ಕರ್ನಾಟಕ

karnataka

ETV Bharat / bharat

ಬಾಲ ಕಾರ್ಮಿಕನಿಗೆ ಅಸಹಜ ಲೈಂಗಿಕ ಕಿರುಕುಳ.. ಚಿತ್ರಹಿಂಸೆ ನೀಡಿದ್ದ ಪತ್ನಿ ಅರೆಸ್ಟ್​​, ಪತಿ ಪರಾರಿ! - ಬಲವಂತದ ಬಾಲ ಕಾರ್ಮಿಕ ಕೆಲಸ

ಬಾಲಕನನ್ನು ಬಲವಂತವಾಗಿ ಬಾಲ ಕಾರ್ಮಿಕನನ್ನಾಗಿ ಬಳಸಿಕೊಂಡಿರುವ ಆರೋಪದ ಮೇಲೆ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ. ಪತ್ನಿ ಪೊಲೀಸರ ಕೈಗೆ ಸಿಕ್ಕಿದ್ದರೆ, ಪತಿ ಪರಾರಿಯಾಗಿದ್ದಾನೆ.

protection of boy in Jaipur
ಜೈಪುರದಲ್ಲಿ ಬಾಲ ಕಾರ್ಮಿಕನ ರಕ್ಷಣೆ

By

Published : Mar 25, 2022, 7:53 AM IST

ಜೈಪುರ (ರಾಜಸ್ಥಾನ): ಜೈಪುರದಲ್ಲಿ 12 ವರ್ಷದ ಬಾಲಕನನ್ನು ಬಲವಂತವಾಗಿ ಬಾಲ ಕಾರ್ಮಿಕನನ್ನಾಗಿ ಬಳಸಿಕೊಂಡಿರುವ ಆರೋಪದ ಮೇಲೆ ದಂಪತಿ ವಿರುದ್ಧ ಪ್ರಕರಣ ದಾಖಲಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಶಾಸ್ತ್ರಿನಗರ ಠಾಣೆಯ ಎಸ್​ಹೆಚ್​ಒ (ಸ್ಟೇಶನ್​ ಹೌಸ್ ಆಫಿಸರ್​) ದಿಲೀಪ್ ಸಿಂಗ್ ಈ ವಿಷಯ ತಿಳಿಸಿದ್ದಾರೆ. ಅಲ್ಲದೇ ಬಂಧಿತ ಮಹಿಳೆಯ ಪತಿ ವಿರುದ್ಧ ಬಾಲಕನ ಮೇಲೆ ಅಸಹಜ ಲೈಂಗಿಕ ಕ್ರಿಯೆ ಎಸಗಿರುವ ಆರೋಪ ಕೇಳಿ ಬಂದಿದೆ.

ಪ್ರಕರಣ ಸಂಬಂಧ ಪತ್ನಿಯನ್ನು ಬಂಧಿಸಲಾಗಿದ್ದು, ಪತಿ ತಲೆಮರೆಸಿಕೊಂಡಿದ್ದಾನೆ. 12 ವರ್ಷದ ಬಾಲಕ ಇದೀಗ ಎನ್​ಜಿಒ ರಕ್ಷಣೆಯಲ್ಲಿದ್ದಾನೆ. ಆರೋಪಿಗಳನ್ನು ಮೊಹಮ್ಮದ್ ರಿಯಾಜ್ ಮತ್ತು ರೂಹಿ ಪರ್ವೀನ್ ಎಂದು ಗುರುತಿಸಲಾಗಿದೆ.

ಬಾಲಕನಿಗೆ ಕಿರುಕುಳ: ಏಳು ತಿಂಗಳ ಹಿಂದೆ ಈ ದಂಪತಿ ಬಾಲಕನನ್ನು ಬಿಹಾರದ ದರ್ಬಂಗಾ ಜಿಲ್ಲೆಯಿಂದ ಬಳೆ ತಯಾರಿಕೆ ಕೆಲಸಕ್ಕಾಗಿ ಜೈಪುರಕ್ಕೆ ಕರೆತಂದಿದ್ದರು. ಬಲವಂತವಾಗಿ ಆತನಿಂದ ಕೆಲಸ ಕೂಡಾ ಮಾಡಿಸಿಕೊಂಡಿದ್ದರು. ಮನೆಗೆ ಬೀಗ ಹಾಕಿ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ. ಬಾಲಕನನ್ನು ಮನೆಯಿಂದ ಹೊರಗೆ ಬರಲು ಬಿಡದೇ, ಆತನ ಮೇಲೆ ನಿರಂತರ ನಿಗಾ ಇರಿಸಿದ್ದರಂತೆ. ಕೆಲಸ ಕಡಿಮೆಯಾದರೆ ದಂಪತಿಯು ಬಾಲಕನಿಗೆ ಹೊಡೆಯುತ್ತಿದ್ದರು, ಚಿತ್ರಹಿಂಸೆ ಕೊಡುತ್ತಿದ್ದರು. ಅಲ್ಲದೇ ಬಾಲಕ ಮನೆಯಿಂದ ಹೊರಹೋಗದಂತೆ ಆರೋಪಿ ಮೊಹಮ್ಮದ್ ರಿಯಾಜ್, ಬಾಲಕನ ಕಾಲಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ ಎಂದು ಬಾಲಕನನ್ನು ರಕ್ಷಿಸಿರುವ ಮಕ್ಕಳ ಸಹಾಯವಾಣಿಯ ಸದಸ್ಯರಾದ ಸುಮನ್ ಸಿಂಗ್ ಹೇಳಿದ್ದಾರೆ.

ಬಾಲಕನ ರಕ್ಷಣೆ: ಹುಡುಗ ಹೇಗಾದರೂ ಇಲ್ಲಿಂದ ತಪ್ಪಿಸಿಕೊಂಡುಹೋಗಬೇಕೆಂದು ಮನೆಯ ಛಾವಣಿ ಮೇಲಿಂದ ಪಕ್ಕದ ಮನೆಗೆ ಜಿದಿದ್ದಾನೆ. ನಂತರ ತನ್ನ ಪರಿಸ್ಥಿತಿಯನ್ನು ಅವರೊಂದಿಗೆ ಹಂಚಿಕೊಂಡಿದ್ದು, ತನ್ನನ್ನು ರಕ್ಷಿಸುವಂತೆ ನೆರೆ ಮನೆಯವರಲ್ಲಿ ಮೊರೆ ಇಟ್ಟಿದ್ದಾನೆ. ಆ ಮನೆಯವರು ಮಕ್ಕಳ ಸಹಾಯವಾಣಿಯನ್ನು ಸಂಪರ್ಕಿಸಿದ್ದಾರೆ. ಇದಕ್ಕೆ ತಕ್ಷಣ ಸ್ಪಂದಿಸಿ ಮಕ್ಕಳ ಸಹಯವಾಣಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾಲಕನನ್ನು ರಕ್ಷಿಸಿದ್ದಾರೆ ಎಂದು ಎಸ್​ಹೆಚ್​ಒ ದಿಲೀಪ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ:ಓದಿನಲ್ಲಿ ರಾಜಕಾರಣಿ ಮಗಳಿಗಿಂತ ಬುದ್ಧಿವಂತೆ.. ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣವಾಯ್ತೇ ರಾಜಕೀಯ!?

ಬಾಲಕನ ಗಂಟಲಿನ ಮೇಲೆ, ದೇಹದ ಕೆಲ ಭಾಗಗಳಲ್ಲಿ ಗಾಯದ ಗುರುತುಗಳಿವೆ ಎಂದು ಮಕ್ಕಳ ಸಹಾಯವಾಣಿಯ ಸಲಹೆಗಾರ್ತಿ ಶಾಂತಿ ಬರ್ವಾಲ್ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ. ಸಮಿತಿಯ ನಿರ್ದೇಶನದ ಮೇರೆಗೆ ಬಾಲಕನ್ನು ಆಶ್ರಯಧಾಮಕ್ಕೆ ಕಳುಹಿಸಲಾಗಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

ಆರೋಪಿ ದಂಪತಿ ವಿರುದ್ಧ ಬಾಲಾಪರಾಧ ನ್ಯಾಯ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಮತ್ತು ಭಾರತೀಯ ದಂಡ ಸಂಹಿತೆಯ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details