ಕರ್ನಾಟಕ

karnataka

ETV Bharat / bharat

Rahul Gandhi: ರೈಲು ನಿಲ್ದಾಣದ ಕೂಲಿಗಳ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ

ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆಂಪು ಶರ್ಟ್ ಧರಿಸಿ ಅಲ್ಲಿನ ಕೂಲಿಗಳೊಂದಿಗೆ ಸಂವಾದ ನಡೆಸಿದ್ದಾರೆ.

By ETV Bharat Karnataka Team

Published : Sep 21, 2023, 10:31 PM IST

Rahul Gandhi interacts with porters at Anand Vihar railway station
ರೈಲು ನಿಲ್ದಾಣದ ಕೂಲಿಗಳ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ದೆಹಲಿಯ ಜನನಿಬಿಡ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಹಮಾಲರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಕೂಲಿಗಳ ಕೆಂಪು ಶರ್ಟ್ ಧರಿಸಿ ತಲೆ ಮೇಲೆ ಸೂಟ್​ಕೇಸ್​ ಹೊತ್ತುಕೊಂಡು ರಾಹುಲ್​ ಗಾಂಧಿ ಹಮಾಲರ ಶ್ರಮ ಹಾಗೂ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.

ರೈಲು ನಿಲ್ದಾಣಕ್ಕೆ ಕಾಂಗ್ರೆಸ್​ ಸಂಸದ ರಾಹುಲ್​ ತೆರಳಿ ಸಂವಾದ ನಡೆಸಿರುವ ವಿಡಿಯೋ ತುಣುಕುಗಳನ್ನು ಕಾಂಗ್ರೆಸ್​ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಗಮನ ಸೆಳೆಯುವ ಹಲವು ವಿಡಿಯೋಗಳು ವೈರಲ್​ ಆಗಿವೆ. ರೈಲು ನಿಲ್ದಾಣದ ಕೂಲಿಗಳ ಸಮಸ್ಯೆಗಳ ಆಲಿಸಲು ಆಗಮಿಸಿದ್ದ ರಾಹುಲ್​ ಗಾಂಧಿ ಅವರನ್ನು ಕಾರ್ಮಿಕರು ಆತ್ಮೀಯವಾಗಿ ಸ್ವಾಗತಿಸಿದರು.

ಕೆಂಪು ಅಂಗಿ ತೊಟ್ಟು ತಲೆಯ ಮೇಲೆ ಟ್ರಾಲಿ ಬ್ಯಾಗ್​ ಹೊತ್ತ ಸ್ವಲ್ಪ ದೂರ ಸಾಗಿಸಿದ ರಾಹುಲ್​ ಅವರನ್ನು ಹಲವು ಹಮಾಲರು ಸುತ್ತುವರೆದಿದ್ದರು. ಈ ವೇಳೆ, ರಾಹುಲ್ ಗಾಂಧಿ ಜಿಂದಾಬಾದ್ ಎಂಬ ಘೋಷಣೆಗಳು ಕೂಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನಂತರ ರಾಹುಲ್​ ಕೂಲಿಗಳು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂವಾದ ನಡೆಸಿದರು. ಕೂಲಿಗಳ ಗುಂಪಿನಲ್ಲಿ ಕುಳಿತು ಸಮಚಿತ್ತದಿಂದ ಸಮಸ್ಯೆಗಳನ್ನು ಆಲಿಸಿದರು. ಕಾಂಗ್ರೆಸ್ ಪಕ್ಷವು ರಾಹುಲ್​ ಗಾಂಧಿ ಅವರನ್ನು ಜನನಾಯಕ ಎಂದು ಬಣ್ಣಿಸಿದೆ. ಶ್ರಮಿಕ ವರ್ಗದ ಹಮಾಲಿಗಳ ಕಷ್ಟಗಳಿಗೆ ಕಿವಿಗೊಡಲು ರಾಹುಲ್​ ಇದ್ದಾರೆ ಎಂದೂ ಒತ್ತಿ ಹೇಳಿದೆ.

''ಜನನಾಯಕ ರಾಹುಲ್ ಗಾಂಧಿ ಅವರು ಇಂದು ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಕೂಲಿ ಸಹೋದ್ಯೋಗಿಗಳನ್ನು ಭೇಟಿ ಮಾಡಿದರು. ಇತ್ತೀಚೆಗೆ, ರೈಲ್ವೆ ನಿಲ್ದಾಣದ ಹಮಾಲರ ಸಹೋದ್ಯೋಗಿಗಳು ರಾಹುಲ್​ ಅವರನ್ನು ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿತ್ತು. ಅಂತೆಯೇ, ಇಂದು ರಾಹುಲ್​ ಅವರು ಕೂಲಿಗಳ ಮಧ್ಯೆ ಹೋಗಿ ಶಾಂತವಾಗಿ ಅವರ ಸಮಸ್ಯೆಗಳನ್ನು ಆಲಿಸಿದರು.. ಭಾರತ್ ಜೋಡೋ ಪಯಣ ಮುಂದುವರೆಯುತ್ತದೆ'' ಎಂದು ಕಾಂಗ್ರೆಸ್​ ಸಾಮಾಜಿಕ ಜಾಲತಾಣ 'ಎಕ್ಸ್'​ನಲ್ಲಿ (ಟ್ವಿಟರ್​) ಪೋಸ್ಟ್​ ಮಾಡಿದೆ.

ರಾಹುಲ್​ ಗಾಂಧಿ ಅವರ ಕೂಲಿಗಳ ಭೇಟಿಯು ಸಮಾಜದ ವಿವಿಧ ವರ್ಗಗಳೊಂದಿಗೆ ತೊಡಗಿಸಿಕೊಳ್ಳುವುದು ಮತ್ತು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳ ಭಾಗವಾಗಿದೆ. ಈ ಹಿಂದೆ, ಬೆಂಗಳೂರಿನಲ್ಲಿ ಡೆಲಿವರಿ ಬಾಯ್ಸ್​ಗಳನ್ನು ರಾಹುಲ್​ ಗಾಂಧಿ ಭೇಟಿಯಾಗಿದ್ದರು. ಅಲ್ಲದೇ, ನಿತ್ಯದ ಸವಾಲುಗಳನ್ನು ಅರಿತುಕೊಳ್ಳಲು ಸ್ಕೂಟರ್‌ನಲ್ಲಿ ಪ್ರಯಾಣಿಸಿದ್ದರು. ಇದಾದ ಬಳಿಕ ದೆಹಲಿಯ ಆಜಾದ್‌ಪುರ ಮಂಡಿಗೂ ರಾಹುಲ್​ ಭೇಟಿ ನೀಡಿದ್ದರು. ಅಲ್ಲಿ ವ್ಯಾಪಾರಿಗಳು ಮತ್ತು ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದರು. ಟ್ರಕ್ ಚಾಲಕರು ಹಾಗೂ ರೈತರ ಸಮಸ್ಯೆಗಳ ಆಲಿಸಲು ಅವರನ್ನೂ ರಾಹುಲ್​ ಗಾಂಧಿ ಭೇಟಿ ಮಾಡಿದ್ದರು.

ಇದನ್ನೂ ಓದಿ:ಟ್ರಕ್‌ನಲ್ಲಿ ಪ್ರಯಾಣಿಸಿ ಚಾಲಕರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ: ವಿಡಿಯೋ ವೈರಲ್​

ABOUT THE AUTHOR

...view details