ಕರ್ನಾಟಕ

karnataka

By

Published : Jun 5, 2021, 9:05 AM IST

ETV Bharat / bharat

ಕೋವಿಡ್​ನಿಂದ ಗುಣಮುಖರಾದ ಮೇಲೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ದೆಹಲಿ ಜನತೆ!

ದೆಹಲಿಯ ಅನೇಕ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವು ಕೋವಿಡೋತ್ತರ ಸಮಸ್ಯೆಯಿಂದ ಬಂದ ರೋಗಿಗಳಿಂದ ತುಂಬಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Post-Covid Complications Rise In Delhi
ಕೋವಿಡ್​ನಿಂದ ಗುಣಮುಖರಾದ ಮೇಲೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ದೆಹಲಿ ಜನತೆ

ನವದೆಹಲಿ: ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಯಶಸ್ವಿಯಾಗಿ ಲಾಕ್​ಡೌನ್​ ತೆರವುಗೊಳಿಸಿದ ರಾಷ್ಟ್ರ ರಾಜಧಾನಿ ದೆಹಲಿಗೆ ಈಗ ಮತ್ತೊಂದು ಗಂಭೀರವಾದ ಸಮಸ್ಯೆ ಎದುರಾಗಿದೆ. ಕೋವಿಡ್​ನಿಂದ ಗುಣಮುಖರಾದ ಬಳಿಕ ಜನರು ಅನಾರೋಗ್ಯಕ್ಕೆ ತುತ್ತಾಗಿ ಅಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಕೊರೊನಾ ಮೊದಲನೇ ಅಲೆಯ ಸಂದರ್ಭ ವೈರಸ್​ನಿಂದ ಚೇತರಿಸಿಕೊಂಡಿದ್ದವರಿಗೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆದರೆ ಅದು ಸಣ್ಣ ಪ್ರಮಾಣದಲ್ಲಿತ್ತು. ಸೌಮ್ಯ ಜ್ವರ, ಸುಸ್ತು-ಆಯಾಸದಂತಹ ಲಕ್ಷಣಗಳು ಕಂಡು ಬರುತ್ತಿತ್ತು. ಅದರಲ್ಲಿಯೂ 60 ವರ್ಷ ಮೇಲ್ಪಟ್ಟವರು ಅಥವಾ ಶ್ವಾಸಕೋಶ ಸಮಸ್ಯೆ ಇದ್ದವರಿಗೆ ಹೀಗೆ ಆಗುತ್ತಿತ್ತು.

ಆದರೆ ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾಗಿ ಗುಣಮುಖರಾದವರಲ್ಲಿ, ಅದರಲ್ಲಿಯೂ ಮಧ್ಯ ವಯಸ್ಸಿನ ಮತ್ತು ಯುವಕರಲ್ಲಿ ಕೆಲ ವಾರಗಳ ಬಳಿಕ ದೇಹದಲ್ಲಿ ಆಮ್ಲಜನಕ ಕಡಿಮೆಯಾಗುತ್ತಿದ್ದು, ಉಸಿರಾಟ ಸಮಸ್ಯೆ ಎದುರಾಗುತ್ತಿದೆ. ತೀವ್ರ ಜ್ವರ ಕಾಣಿಸಿಕೊಳ್ಳುತ್ತಿದೆ. ಅನೇಕ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ ಇಂತಹ 25-30 ರೋಗಿಗಳು ಬರುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಬಲವಂತವಾಗಿ ಸೊಸೆಯನ್ನ ಅಪ್ಪಿಕೊಂಡು ಆಕೆಗೂ ವೈರಸ್​ ಅಂಟಿಸಿದ ಕೋವಿಡ್​ ಸೋಂಕಿತ ಅತ್ತೆ!

ನಮ್ಮ ಹೊರ ರೋಗಿಗಳ ವಿಭಾಗ (ಒಪಿಡಿ)ವು ಶೇ. 70-80ರಷ್ಟು ಕೋವಿಡೋತ್ತರ ಸಮಸ್ಯೆಯಿಂದ ಬಂದ ರೋಗಿಗಳಿಂದ ತುಂಬಿ ಹೋಗಿದೆ ಎಂದು ಸಾಕೆಟ್‌ನ ಮ್ಯಾಕ್ಸ್ ಆಸ್ಪತ್ರೆ ಹಾಗೂ ಇಂದ್ರಪ್ರಸ್ಥ ಅಪೊಲೋ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ದಿನ 3-4 ರೋಗಿಗಳನ್ನು ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ದಾಖಲಿಸಲಾಗುತ್ತಿದೆ ಎಂದು ಓಖ್ಲಾದ ಫೋರ್ಟಿಸ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ಕಠಿಣ ಲಾಕ್​ಡೌನ್​ ವಿಧಿಸಿ ರಾಷ್ಟ್ರ ರಾಜಧಾನಿಯಲ್ಲಿನ ಭೀಕರ ಕೋವಿಡ್​ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಯಶಸ್ವಿಯಾಗಿದ್ದು, ಮೇ 31ರಿಂದ ಹಂತ ಹಂತವಾಗಿ ಅನ್​​ಲಾಕ್ ಪ್ರಕ್ರಿಯೆ ಆರಂಭಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೇವಲ 500 ಸೋಂಕಿತರು ಪತ್ತೆಯಾಗಿದ್ದು, ಪಾಸಿಟಿವಿಟಿ ರೇಟ್​ ಶೇ. 0.68ಕ್ಕೆ ಇಳಿಕೆಯಾಗಿದೆ.

ABOUT THE AUTHOR

...view details