ಕರ್ನಾಟಕ

karnataka

By

Published : Jul 3, 2022, 12:23 PM IST

Updated : Jul 3, 2022, 12:57 PM IST

ETV Bharat / bharat

ಮಹಾರಾಷ್ಟ್ರ ವಿಧಾನಸಭೆಗೆ ಬಿಜೆಪಿಯ ರಾಹುಲ್‌ ನಾರ್ವೇಕರ್‌ ಸ್ಪೀಕರ್‌; ಮೊದಲ ಪರೀಕ್ಷೆ ಗೆದ್ದ ಶಿಂದೆ

ಬಿಜೆಪಿ ಶಾಸಕ ರಾಹುಲ್​ ನಾರ್ವೇಕರ್​ ಅವರು ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

ಬಿಜೆಪಿಯ ರಾಹುಲ್​ ನಾರ್ವೇಕರ್​ ನೂತನ ಸ್ಪೀಕರ್
ಬಿಜೆಪಿಯ ರಾಹುಲ್​ ನಾರ್ವೇಕರ್​ ನೂತನ ಸ್ಪೀಕರ್

ಮುಂಬೈ:ಇಂದಿನಿಂದ ಆರಂಭವಾಗಿರುವ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ ಹೊಸ ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, 164 ಮತ ಪಡೆದ ಬಿಜೆಪಿ ಶಾಸಕ ರಾಹುಲ್​ ನಾರ್ವೇಕರ್​ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಏಕನಾಥ್​ ಶಿಂದೆ ಮೊದಲ ಪರೀಕ್ಷೆಯಲ್ಲಿ ಯಶಸ್ವಿಯಾದರು.

ಬಂಡಾಯ ಶಿವಸೇನೆ, ಬಿಜೆಪಿ ಮತ್ತು ಸ್ವತಂತ್ರ ಶಾಸಕರ ಬೆಂಬಲದಿಂದಾಗಿ ನಾರ್ವೇಕರ್​ ಅವರು ಸರಳ ಬಹುಮತದಿಂದ ವಿಧಾನಸಭೆ ಸಭಾಪತಿಯಾಗಿ ಆಯ್ಕೆಯಾದರು. ತಲೆ ಎಣಿಕೆ ಮತದಾನದಲ್ಲಿ ಬಿಜೆಪಿಯ 106 ಶಿವಸೇನೆ ಮತ್ತು ಸ್ವತಂತ್ರ ಅಭ್ಯರ್ಥಿಗಳು ನಾರ್ವೇಕರ್​ ಪರ ಮತಚಲಾಯಿಸಿದರು.


ಪ್ರತಿಪಕ್ಷಗಳ ಪರವಾಗಿ ಉದ್ಧವ್​ ಠಾಕ್ರೆ ಮತ್ತು ರಾಜನ್​ ಸಾಲ್ವಿ ಅವರು ಸ್ಪರ್ಧಿಸಿದ್ದರೂ ಅಗತ್ಯ ಬಹುಮತ ಸಿಗದ(107 ಮತ) ಕಾರಣ ಸೋಲನುಭವಿಸಿದ್ದಾರೆ. ಈ ಮೂಲಕ ಉದ್ಧವ್​ ಠಾಕ್ರೆಗೆ ಮತ್ತೊಂದು ಹಿನ್ನಡೆ ಉಂಟಾಗಿದೆ.

ಸಿಎಂ ಆಗಿ ಪದಪ್ರಮಾಣ ಪಡೆದಿರುವ ಬಂಡಾಯ ನಾಯಕ ಏಕನಾಥ್​ ಶಿಂದೆ ನಾಳೆ ವಿಶ್ವಾಸಮತ ಸಾಬೀತುಪಡಿಸಬೇಕಿದ್ದು, ಬಿಜೆಪಿ ಬೆಂಬಲದ ಕಾರಣ ಸುಲಭ ಜಯ ಸಾಧಿಸಲಿದ್ದಾರೆ.

ಏನಿದು 'ಇ.ಡಿ' ಸರ್ಕಾರ?:ಶಾಸಕರ ತಲೆ ಎಣಿಕೆಗೆ ಹಾಕಿದಾಗ ವಿಪಕ್ಷಗಳು ಇಡಿ ಇಡಿ ಎಂದು ಘೋಷಣೆ ಕೂಗಿವೆ. ಸಿಎಂ ಏಕನಾಥ್​ ಶಿಂದೆ ಅವರ ಹೆಸರಿನ ಮೊದಲ ಅಕ್ಷರ 'ಇ' ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ರ ಮೊದಲಕ್ಷರ 'ಡಿ'ಯನ್ನು ಸೇರಿಸಿ ಇದು ಇಡಿ ಸರ್ಕಾರವಾಗಿದೆ ಎಂದು ಘೋಷಣೆ ಕೂಗಿದರು.

ಎಸ್​ಪಿ, ಎಐಎಂಐಎಂ ತಟಸ್ಥ:ಸ್ಪೀಕರ್​ ಆಯ್ಕೆ ಮತದಾನದ ವೇಳೆ ಸಮಾಜವಾದಿ ಪಕ್ಷ ಮತ್ತು ಅಸಾದುದ್ದೀನ್​ ಓವೈಸಿ ಪಕ್ಷ ಎಐಎಂಐಎಂ ಶಾಸಕರು ಮತದಾನದಿಂದ ಅಂತರ ಕಾಯ್ದುಕೊಂಡರು. ಯಾರಿಗೂ ಮತ ಹಾಕದೇ ತಟಸ್ಥರಾಗಿದ್ದರು.

ನೂತನ ಸಿಎಂ ಏಕನಾಥ್​ ಶಿಂದೆ

ಬಾಳಾಸಾಹೇಬ್​ ಠಾಕ್ರೆ ಸಿದ್ಧಾಂತದ ಸರ್ಕಾರ:ಸ್ಪೀಕರ್​ ಆಯ್ಕೆಯ ಬಳಿಕ ಮಾತನಾಡಿದ ನೂತನ ಸಿಎಂ ಏಕನಾಥ್​ ಶಿಂದೆ, ಬಿಜೆಪಿ ಮತ್ತು ಶಿವಸೇನೆ ನೇತೃತ್ವದ ಸರ್ಕಾರ ಬಾಳಾಸಾಹೇಬ್​ ಠಾಕ್ರೆ ಅವರ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡಲಿದೆ. ಇಲ್ಲಿಯವರೆಗೂ ಜನರು ಪ್ರತಿಪಕ್ಷದಲ್ಲಿ ಕೂತವರು ಸರ್ಕಾರ ನಡೆಸಿದ್ದನ್ನು ನೋಡಿದ್ದಾರೆ. ಆದರೆ ಈಗ ಸರ್ಕಾರದಲ್ಲಿದ್ದವರು ಪ್ರತಿಪಕ್ಷದಲ್ಲಿ ಕೂರುವುದನ್ನು ನೋಡುತ್ತಾರೆ ಎಂದು ಉದ್ಧವ್​ ಠಾಕ್ರೆ ಬಣ, ಕಾಂಗ್ರೆಸ್​, ಎನ್​ಸಿಪಿಗೆ ಟಾಂಗ್​​ ನೀಡಿದರು.

ಈ ಹಿಂದಿನ ಸರ್ಕಾರದಲ್ಲಿ ನಾನು ಸಚಿವನಾಗಿದ್ದೆ. ಸರ್ಕಾರದ ನೀತಿಗಳು ಬಾಳಾಸಾಹೇಬ್​ ಠಾಕ್ರೆ ಅವರ ಸಿದ್ಧಾಂತಕ್ಕೆ ವಿರುದ್ಧವಾದ ಕಾರಣ ನಾನು ಸೇರಿದಂತೆ ಹಲವು ಸಚಿವರು ಸರ್ಕಾರವನ್ನು ತೊರೆಯಬೇಕಾಯಿತು. ಇದೀಗ ನಾನು ಸಿಎಂ ಆಗಿದ್ದೇನೆ. ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರ ಸಿದ್ಧಾಂತಕ್ಕೆ ಮೀಸಲಾದ ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಇದು ದೊಡ್ಡ ವಿಷಯ ಎಂದು ಏಕನಾಥ್ ಶಿಂದೆ ಹೇಳಿದರು.

ನನ್ನೊಂದಿಗೆ ಬಂದ ಎಲ್ಲ ಶಾಸಕರು, ಸಚಿವರು ಸ್ವಇಚ್ಚೆಯಿಂದ ಮಹಾವಿಕಾಸ ಆಘಾಡಿ ಸರ್ಕಾರವನ್ನು ತೊರೆದವರು. ನಾನು ಯಾರ ಮೇಲೂ ಒತ್ತಡ ಹಾಕಿಲ್ಲ. ಸಿದ್ಧಾಂತಕ್ಕೆ ಕಟ್ಟುಬಿದ್ದವರು ಹಿಂದಿನ ಸರ್ಕಾರವನ್ನು ಕೈಬಿಟ್ಟರು ಎಂದರು.

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​

ರಾಜ್ಯದ ಹಿತದಂತೆ ಸರ್ಕಾರ:ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​, ರಾಜ್ಯದ ಜನರ ಹಿತಕ್ಕಾಗಿ ಸರ್ಕಾರ ಕೆಲಸ ಮಾಡಲಿದೆ. ಏಕನಾಥ್ ಶಿಂದೆ ನೇತೃತ್ವದ ಬಿಜೆಪಿ- ಶಿವಸೇನೆ ಮೈತ್ರಿಕೂಟದ ಈ ಸರ್ಕಾರ ಮಹಾರಾಷ್ಟ್ರದ ಎಲ್ಲಾ ಆಕಾಂಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುತ್ತದೆ ಎಂದರು.

ಇದನ್ನೂ ಓದಿ:ಶಸ್ತ್ರಸಜ್ಜಿತ ಎಲ್​ಇಟಿ ಉಗ್ರರ ಹಿಡಿದು ಸೇನೆಗೆ ಒಪ್ಪಿಸಿದ ಜನರು; ₹2 ಲಕ್ಷ ಬಹುಮಾನ ಘೋಷಣೆ

Last Updated : Jul 3, 2022, 12:57 PM IST

ABOUT THE AUTHOR

...view details