ಕರ್ನಾಟಕ

karnataka

Drugs case: ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಪೊಲೀಸ್ ವಶಕ್ಕೆ

By ETV Bharat Karnataka Team

Published : Sep 28, 2023, 10:50 AM IST

Updated : Sep 28, 2023, 12:58 PM IST

Drugs case: 2015ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೋಲೀಸರು ಭೋಲಾತ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್​ ಮುಖಂಡರು ಇದನ್ನು ಖಂಡಿಸಿದ್ದಾರೆ.

ಸುಖಪಾಲ್ ಸಿಂಗ್ ಖೈರಾ
ಸುಖಪಾಲ್ ಸಿಂಗ್ ಖೈರಾ

ಚಂಡೀಗಢ:ಇಂದು ಬೆಳ್ಳಂಬೆಳಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪಂಜಾಬ್ ಪೊಲೀಸರು, 2015ರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಖೈರಾ, ಜಾಲತಾಣದಲ್ಲಿ ಲೈವ್​ಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದರು. ವಾರಂಟ್ ತೋರಿಸುವಂತೆ ಕೇಳಿದ ಖೈರಾ, ತನ್ನನ್ನು ಕರೆದುಕೊಂಡು ಹೋಗಲು ಕಾರಣವೇನು ಅಂತ ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇಂದು ಬೆಳಗ್ಗೆ ತಮ್ಮ ಚಂಡೀಗಢ ನಿವಾಸದ ಮೇಲೆ ಹಠಾತ್ ದಾಳಿ ನಡೆಸಿದ ಪೊಲೀಸರು, ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಶಾಸಕರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ವಶಕ್ಕೆ ಪಡೆಯುವ ವೇಳೆ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಉತ್ತರಿಸಿ, ಫಜಿಲ್ಕಾದಲ್ಲಿರುವ ಜಲಾಲಾಬಾದ್‌ಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದಾರೆ.

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಕಾಯ್ದೆಯಡಿ ಖೈರಾ ವಿರುದ್ಧ ದಾಖಲಾಗಿರುವ 2015ರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಜಲಾಲಾಬಾದ್ ಪೊಲೀಸರು ಕಾರ್ಯಾಚರಣೆ ಕೈಗೊಂಡು, ಶಾಸಕರನ್ನು ವಶಕ್ಕೆ ಪಡೆದಿದ್ದಾರೆ.

ಇವರ ಬಂಧನ ಖಂಡಿಸಿರುವ ಕಾಂಗ್ರೆಸ್ ಶಾಸಕರು, ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಪ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ನಕಲಿ ಪ್ರಕರಣದಲ್ಲಿ ಬಂಧಿಸಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ "ಜಂಗಲ್ ರಾಜ್" ಚಾಲ್ತಿಯಲ್ಲಿದೆ ಎಂದು ಆರೋಪ ಮಾಡಿದ್ದಾರೆ.

ಹಳೆ ಪ್ರಕರಣದಲ್ಲಿ ಬಂಧನ:ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಈ ಹಿಂದೆಯೂ ವಿವಾದಗಳಲ್ಲಿ ಸಿಲುಕಿದ್ದರು. ಇದಕ್ಕೂ ಮುನ್ನ 2015ರಲ್ಲೂ ಅವರ ವಿರುದ್ಧ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಕಾಯ್ದೆಯಡಿ ಪ್ರಕರಣವೊಂದು ದಾಖಲಾಗಿತ್ತು. ಫಾಜಿಲ್ಕಾ ನ್ಯಾಯಾಲಯವೂ ಅವರಿಗೆ ಸಮನ್ಸ್ ಕೂಡ ಜಾರಿ ಮಾಡಿತ್ತು. ಆದರೆ, ಆ ಸಮಯದಲ್ಲಿ ಖೈರಾ ಅವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿತ್ತು. ಅಂದು ಕಳ್ಳಸಾಗಣೆದಾರರಿಂದ 2 ಕೆಜಿ ಹೆರಾಯಿನ್, 24 ಚಿನ್ನದ ಬಿಸ್ಕತ್​, ಎರಡು ಪಾಕಿಸ್ತಾನಿ ಸಿಮ್ ಕಾರ್ಡ್‌ಗಳು ಮತ್ತು ಒಂದು ಕಂಟ್ರಿ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ರಾಜಕೀಯದ ಆರಂಭದ ದಿನಗಳಲ್ಲಿ ಸುಖಪಾಲ್ ಸಿಂಗ್ ಖೈರಾ ಆಮ್ ಆದ್ಮಿ ಪಕ್ಷದಲ್ಲಿದ್ದರು. 2018ರಲ್ಲಿ ಬಂಡಾಯವೆದ್ದ ಖೈರಾ, 2019 ರಲ್ಲಿ ಎಎಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಜನವರಿ 2019 ರಲ್ಲಿ ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆದಿದ್ದಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕೂಡ ಸಾಧಿಸಿದರು.

ಇದನ್ನೂ ಓದಿ:ಪಾಕ್ ವ್ಯಕ್ತಿಯ ಬಂಧನ ಪ್ರಕರಣಕ್ಕೆ ಟ್ವಿಸ್ಟ್: ​ಅಳಿಯನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಮಾವ!

Last Updated : Sep 28, 2023, 12:58 PM IST

ABOUT THE AUTHOR

...view details