ಬೆಂಗಳೂರು: ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ ರಾವ್ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮಧ್ಯೆ ಇತ್ತೀಚೆಗೆ ರಾಜಕೀಯ ವಿಷಯ ಕುರಿತಾದ ಸಭೆ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ತನಗೆ ತೋಚಿದಂತೆ ಕೆಲಸ ಮಾಡುತ್ತಿದೆ ಎಂಬ ಒಮ್ಮತಾಭಿಪ್ರಾಯಕ್ಕೆ ಇಬ್ಬರೂ ಬಂದಿದ್ದಾರೆ ಎನ್ನಲಾಗಿದೆ.
ನೆರೆಹೊರೆಯ ರಾಜ್ಯಗಳಲ್ಲಿ ನಾಯಕತ್ವದ ಕೊರತೆ ಇರುವುದು ಕಂಡು ಬಂದಾಗ ಅಂಥ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಪ್ರವೇಶ ಪಡೆಯಬೇಕೆಂಬುದು ಈ ನಾಯಕರ ಅಭಿಪ್ರಾಯವಾಗಿದೆ. ಅಖಿಲೇಶ್ ಯಾದವ್ ಮತ್ತು ರಾಜ್ಯಸಭೆ ಸಂಸದ ರಾಮಗೋಪಾಲ ಯಾದವ್ ಅವರು ಸಿಎಂ ಕೆಸಿಆರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದು, ದೇಶದ ವಿವಿಧ ರಾಜ್ಯಗಳಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು ಎನ್ನಲಾಗಿದೆ.
ಕೇಂದ್ರ ನೀತಿ ವಿರುದ್ಧ ಅಸಮಾಧಾನ:ಪ್ರತಿಪಕ್ಷಗಳ ಸರ್ಕಾರವಿರುವ ರಾಜ್ಯಗಳಲ್ಲಿನ ಸಚಿವರು ಹಾಗೂ ಜನಪ್ರತಿನಿಧಿಗಳ ವಿರುದ್ಧ, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕೆಟ್ಟ ಸಂಪ್ರದಾಯವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ಇಬ್ಬರೂ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ದಕ್ಷಿಣದ ಪಕ್ಷಗಳಿಗೆ ಬೇರೆ ಪ್ರದೇಶಗಳಲ್ಲಿ ವ್ಯಾಪಿಸಲು ಭಾಷಾ ಸಮಸ್ಯೆ ಇದೆ, ಆದರೆ ಉತ್ತರದ ಪಕ್ಷಗಳಿಗೆ ಇಂಥ ಸಮಸ್ಯೆ ಇಲ್ಲ.
ಸಮಾಜವಾದಿ ಪಕ್ಷದಂಥ ಪ್ರಾದೇಶಿಕ ಪಕ್ಷಗಳು ನೆರೆಯ ಉತ್ತರಾಖಂಡ, ಬಿಹಾರ, ದೆಹಲಿ ಮತ್ತು ಹರಿಯಾಣಗಳಿಗೆ ವಿಸ್ತರಿಸಬಹುದು ಎಂಬುದು ಕೆಸಿಆರ್ ಅಭಿಪ್ರಾಯವಾಗಿದೆ. ಇಂಥ ಸಮಯದಲ್ಲಿ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ಪರಸ್ಪರ ಪೂರಕವಾಗಿ ಕೆಲಸ ಮಾಡುವ ಬಗ್ಗೆ ಇಂಗಿತ ವ್ಯಕ್ತವಾಗಿದೆ.