ಕರ್ನಾಟಕ

karnataka

ETV Bharat / bharat

ಪ್ರತಿಪಕ್ಷಗಳಿಗೆ ರಾಷ್ಟ್ರಕ್ಕಿಂತ, ರಾಜಕೀಯ ಹಿತಾಸಕ್ತಿಯೇ ಹೆಚ್ಚು: ಪ್ರಧಾನಿ ಮೋದಿ - PM modi in uttara pradesh

ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

pm-narendra-modi
ಪ್ರಧಾನಿ ಮೋದಿ ಟೀಕೆ

By

Published : Jul 26, 2022, 7:36 AM IST

ಕಾನ್ಪುರ(ಯು.ಪಿ):ತಮ್ಮ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕಾಗಿ ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ವಿನಾಕಾರಣ ಅಡ್ಡಿ ಉಂಟು ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ಅಲ್ಲದೇ, ಪ್ರತಿಪಕ್ಷಗಳಿಗೆ ಸಮಾಜದ ಹಿತಾಸಕ್ತಿಗಿಂತ ರಾಜಕೀಯ ಹಪಾಹಪಿಯೇ ಹೆಚ್ಚಾಗಿದೆ ಎಂದು ಟೀಕಿಸಿದರು.

ಸಮಾಜವಾದಿ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಹರ್ಮೋಹನ್ ಅವರ 10ನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ವಿರೋಧ ಪಕ್ಷಗಳು ತಾವು ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರಗಳನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಅವುಗಳನ್ನು ದಿಟ್ಟತನದಿಂದ ಅನುಷ್ಠಾನ ಮಾಡುತ್ತಿದೆ. ಇದಕ್ಕೂ ಪ್ರತಿಪಕ್ಷಗಳು ತೊಡರುಗಾಲು ಹಾಕುತ್ತಿರುವುದು ನೋವಿನ ಸಂಗತಿ ಎಂದರು.

ರಾಜಕಾರಣಕ್ಕಿಂತ ರಾಷ್ಟ್ರ ಮೊದಲು:ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ, ಪಕ್ಷ ರಾಜಕಾರಣಕ್ಕಿಂತ ರಾಷ್ಟ್ರದ ಅಭ್ಯುದಯ ಮುಖ್ಯ ಎಂಬುದನ್ನು ಅರಿಯಬೇಕು. ನೀವು(ಪ್ರತಿಪಕ್ಷಗಳು) ಕೈಗೊಳ್ಳದ ನಿರ್ಧಾರಗಳನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇದನ್ನು ವಿರೋಧಿಸಿ ಜನರ ದೃಷ್ಟಿಗೆ ಬೀಳಬೇಡಿ. ಇದನ್ನು ಜನರು ಇಷ್ಟಪಡುವುದಿಲ್ಲ ಎಂದು ಸಲಹೆ ನೀಡಿದರು.

ಪ್ರಜಾಪ್ರಭುತ್ವದಿಂದಾಗಿ ಪಕ್ಷಗಳು ಅಸ್ತಿತ್ವದಲ್ಲಿವೆ. ದೇಶದಿಂದಾಗಿ ಪ್ರಜಾಪ್ರಭುತ್ವವಿದೆ. ಕಾಂಗ್ರೆಸ್​ ಹೊರತುಪಡಿಸಿ ಎಲ್ಲಾ ರಾಜಕೀಯ ಪಕ್ಷಗಳು ಈ ಕಲ್ಪನೆಯಡಿ ಕೆಲಸ ಮಾಡುತ್ತಿವೆ ಎಂದು ಕಾಂಗ್ರೆಸ್​ಗೆ ಚಾಟಿ ಬೀಸಿದರು.

ಮುರ್ಮು ಅವರೇ ಸಾಕ್ಷಿ:ಸಾಮಾಜಿಕ ನ್ಯಾಯದ ಕುರಿತು ಮಾತನಾಡಿದ ಮೋದಿ, ಸಮಾಜದ ಪ್ರತಿಯೊಂದು ವರ್ಗಕ್ಕೂ ಸಮಾನ ಅವಕಾಶಗಳು ಸಿಗಬೇಕು. ಯಾರೂ ಮೂಲಸೌಕರ್ಯಗಳಿಂದ ವಂಚಿತರಾಗಬಾರದು. ದಲಿತರು, ಹಿಂದುಳಿದವರು, ಆದಿವಾಸಿಗಳು, ಮಹಿಳೆಯರು ಮತ್ತು ದಿವ್ಯಾಂಗರು ಅಭ್ಯುದಯ ಹೊಂದಿದಾಗ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ದೇಶದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದ್ರೌಪದಿ ಮುರ್ಮು ಅವರ ಬಗ್ಗೆ ಪ್ರಸ್ತಾಪಿಸಿ, ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಬುಡಕಟ್ಟು ಸಮಾಜದ ಮಹಿಳೆಯೊಬ್ಬರು ದೇಶವನ್ನು ಮುನ್ನಡೆಸಲಿದ್ದಾರೆ. ಇದು ದೇಶದ ಶಕ್ತಿಯಾಗಿದೆ. ಎಲ್ಲ ವರ್ಗಗಳಿಗೆ ಸಮಾನ ಅವಕಾಶ ಸಿಕ್ಕಲ್ಲಿ ಅದು ಪ್ರಜಾಪ್ರಭುತ್ವದ ರಾಷ್ಟ್ರವಾಗಿ ಉಳಿಯಲು ಸಾಧ್ಯ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಮಲೆನಾಡ ಕಾರ್ಗಿಲ್ ಯೋಧರು: ದೇಶಕ್ಕೆ ಸೇವೆ ಸಲ್ಲಿಸಿದ ಹೆಮ್ಮೆ ಒಂದೆಡೆ, ಆಳುವವರ ನಿರ್ಲಕ್ಷ್ಯ ಮತ್ತೊಂದೆಡೆ!

For All Latest Updates

TAGGED:

ABOUT THE AUTHOR

...view details