ನವದೆಹಲಿ: ಕಾಂಗ್ರೆಸ್ ಸೇರುವ ಆಫರ್ ತಿರಸ್ಕರಿಸಿರುವ, 'ಚುನಾವಣಾ ಚಾಣಕ್ಯ' ಎಂದೇ ಖ್ಯಾತಿ ಗಳಿಸಿರುವ ಪ್ರಶಾಂತ್ ಕಿಶೋರ್ ಇದೀಗ ಸಕ್ರಿಯ ಚುನಾವಣಾ ರಾಜಕೀಯಕ್ಕೆ ಬರುವ ಕುರಿತಾಗಿ ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ. ಕೈ ಪಕ್ಷದೊಂದಿಗಿನ ಇತ್ತೀಚೆಗಿನ ಬೆಳವಣಿಗೆಯ ನಂತರದಲ್ಲಿ ಇದೇ ಮೊದಲ ಬಾರಿಗೆ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿರುವಂತೆ ಕಾಣುತ್ತಿದೆ.
ಟ್ವೀಟ್ನಲ್ಲೇನಿದೆ?: 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರ್ಥಗರ್ಭಿತ ಪಾಲ್ಗೊಳ್ಳುವಿಕೆಗೆ ನಾನು ತುಡಿತ ಹೊಂದಿದ್ದೇನೆ. ಈ ಮೂಲಕ ಜನಪರ ನೀತಿಯನ್ನು ಅನುಷ್ಠಾನಕ್ಕೆ ತರುವ ಯೋಚನೆ ಇದೆ. ಸದ್ಯ ನಾನು ಪುಟ ತಿರುವಿ ಹಾಕುತ್ತಿದ್ದು, ನಿಜವಾದ ಪ್ರಭುಗಳ ಬಳಿ ತೆರಳುವ ಸಮಯ ಬಂದಿದೆ. ಬಿಹಾರದಿಂದ ಇದು ಆರಂಭ'.