ನವದೆಹಲಿ :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕೈಗೊಂಡಿರುವ ಅತ್ಯಂತ ಮಹತ್ವದ ಸಾಹಸಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ದೇಶ ಮಾತ್ರವಲ್ಲದೇ ಜಗತ್ತಿನಾದ್ಯಂತ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲೆಂದು ಪ್ರಪಂಚಾದ್ಯಂತ ವಿವಿಧ ಧಾರ್ಮಿಕ ಸಮುದಾಯಗಳಿಂದ ಹೋಮ, ಹವನ, ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ.
ಚಂದ್ರಯಾನ 3 ಮಿಷನ್ ಯಶಸ್ಸಿಯಾಗಲಿ ಎಂದು ಭಾರತಾದ್ಯಂತ ವಿವಿಧ ಧಾರ್ಮಿಕ ಸಮಾರಂಭಗಳನ್ನು ನಡೆಸಲಾಗುತ್ತಿದೆ. ಋಷಿಕೇಶದ ಪರಮಾರ್ಥ ನಿಕೇತನ ಘಾಟ್ನಲ್ಲಿ ಕೈಯಲ್ಲಿ ತ್ರಿವರ್ಣ ಧ್ವಜದೊಂದಿಗೆ ಗಂಗಾ ಆರತಿ ಮಾಡಲಾಯಿತು. ಆರತಿಗೂ ಮುನ್ನ ಘಾಟ್ನಲ್ಲಿ ಚಂದ್ರಯಾನ 3 ಯಶಸ್ಸಿಗೆ ಭಕ್ತರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿ ಚಿದಾನಂದ ಮುನಿ, "ವೇದದಿಂದ ಹಿಡಿದು ವಿಜ್ಞಾನದವರೆಗೆ ಜಗತ್ತು ನಮ್ಮ ದೇಶವನ್ನು ಒಪ್ಪಿಕೊಳ್ಳುತ್ತಿದ್ದು, ಭಾರತವು ದಕ್ಷಿಣ ಧ್ರುವದಲ್ಲಿ ತನ್ನ ಧ್ವಜವನ್ನು ಹಾರಿಸಲಿದೆ ಎಂಬ ಸಂಪೂರ್ಣ ನಂಬಿಕೆ ಇದೆ" ಎಂದು ಹೇಳಿದರು.
ಇನ್ನು ಗಂಗಾನದಿ ದಡದಲ್ಲಿ ಸಹ ಇಸ್ರೋದ ಸಾಧನೆ ಫಲ ನೀಡಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನೆರೆದಂತಹ ಭಕ್ತರು ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು. ಜೊತೆಗೆ, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನೂ ಸ್ಮರಿಸಲಾಯಿತು. ಭುವನೇಶ್ವರ, ವಾರಣಾಸಿ, ಪ್ರಯಾಗ್ರಾಜ್ನಲ್ಲಿ ನೂರಾರು ಮಂದಿ ಹೋಮ ಹವನ ನಡೆಸುತ್ತಿದ್ದು, ಚಂದ್ರಯಾನ 3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲೆಂದು ಪ್ರಾರ್ಥಿಸಲಾಯಿತು.