ಕರ್ನಾಟಕ

karnataka

ಒಡಿಶಾದಲ್ಲಿ ಮೃತಪಟ್ಟ ರಷ್ಯಾದ ಜನಪ್ರತಿನಿಧಿ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ

By

Published : Dec 28, 2022, 4:46 PM IST

ಒಡಿಶಾದಲ್ಲಿ ರಷ್ಯಾದ ಪ್ರವಾಸಿಗರ ಸಾವು ಪ್ರಕರಣ - ರಷ್ಯಾದ ಜನಪ್ರತಿನಿಧಿ, ಉದ್ಯಮಿ ಪಾವೆಲ್ ಆಂಟೊವ್ ಅವರ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ - ಸಾವಿಗೆ ಆಂತರಿಕ ಗಾಯಗಳು ಕಾರಣ ಸಾಧ್ಯತೆ

russian-lawmaker-antov-died-of-internal-injuries-reveals-post-mortem
ಒಡಿಶಾದಲ್ಲಿ ಮೃತಪಟ್ಟ ರಷ್ಯಾದ ಜನಪ್ರತಿನಿಧಿ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ

ರಾಯಗಢ (ಒಡಿಶಾ): ರಷ್ಯಾದ ಜನಪ್ರತಿನಿಧಿ ಮತ್ತು ಉದ್ಯಮಿ ಪಾವೆಲ್ ಆಂಟೊವ್ ಅನುಮಾನಾಸ್ಪದ ಸಾವಿನ ಪ್ರಕರಣದ ಮರಣೋತ್ತರ ಪರೀಕ್ಷೆ ಹೊರಬಿದ್ದಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೀಕಾಕಾರರಾಗಿದ್ದ ಆಂಟೊವ್​ ಸಾವಿಗೆ ಆಂತರಿಕ ಗಾಯಗಳು ಕಾರಣ ಎಂದು ತಿಳಿದುಬಂದಿದೆ.

ಪಾವೆಲ್ ಆಂಟೊವ್ ಸೇರಿದಂತೆ ನಾಲ್ವರು ಇದೇ ಡಿಸೆಂಬರ್ 21ರಂದು ಒಡಿಶಾದ ರಾಯಗಢ ಪ್ರವಾಸಕ್ಕೆ ಎಂದು ಆಗಮಿಸಿದ್ದರು. ರಾಯಗಢಕ್ಕೆ ಹೋಗುವ ಮುನ್ನ ಅಂದು ಕಂಧಮಾಲ್ ಜಿಲ್ಲೆಯ ದರಿಂಗಿಬಾಡಿ ಎಂಬ ಗಿರಿಧಾಮಕ್ಕೆ ಬಂದಿದ್ದರು. ರಾತ್ರಿ ರಾಯಗಢ ಪಟ್ಟಣದ ಸಾಯಿ ಇಂಟರ್​ ನ್ಯಾಷನಲ್ ಹೋಟೆಲ್‌ನಲ್ಲಿ ನಾಲ್ವರು ಸಹ ಉಳಿದುಕೊಂಡಿದ್ದರು. ಆದರೆ, ಇದಾದ ಎರಡೇ ದಿನಗಳ ಅಂತರದಲ್ಲೇ ಪಾವೆಲ್ ಆಂಟೊವ್ ಮತ್ತು ಸಹೋದ್ಯೋಗಿ ವ್ಲಾಡಿಮಿರ್ ಬುಡಾನೋವ್ ಸಂಶಯಾಸ್ಪದವಾಗಿ ಮೃತಪಟ್ಟಿದ್ದರು.

ಇಬ್ಬರು ಒಂದೇ ಕೊಠಡಿಯಲ್ಲಿ ತಂಗಿದ್ದರು: ಪಾವೆಲ್ ಆಂಟೊವ್ ಹಾಗೂ ವ್ಲಾಡಿಮಿರ್ ಬುಡಾನೋವ್ ಅವರೊಂದಿಗೆ ದಂಪತಿಯಾದ ಮಿಖಾಯಿಲ್ ತುರೋವ್ ಮತ್ತು ನಟಾಲಿಯಾ ಪನಾಸೆಂಕೊ ಸಹ ಒಡಿಶಾ ಪ್ರವಾಸ ಕೈಗೊಂಡಿದ್ದರು. ಡಿ.21ರಂದು ರಾತ್ರಿ ಆಂಟೊವ್, ಬುಡಾನೋವ್ ಒಂದೇ ಕೊಠಡಿಯಲ್ಲಿ ತಂಗಿದ್ದರೆ, ನಟಾಲಿಯಾ ದಂಪತಿ ಮತ್ತೊಂದು ಕೋಣೆಯಲ್ಲಿದ್ದರು ಎಂದು ತಿಳಿದು ಬಂದಿದೆ.

ಎರಡು ದಿನಗಳಲ್ಲಿ ಇಬ್ಬರ ಸಾವು: ಒಂದೇ ಕೊಠಡಿಯಲ್ಲಿ ತಂಗಿದ್ದ 65 ವರ್ಷದ ಆಂಟೊವ್ ಮತ್ತು 61 ವರ್ಷದ ಬುಡಾನೋವ್ ಎರಡು ದಿನಗಳ ಅಂತರದಲ್ಲಿ ಸಾವನ್ನಪ್ಪಿರುವುದು ಸಾಕಷ್ಟು ಅನುಮಾನವನ್ನೂ ಹುಟ್ಟು ಹಾಕಿದೆ. ಡಿ.22ರಂದು ಬೆಳಿಗ್ಗೆ ಹೋಟೆಲ್​ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬುಡಾನೋವ್ ಬಿದ್ದು, ಅಲ್ಲಿಯೇ ಅವರು ಸಾವನ್ನಪ್ಪಿದ್ದರು. ಮೊದಲಿಗೆ ಮಿತಿಮೀರಿದ ಮದ್ಯ ಸೇವನೆಯಿಂದ ಬುಡಾನೋವ್ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೃದಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂಬುವುದಾಗಿ ಬಹಿರಂಗವಾಗಿತ್ತು.

ಮತ್ತೊಂದೆಡೆ, ಆ.24ರಂದು ಪಾವೆಲ್ ಆಂಟೊವ್ ತಾವು ತಂಗಿದ್ದ ಹೋಟೆಲ್​ನ ಕೊಠಡಿಯ​ ಕಿಟಕಿಯಿಂದ ಬಿದ್ದಿದ್ದರು. ಕೊಠಡಿಯಲ್ಲಿ ಕಾಣಿಸಿದೇ ಇದ್ದಾಗ ಹೋಟೆಲ್ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಈ ವೇಳೆ, ಅವರು ಹೋಟೆಲ್​ ಸಮೀಪದ ನಿರ್ಮಾಣ ಹಂತದ ಕಟ್ಟಡದ ಕೆಳಗೆ ಬಿದ್ದಿರುವುದು ಪತ್ತೆಯಾಗಿತ್ತು. ಈ ಸಮಯದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದ್ದರು. ಹೀಗೆ ಆಂಟೊವ್ ಮತ್ತು ಬುಡಾನೋವ್ ಎರಡೇ ದಿನಗಳ ಅಂತರದಲ್ಲಿ ಮೃತಪಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

ಕುಟುಂಬದ ಅನುಮತಿ ಮೇರೆಗೆ ಪಾವೆಲ್ ಆಂಟೊವ್ ಅವರ ಅಂತ್ಯಸಂಸ್ಕಾರವನ್ನು ಒಡಿಶಾದಲ್ಲೇ ಸೋಮವಾರ ಅಧಿಕಾರಿಗಳು ನೆರವೇರಿಸಿದ್ದರು. ಇದೀಗ ಮರಣೋತ್ತರ ಪರೀಕ್ಷೆ ವರದಿಯು ಆಂತರಿಕ ಗಾಯಗಳೇ ಪಾವೆಲ್​ ಸಾವಿಗೆ ಕಾರಣ ಎಂದು ಹೇಳಿದೆ. ಮತ್ತೊಂದು ವಿಷಯವೆಂದರೆ, ಪಾವೆಲ್​ ತಮ್ಮ 65ನೇ ಹುಟ್ಟುಹಬ್ಬದ ಆಚರಣೆಗಾಗಿ ರಾಯಗಢದಲ್ಲಿ ಪ್ರವಾಸದಲ್ಲಿದ್ದರು. ಸದ್ಯ ಈ ಬಗ್ಗೆ ಒಡಿಶಾ ಪೊಲೀಸರು ಮತ್ತು ಸಿಐಡಿ ಅಧಿಕಾರಿಗಳ ತಂಡದ ತನಿಖೆಯೂ ನಡೆಸುತ್ತಿದೆ.

ಯಾರು ಈ ಪಾವೆಲ್ ಆಂಟೊವ್?: ಪಾವೆಲ್ ಆಂಟೊವ್ ರಷ್ಯಾದ ಯಶಸ್ವಿ ಉದ್ಯಮಿಯಾಗಿದ್ದಾರೆ. ಅಲ್ಲದೇ, ರಷ್ಯಾದ ಶ್ರೀಮಂತ ಜನಪ್ರತಿನಿಧಿಗಳಲ್ಲೂ ಒಬ್ಬರಾಗಿದ್ದಾರೆ. ವ್ಲಾಡಿಮಿರ್ ಸ್ಟ್ಯಾಂಡರ್ಡ್ ಎಂಬ ಮಾಂಸ ಸಂಸ್ಕರಣಾ ಘಟಕದ ಸಂಸ್ಥಾಪಕರಾಗಿದ್ದರು. 2019ರಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನವನ್ನೂ ಪಡೆದಿದ್ದ ಆಂಟೊವ್ ಅಂದಾಜು 140 ಮಿಲಿಯನ್​ ಡಾಲರ್​ ಸಂಪತ್ತನ್ನು ಹೊಂದಿದ್ದರು.

ಇದರ ನಡುವೆ ಆಂಟೊವ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಬಹಿರಂಗವಾಗಿ ಟೀಕಿಸುತ್ತಿದ್ದರು. ಉಕ್ರೇನ್​ ಯುದ್ಧದ ವೇಳೆ​ ಇದೇ ಜೂನ್​ನಲ್ಲಿ ಕೈವ್‌ನ ವಸತಿ ಪ್ರದೇಶದ ಮೇಲಿನ ರಷ್ಯಾದ ಕ್ಷಿಪಣಿ ದಾಳಿಯನ್ನೂ ಆಂಟೊವ್ ಟೀಕಿಸಿದ್ದರು. ಇದೆಲ್ಲವನ್ನೂ ಭಯೋತ್ಪಾದನೆ ಎಂದು ಕರೆಯುವುದು ತುಂಬಾ ಕಷ್ಟ ಎಂದು ವಾಟ್ಸ್​ಆ್ಯಪ್​ ಸಂದೇಶವನ್ನು ಆಂಟೊವ್​ ಹಾಕಿಕೊಂಡಿದ್ದರು. ನಂತರ ಆ ಸಂದೇಶವನ್ನು ಅಳಿಸಲಾಗಿತ್ತು ಎಂದೂ ಹೇಳಲಾಗಿದೆ.

ಇದನ್ನೂ ಓದಿ:ಒಡಿಶಾ: ಎರಡೇ ದಿನದ ಅಂತರದಲ್ಲಿ ರಷ್ಯಾದ ಇಬ್ಬರು ಜನಪ್ರತಿನಿಧಿಗಳ ಸಾವು, ಅನುಮಾನದ ಹುತ್ತ

ABOUT THE AUTHOR

...view details