ನವದೆಹಲಿ : ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ ನೇತೃತ್ವದ ನ್ಯಾಯಾಧೀಶರ ತಂಡ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ. ಇದರ ಬೆನ್ನಲ್ಲೇ ಸಲಿಂಗ ವಿವಾಹ ಭಾರತದ ಸಂಸ್ಕೃತಿಗೆ ವಿರುದ್ಧವಾದದ್ದು, ಇದಕ್ಕೆ ಕಾನೂನು ಮಾನ್ಯತೆ ನೀಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಬಳಿಕ ಈ ಅರ್ಜಿಗಳನ್ನು ಸಾಂವಿಧಾನಿಕ ಪೀಠದ ಮುಂದೆ ವಿಸ್ತೃತ ಚರ್ಚೆ ನಡೆಸಲು ವರ್ಗಾಯಿಸಲಾಗಿತ್ತು.
ಇದರ ಜೊತೆಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ರಾಜ್ಯ ಬಾರ್ ಕೌನ್ಸಿಲ್ಗಳ ಜೊತೆ ಜಂಟಿ ಸಭೆ ನಡೆಸಿದೆ. ಈ ಸಭೆಯಲ್ಲಿ ಸಲಿಂಗ ವಿವಾಹದ ಕುರಿತು ತನ್ನ ಕಳವಳವನ್ನು ವ್ಯಕ್ತಪಡಿಸಿದೆ. "ಸಲಿಂಗ ವಿವಾಹ ಅತಿ ಸೂಕ್ಷ್ಮ ವಿಷಯವಾಗಿರುವುದರಿಂದ ಸಾಮಾಜಿಕ ಧಾರ್ಮಿಕ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಶಾಸಕಾಂಗವನ್ನೊಳಗೊಂಡ ಸಾಮಾಜಿಕ, ಧಾರ್ಮಿಕ ಗುಂಪುಗಳ ವಿಸ್ತೃತ ಸಮಾಲೋಚನೆ ನಂತರ ಈ ಜಂಟಿ ಸಭೆಯು ಸರ್ವಾನುಮತದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದೆ.
ದೇಶದ ಸಾಮಾಜಿಕ ಮತ್ತು ಧಾರ್ಮಿಕ ರಚನೆಯನ್ನು ಪರಿಗಣಿಸಿ ಈ ಸಲಿಂಗ ವಿವಾಹವು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿರುವುದು ಎಂದು ನಾವು ಭಾವಿಸಿದ್ದೇವೆ. ಇಂತಹ ನಿರ್ಧಾರಗಳನ್ನು ನ್ಯಾಯಾಲಯಗಳು ತೆಗೆದುಕೊಳ್ಳಲಾಗುವುದಿಲ್ಲ. ಇಂತಹ ಕ್ರಮಗಳು ಶಾಸಕಾಂಗದ ಪ್ರಕ್ರಿಯೆಯಿಂದ ಬರಬೇಕು ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಅಡ್ವೊಕೇಟ್ ಮನನ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಈ ಮದುವೆ ಎಂಬ ಆಚರಣೆಯು ಮಾನವ ನಾಗರೀಕತೆ ಮತ್ತು ಸಂಸ್ಕೃತಿ ಆರಂಭದಿಂದಲೂ ವಿಶಿಷ್ಟವಾಗಿ ಅಂಗೀಕರಿಸಲ್ಪಟ್ಟಿದೆ. ಈ ಮದುವೆಯನ್ನು ಸಂತಾನೋತ್ಪತ್ತಿ ಮತ್ತು ಮನರಂಜನೆಯ ಉದ್ದೇಶಕ್ಕಾಗಿ ಮುಂದುವರೆಸಿಕೊಂಡು ಬರಲಾಗಿದೆ ಎಂದು ಬಾರ್ ಕೌನ್ಸಿಲ್ ತನ್ನ ರೆಸಲ್ಯೂಶನ್ನಲ್ಲಿ ತಿಳಿಸಿದೆ.