೂರಿನಲ್ಲಿ ಅವಮಾನ ಆಗಿದೆ. ಇದು ಬೂಟಾಟಿಕೆ. ಬೆಂಗಳೂರಿನ ರಾಜಭವನಕ್ಕೆ ಬಿಜೆಪಿಯವರು ಬರಬೇಕು. ಎಂದು ಬರೆದು ಬೊಮ್ಮಾಯಿ ಸರ್ಕಾರಕ್ಕೆ ಘೇರಾವ್ ಎಂದು ಆಕ್ರೋಶ ಹೊರ ಹಾಕಿದೆ.

ನಿಜಕ್ಕೂ ಕರ್ನಾಟಕದಲ್ಲಿ ಆಗಿದ್ದೇನು?

ಬೆಳಗಾವಿಯಲ್ಲಿ ಅಧಿವೇಶನ ಆರಂಭ ಆಗಿದ್ದಾಗಿನಿಂದ ಎಂಇಎಸ್ ಪುಂಡಾಟ ಹೆಚ್ಚಾಗಿದೆ. ಬೆಳಗಾವಿ ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ಕಿಡಿಗೇಡಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ್ದರು. ಕರ್ನಾಟಕದ ನೋಂದಣಿ ಸಂಖ್ಯೆ ಕಾರುಗಳ ಮೇಲೆ ದಾಳಿ ಮಾಡಿದ್ದರು. ಪೊಲೀಸ್ ವಾಹನ ಸೇರಿದಂತೆ ಇತರ ವಾಹನಗಳನ್ನೂ ಜಖಂಗೊಳಿಸಿದ್ದಾರೆ.

ಎಂಇಎಸ್ ಕಾರ್ಯಕರ್ತರ ಪುಂಡಾಟಕ್ಕೆ ಇಂದು ತೀವ್ರವಾಗಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈಗಾಗಲೇ ಪುಂಡಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಇಎಸ್ ಯುವ ಘಟಕದ ಅಧ್ಯಕ್ಷ ಶುಭಂ ಶೆಳಕೆ ಸೇರಿದಂತೆ 27 ಮಂದಿಯನ್ನು ಬಂಧಿಸಲಾಗಿದೆ. ಎಲ್ಲರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details