ಹೈದರಾಬಾದ್(ತೆಲಂಗಾಣ):ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಈ ಕೃತ್ಯಗಳು ನಡೆಯುತ್ತಿವೆ. ಸದ್ಯ ತೆಲಂಗಾಣದ ಮಾಜಿ ಸಿಜೆ ಸತೀಶ್ ಚಂದ್ರಶರ್ಮಾ ಅವರ ಫೋಟೋ ವಾಟ್ಸ್ಆ್ಯಪ್ ಡಿಪಿಯಾಗಿ ಬಳಸಿಕೊಂಡ ಸೈಬರ್ ಕಳ್ಳರು 2 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ.
ತೆಲಂಗಾಣ ಹೈಕೋರ್ಟ್ನಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕೆಲಸ ಮಾಡ್ತಿರುವ ಶ್ರೀಮನ್ನಾರಾಯಣ ಅವರಿಗೆ ವಂಚನೆ ಮಾಡಲಾಗಿದೆ. ವಾಟ್ಸ್ಆ್ಯಪ್ನಲ್ಲಿ ತಾವು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಎಂದು ಹೇಳಿಕೊಂಡು ಮೋಸ ಮಾಡಿದ್ದಾರೆ. 'ನಾನು ಮೀಟಿಂಗ್ನಲ್ಲಿದ್ದು, ತುರ್ತಾಗಿ ಹಣ ಬೇಕಾಗಿದೆ. ನನ್ನಲ್ಲಿರುವ ಎಲ್ಲ ಬ್ಯಾಂಕ್ ಕಾರ್ಡ್ಗಳು ಬ್ಲಾಕ್ ಆಗಿವೆ. ನಿಮಗೆ ಅಮೆಜಾನ್ ಲಿಂಕ್ ಕಳುಹಿಸುತ್ತೇನೆ. ಅದರ ಮೂಲಕ 2 ಲಕ್ಷ ರೂಪಾಯಿ ನೀಡುವಂತೆ' ಸೈಬರ್ ಕಳ್ಳರು ಮನವಿ ಮಾಡಿದ್ದಾರೆ.