ಊಹಾಪೋಹಗಳಿಗೆ ಕಿವಿಗೊಡದೆ ಲಸಿಕೆ ಹಾಕಿಸಿಕೊಳ್ಳಿ: ಮನ್ ಕಿ ಬಾತ್ನಲ್ಲಿ ಮೋದಿ ಮನವಿ - PM Modi Mann Ki Baat address news
76 ನೇ ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ಕೋವಿಡ್–19 ಎರಡನೇ ಅಲೆಯ ಬಗ್ಗೆ ಮಾತನಾಡಿದರು. ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಎಲ್ಲರೂ ಊಹಾಪೋಹಗಳಿಗೆ ಕಿವಿಗೊಡದೆ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.

ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ಮನವಿ
ಮೋದಿ ಮನ್ ಕಿ ಬಾತ್ನ ಪ್ರಮುಖಾಂಶಗಳು:
- ಕೋವಿಡ್–19 ಮೊದಲ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ ಬಳಿಕ ದೇಶದ ಮನೋಬಲ ಹೆಚ್ಚಿದೆ. ಆದರೆ ಕೋವಿಡ್ನ ಅಟ್ಟಹಾಸ ದೇಶವನ್ನು ಕಂಗಾಲಾಗಿಸಿದೆ. ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಫಾರ್ಮಾ ವಲಯ, ಆಮ್ಲಜನಕ ಉತ್ಪಾದನೆಗೆ ಸಂಬಂಧಿಸಿದ ವ್ಯಕ್ತಿಗಳು ಸೇರಿದಂತೆ ಹಲವು ತಜ್ಞರೊಂದಿಗೆ ನಾನು ಮಾತುಕತೆ ನಡೆಸಿದ್ದೇನೆ. ಕೋವಿಡ್ ಹೋರಾಟದಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸಕಲ ರೀತಿಯಲ್ಲೂ ನೆರವು ನೀಡುತ್ತಿದೆ.
- ಮನ್ ಕಿ ಬಾತ್ನಲ್ಲಿ ಹಲವಾರು ವಿಭಾಗದ ತಜ್ಞರ ಜೊತೆ ಪ್ರಧಾನಿ ಚರ್ಚೆ ನಡೆಸಿದರು. ಇಂದಿನ ಚರ್ಚೆಯಲ್ಲಿ ವೈದ್ಯಕೀಯ ವಿಭಾಗದವರು, ಆಕ್ಸಿಜನ್ ತಯಾರಿಕಾ ಸಂಸ್ಥೆಗಳ ಮುಖ್ಯಸ್ಥರು ಕೂಡ ಭಾಗಿಯಾಗಿದ್ದರು. ಕರ್ನಾಟಕದ ಬೆಂಗಳೂರಿನ ನರ್ಸ್ ಒಬ್ಬರು ಸಹ ಇಂದು ಮೋದಿ ಜತೆಗಿನ ಚರ್ಚೆಯಲ್ಲಿ ಭಾಗಿಯಾಗಿದ್ದರು.
- ನಮ್ಮ ಪ್ರೀತಿಪಾತ್ರರಲ್ಲಿ ಅನೇಕರು ಕೋವಿಡ್ನಿಂದ ತೀರಿಕೊಂಡಿದ್ದಾರೆ. ಕೋವಿಡ್-19 ಎದುರು ನಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರು ಹೋರಾಟ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಸಾಂಕ್ರಾಮಿಕದ ಕುರಿತು ಅವರು ಹಲವು ರೀತಿಯ ಅನುಭವಗಳನ್ನು ಪಡೆದಿದ್ದಾರೆ. ಕಳೆದ ಮೂರು ದಿನಗಳಿಂದ ದೇಶದಲ್ಲಿ ಪ್ರತಿದಿನ 3 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ವೈದ್ಯಕೀಯ ಆಮ್ಲಜನಕದ ಪೂರೈಕೆಯಲ್ಲಿ ರಾಷ್ಟ್ರವು ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಈ ಆಕ್ಸಿಜನ್ ನಿಂದ ಹಲವು ರಾಜ್ಯಗಳಲ್ಲಿ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎಂದರು.
- ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಯಾರೂ ಸಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಜನರನ್ನು ಕೋರುತ್ತೇನೆ. 45 ವರ್ಷ ಮತ್ತು ಅದಕ್ಕಿಂತಲೂ ಮೇಲ್ಪಟ್ಟ ವಯಸ್ಸಿನ ಎಲ್ಲರೂ ಕೋವಿಡ್ ಲಸಿಕೆಯ ಲಾಭ ಪಡೆಯಿರಿ. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಅವಕಾಶ ದೊರೆಯಲಿದೆ. ಎಲ್ಲಾ ರಾಜ್ಯ ಸರ್ಕಾರಗಳಿಗೂ ಭಾರತ ಸರ್ಕಾರ ಉಚಿತ ಲಸಿಕೆ ವಿತರಣೆ ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾರ್ಪೊರೇಟ್ ವಲಯ ಕೂಡ ತಮ್ಮ ಉದ್ಯೋಗಿಗಳಿಗೆ ಲಸಿಕೆ ಹಾಕುವ ಮೂಲಕ ಲಸಿಕೆ ಅಭಿಯಾನದಲ್ಲಿ ಭಾಗಿಯಾಗಬಹುದು ಎಂದು ಹೇಳಿದರು.
- ಭಾರತದ ಉಚಿತ ಲಸಿಕೆ ಕಾರ್ಯಕ್ರಮವು ಭವಿಷ್ಯದಲ್ಲಿಯೂ ಮುಂದುವರಿಯಲಿದೆ. ಈ ಉಚಿತ ಲಸಿಕೆ ಅಭಿಯಾನ ಕಾರ್ಯಕ್ರಮದ ಪ್ರಯೋಜನಗಳನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸುವಂತೆ ರಾಜ್ಯ ಸರ್ಕಾರಗಳಿಗೆ ವಿನಂತಿಸಿದರು.
- ಕೋವಿಡ್ ನಮ್ಮ ಸಾಮರ್ಥ್ಯ ಮತ್ತು ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಕೊರೊನಾ ಬಗ್ಗೆ ಎಲ್ಲರೂ ಅಧಿಕೃತ ಮೂಲಗಳಿಂದ ಮಾತ್ರವೇ ಮಾಹಿತಿಯನ್ನು ಪಡೆಯಲು ನಾನು ವಿನಂತಿಸುತ್ತೇನೆ. ಕೊರೊನಾ ವಿರುದ್ಧದ ಹೋರಾಟಲ್ಲಿ ಆಂಬ್ಯುಲೆನ್ಸ್ ಚಾಲಕರ ಸಹಕಾರ ಅತ್ಯುನ್ನತವಾಗಿದೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದು ಮೋದಿ ತಿಳಿಸಿದರು.