ಕರ್ನಾಟಕ

karnataka

By

Published : Jul 30, 2022, 12:29 PM IST

Updated : Jul 30, 2022, 4:02 PM IST

ETV Bharat / bharat

ಕೊಳಕು ಬೆಡ್​ ಮೇಲೆ ಮಲಗಿಸಿದ ಆರೋಗ್ಯ ಸಚಿವ: ಹುದ್ದೆಗೆ ರಾಜೀನಾಮೆ ನೀಡಿದ ವೈದ್ಯಕೀಯ ವಿವಿ ಕುಲಪತಿ

ಕೆಲವೊಮ್ಮೆ ರಾಜಕಾರಣಿಗಳ ಅತಿಯಾದ ಉತ್ಸಾಹ ಅಧಿಕಾರಿಗಳನ್ನು ಇನ್ನಿಲ್ಲದ ಪೇಚಿಗೆ ಸಿಲುಕಿಸುತ್ತದೆ ಎಂಬುದಕ್ಕೆ ಪಂಜಾಬ್​ ಘಟನೆ ಉದಾಹರಣೆ. ಕೊಳಕು ಬೆಡ್​ ಮೇಲೆ ಮಲಗಿಸಿದ್ದಕ್ಕೆ ವೈದ್ಯಕೀಯ ವಿವಿ ಕುಲಪತಿ ರಾಜೀನಾಮೆ ನೀಡಿದ್ದಾರೆ.

punjab-medical-university-vice-chancellor-resign
ಹುದ್ದೆಗೆ ರಾಜೀನಾಮೆ ನೀಡಿದ ವೈದ್ಯಕೀಯ ವಿವಿ ಕುಲಪತಿ

ಫರೀದ್​ಕೋಟ್(ಪಂಜಾಬ್​):ರೋಗಿಗಳು ಮಲಗುವ ಕೊಳಕಾಗಿದ್ದ ಬೆಡ್​ ಮೇಲೆ ತಮ್ಮನ್ನು ಪಂಜಾಬ್​ ಆರೋಗ್ಯ ಸಚಿವರು ಮಲಗಿಸಿದ್ದಕ್ಕೆ ಸಿಟ್ಟಾದ ಬಾಬಾ ಫರೀದ್​​ ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ.ರಾಜ್​ ಬಹದ್ದೂರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆರೋಗ್ಯ ಸಚಿವರ ವರ್ತನೆಯಿಂದ ಬೇಸತ್ತು ತಾವು ಈ ರೀತಿ ಮಾಡಿದ್ದಾಗಿ ಅವರು ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ.

ಏನಾಯ್ತು?:ಪಂಜಾಬ್​ ಆರೋಗ್ಯ ಸಚಿವ ಚೇತನ್​ ಸಿಂಗ್​ ಅವರು ಬಾಬಾ ಫರೀದ್ ವೈದ್ಯಕೀಯ ವಿಶ್ವವಿದ್ಯಾಲಯದ ಗುರು ಗೋವಿಂದ್ ಸಿಂಗ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ, ಚರ್ಮ ರೋಗದ ವಾರ್ಡ್​ನಲ್ಲಿನ ಅವ್ಯವಸ್ಥೆ ಕಂಡು ಕೆಂಡವಾದರು. ವಾರ್ಡ್​ನ ಬೆಡ್​ಗಳ ಅಸ್ವಚ್ಚತೆಯ ಬಗ್ಗೆ ಕುಲಪತಿಯ ಬಳಿ ಪ್ರಶ್ನಿಸಿದ್ದಾರೆ.

ಇದಕ್ಕೆ ಕುಲಪತಿಗಳು, ಅನುದಾನದ ಕೊರತೆಯಿಂದಾಗಿ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಹೀಗಾಗಿ ಬೆಡ್​ಗಳು ವ್ಯವಸ್ಥಿತವಾಗಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಇದರಿಂದ ಮತ್ತೂ ಕೆರಳಿದ ಆರೋಗ್ಯ ಸಚಿವ, ಇದು ಚರ್ಮ ರೋಗದ ವಿಭಾಗ. ಇಲ್ಲಿ ಬಳಸುವ ಬೆಡ್​ಗಳು ಎಷ್ಟು ಸ್ವಚ್ಛವಾಗಿಡಬೇಕು ಎಂಬುದೇ ಗೊತ್ತಿಲ್ಲವೇ?. ನೀವು ಆ ಬೆಡ್​ ಮೇಲೆ ಮಲಗಿ ಗೊತ್ತಾಗುತ್ತದೆ ಎಂದು ಹೇಳಿದರು.

ಅಲ್ಲದೇ, ಆ ಕೊಳಕು ಬೆಡ್​ ಮೇಲೆ ಕುಲಪತಿಯನ್ನು ಒತ್ತಾಯಪೂರ್ವಕವಾಗಿ ಮಲಗುವಂತೆ ಸೂಚಿಸಿದರು. ಕುಲಪತಿ ರಾಜ್​ ಬಹದ್ದೂರ್​ ಮಲಗಿದರು. ಇದರಿಂದ ಅವಮಾನಿತರಾದ ಅವರು, ನನ್ನ ಜೀವನದಲ್ಲಿ ಈ ರೀತಿಯ ಘಟನೆಯನ್ನು ಎದುರಿಸಿಲ್ಲ. ಆರೋಗ್ಯ ಸಚಿವರ ವರ್ತನೆ ನನ್ನನ್ನು ಘಾಸಿಗೊಳಿಸಿದೆ. ಹೀಗಾಗಿ ತಾವು ಕುಲಪತಿ ಹುದ್ದೆಯಿಂದ ಹಿಂದೆ ಸರಿಯುವುದಾಗಿ ಮುಖ್ಯಮಂತ್ರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ಸಚಿವರ ವಿರುದ್ಧ ಪ್ರತಿಭಟನೆ:ಬಾಬಾ ಫರೀದ್ ವೈದ್ಯಕೀಯ ವಿವಿ ಕುಲಪತಿಯನ್ನು ಕೊಳಕು ಹಾಸಿಗೆಯ ಮೇಲೆ ಮಲಗಿಸಿದ ಆರೋಗ್ಯ ಸಚಿವ ಚೇತನ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಚಿವರ ನಡೆಯನ್ನು ಖಂಡಿಸಿ ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೀವ್ ದೇವಗನ್ ಮತ್ತು ಗುರುನಾನಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಕೆ.ಡಿ.ಸಿಂಗ್ ಅವರೂ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.

ಅಧಿವೇಶನದಲ್ಲಿ ವಿಷಯ ಪ್ರಸ್ತಾಪ:ಕುಲಪತಿಗಳ ಜೊತೆ ಸಚಿವರು ನಡೆದುಕೊಂಡ ರೀತಿಯ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಶಾಸಕರೊಬ್ಬರು ಈ ವಿಷಯವನ್ನು ಸದನದ ಗಮನಕ್ಕೆ ತಂದಿದ್ದಾರೆ.

ಓದಿ:ಮಗುವಿನ ಮೇಲೆ ಅತ್ಯಾಚಾರ ಯತ್ನ: ಆರೋಪಿಯನ್ನು ಹೊಡೆದು ಕೊಂದ ಕುಟುಂಬಸ್ಥರು

Last Updated : Jul 30, 2022, 4:02 PM IST

ABOUT THE AUTHOR

...view details