ಕರ್ನಾಟಕ

karnataka

ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಸಂಸ್ಥಾಪನಾ ದಿನಕ್ಕೆ ಶುಭ ಕೋರಿದ ಪ್ರಧಾನಿ ಮೋದಿ

By ANI

Published : Nov 1, 2023, 4:49 PM IST

8 states celebrating its birthday on Nov 1: ಸಂಸ್ಥಾಪನಾ ದಿನದ ಹಿನ್ನೆಲೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಛತ್ತೀಸ್​ಗಢ, ಹರಿಯಾಣ, ಮಧ್ಯಪ್ರದೇಶ ಹಾಗೂ ಪಂಜಾಬ್​ ರಾಜ್ಯಗಳ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್​ನಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.

PM Narendra Modi
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಭಾರತದ ಎಂಟು ರಾಜ್ಯಗಳು ಇಂದು ತಮ್ಮ ರಚನೆಯಾದ ದಿನವನ್ನು ಆಚರಿಸಿಕೊಳ್ಳುತ್ತಿವೆ. ಈ ಹಿನ್ನೆಲೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಛತ್ತೀಸ್​ಗಢ, ಹರಿಯಾಣ, ಮಧ್ಯಪ್ರದೇಶ ಹಾಗೂ ಪಂಜಾಬ್​ ರಾಜ್ಯಗಳ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ಕೋರಿದ್ದಾರೆ. ಎಕ್ಸ್​ನಲ್ಲಿ ಸರಣಿ ಪೋಸ್ಟ್​ಗಳನ್ನು ಹಂಚಿಕೊಂಡಿರುವ ಮೋದಿ, ಭಾರತದ ಒಟ್ಟಾರೆ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವುದಕ್ಕಾಗಿ ರಾಜ್ಯಗಳನ್ನು ಪ್ರಧಾನಿ ಶ್ಲಾಘಿಸಿದರು.

ಪೋಸ್ಟ್​ ಒಂದರಲ್ಲಿ "ರಾಜ್ಯದ ಸಂಸ್ಥಾಪನಾ ದಿನದಂದು ಹರಿಯಾಣದ ಸಮಸ್ತ ಜನತೆಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಈ ರಾಜ್ಯ ಕೃಷಿ ಹಾಗೂ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ದೇಶಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಇಲ್ಲಿನ ಯುವಕರು ಕೂಡ ಅನ್ವೇಷಣೆಯ ಲೋಕದಲ್ಲಿ ತಮ್ಮ ಸಾಧನೆಯ ಪತಾಕೆ ಹಾರಿಸುತ್ತಿದ್ದಾರೆ. ಈ ರಾಜ್ಯ ಹೀಗೆಯೇ ಮುಂದೆಯೂ ಅಭಿವೃದ್ಧಿಯ ಪ್ರತಿ ಪ್ಯಾರಾಮೀಟರ್​ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುವ ಹಾಗಾಗಲಿ ಎಂದು ಬಯಸುತ್ತೇನೆ" ಎಂದು ಹೇಳಿದ್ದಾರೆ.

ಇನ್ನೊಂದು ಪೋಸ್ಟ್​ನಲ್ಲಿ "ರಾಜ್ಯದ ಸಂಸ್ಥಾಪನಾ ದಿನದಂದು ಮಧ್ಯಪ್ರದೇಶದ ಸಮಸ್ತ ಜನತೆಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಪ್ರತಿದಿನ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುತ್ತಿರುವ ಮಧ್ಯಪ್ರದೇಶ ಈ ಅಮೃತಕಾಲದಲ್ಲಿ ದೇಶದ ಸಂಕಲ್ಪಗಳನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ. ಈ ರಾಜ್ಯವು ಪ್ರಗತಿಯ ಪಥದಲ್ಲಿ ಮುನ್ನಡೆಯಲಿ ಎಂದು ನಾನು ಬಯಸುತ್ತೇನೆ" ಎಂದು ಹಾರೈಸಿದ್ದಾರೆ.

ಮತ್ತೊಂದು ಪ್ರತ್ಯೇಕ ಪೋಸ್ಟ್​ನಲ್ಲಿ ಪಿಎಂ ಮೋದಿ, "ಛತ್ತೀಸ್​ಗಢದ ಸಹೋದರ, ಸಹೋದರಿಯರಿಗೆ ರಾಜ್ಯ ಸಂಸ್ಥಾಪನಾ ದಿನಕ್ಕೆ ಶುಭಾಶಯಗಳು. ಇಲ್ಲಿನ ಜನರ ಉತ್ಸಾಹವೇ, ರಾಜ್ಯವನ್ನು ವಿಶೇಷವಾಗಿ ಪ್ರತಿಬಿಂಬಿಸುತ್ತದೆ. ನಮ್ಮ ಬುಡಕಟ್ಟು ಸಮುದಾಯಗಳು ಸಂಸ್ಕೃತಿ ಶ್ರೀಮಂತಗೊಳಿಸಲು ಬಹಳ ಮುಖ್ಯವಾದ ಕೊಡುಗೆ ನೀಡಿವೆ. ಈ ರಾಜ್ಯದ ವೈಭವಯುತವಾದ ಸಂಪ್ರದಾಯ ಹಾಗೂ ಸಾಂಸ್ಕೃತಿಕ ಪರಂಪರೆ ಎಲ್ಲರನ್ನೂ ಆಕರ್ಷಿಸುತ್ತದೆ. ನೈಸರ್ಗಿಕ ಹಾಗೂ ಸಾಂಸ್ಕೃತಿಕ ವೈಭವದಿಂದ ತುಂಬಿರುವ ಛತ್ತೀಸ್​ಗಢಕ್ಕೆ ಉಜ್ವಲ ಭವಿಷ್ಯವನ್ನು ನಾನು ಕೋರುತ್ತೇನೆ" ಎಂದು ಬರೆದಿದ್ದಾರೆ.

ಕೇರಳ ಹಾಗೂ ಕರ್ನಾಟಕ ರಾಜ್ಯಗಳಿಗೆ ಆಯಾ ಮಾತೃಭಾಷೆಯಲ್ಲಿ ಶುಭ ಕೋರಿದ ಪ್ರಧಾನಿ, "ಕೇರಳ ಪಿರವಿಯ ವಿಶೇಷ ದಿನಕ್ಕೆ ಶುಭಾಶಯಗಳು. ತಮ್ಮ ಶ್ರದ್ಧೆ ಮತ್ತು ಸಾಂಸ್ಕೃತಿಕ ಪರಂಪರೆಯ ಶ್ರೀಮಂತ ವಸ್ತ್ರಗಳಿಗೆ ಕೇರಳ ಹೆಸರುವಾಸಿಯಾಗಿದ್ದು, ಕೇರಳದ ಜನತೆ ದೃಢತೆ ಹಾಗೂ ಸಂಕಲ್ಪವನ್ನು ಮೈಗೂಡಿಸಿಕೊಂಡವರು. ಯಾವಾಗಲು ಯಶಸ್ಸು ಅವರದಾಗಿ, ಸಾಧನೆಗಳಿಂದ ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ" ಎಂದು ಹಾರೈಸಿದರು.

"ಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ. ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ" ಎಂದು ಕೋರಿದ್ದಾರೆ.

ತೆಲುಗಿನಲ್ಲೂ ಪೋಸ್ಟ್ ಮಾಡಿರುವ ಮೋದಿ, ಆಂಧ್ರ ಪ್ರದೇಶದ ಜನರಿಗೂ ಶುಭಾಶಗಳನ್ನು ತಿಳಿಸಿದ್ದಾರೆ. "ಕ್ರಿಯಾತ್ಮಕ ರಾಜ್ಯದ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ತಮ್ಮ ಅಸಾಧಾರಣ ಪ್ರತಿಭೆ, ಅಚಲವಾದ ಸಂಕಲ್ಪ, ದೃಢವಾದ ಪರಿಶ್ರಮದಿಂದ ಆಂಧ್ರಪ್ರದೇಶದ ಜನರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ನಿರಂತರ ಏಳಿಗೆ ಹಾಗೂ ಯಶಸ್ಸಿಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ :ರಾಜ್ಯೋತ್ಸವ: ಧಾರವಾಡದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಸಂತೋಷ್​ ಲಾಡ್

ABOUT THE AUTHOR

...view details