ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 25 ರಂದು ಸಂಜೆ 5 ಗಂಟೆಗೆ ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ 'ಬಾರಿಸು ಕನ್ನಡ ಡಿಂಡಿಮವ' ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಮಂತ್ರಿಯವರ 'ಏಕ ಭಾರತ ಶ್ರೇಷ್ಠ ಭಾರತ'ದ ಆಶಯಕ್ಕೆ ಅನುಗುಣವಾಗಿ, ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಕೊಂಡಾಡಲು 'ಬಾರಿಸು ಕನ್ನಡ ಡಿಂಡಿಮವ' ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗುತ್ತಿದೆ. ಆಜಾದಿ ಕಾ ಅಮೃತ ಮಹೋತ್ಸವದ ಆಶ್ರಯದಲ್ಲಿ ನಡೆಯುತ್ತಿರುವ ಈ ಉತ್ಸವವು ನೂರಾರು ಕಲಾವಿದರಿಗೆ ನೃತ್ಯ, ಸಂಗೀತ, ನಾಟಕ, ಕಾವ್ಯ ಇತ್ಯಾದಿಗಳ ಮೂಲಕ ಕರ್ನಾಟಕ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ಅವಕಾಶ ಒದಗಿಸುತ್ತದೆ.
ಏನಿದು ಏಕ ಭಾರತ ಶ್ರೇಷ್ಠ ಭಾರತ ಯೋಜನೆ: 2015 ರ ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 140 ನೇ ಜನ್ಮದಿನದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 'ಏಕ್ ಭಾರತ್ ಶ್ರೇಷ್ಠ ಭಾರತ್' ಯೋಜನೆ ಘೋಷಿಸಿದ್ದರು. ಈ ನವೀನ ಕಾರ್ಯಕ್ರಮದ ಮೂಲಕ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆಚರಣೆಗಳ ಜ್ಞಾನವು ರಾಜ್ಯಗಳ ನಡುವೆ ವರ್ಧಿತ ತಿಳಿವಳಿಕೆ ಮತ್ತು ಬಾಂಧವ್ಯವನ್ನು ಬೆಸೆಯಲು ಕಾರಣವಾಗುತ್ತದೆ. ಈ ವಿಶೇಷ ಕಾರ್ಯಕ್ರಮದ ಮೂಲಕ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುವುದು ಮೊದಲ ಆದ್ಯತೆ ಆಗಿದೆ.
ದೇಶದ ಏಕತೆ ಮತ್ತು ಸಮಗ್ರತೆಯ ಬಗ್ಗೆ ಪ್ರಶ್ನೆ ಎದ್ದಿರುವ ಈ ಕಾಲದಲ್ಲಿ ಕೇಂದ್ರ ಸರ್ಕಾರದ ಈ ಕಾರ್ಯಕ್ರಮ ಆಯಾಯ ರಾಜ್ಯಗಳ ಸಂಸ್ಕೃತಿ, ಭಾಷೆ, ವೇಷ - ಭೂಷಣ ಹೀಗೆ ಪ್ರತಿಯೊಂದನ್ನು ದೇಶದ ಜನತೆಗೆ ಪರಿಚಯಿಸಲಿದೆ. ಇದೇ ಸದುದ್ದೇಶದಿಂದ ಕೇಂದ್ರ ಸರ್ಕಾರ ವಿಶೇಷ ಆಸಕ್ತಿ ವಹಿಸಿ ಈ ಕಾರ್ಯಕ್ರಮ ರೂಪಿಸಿದೆ. ಪ್ರಧಾನಿಗಳ ಆಶಯದಂತೆ ನವದೆಹಲಿಯಲ್ಲಿ ಶನಿವಾರ ಅಂದರೆ 25 ರಂದು ಕರ್ನಾಟಕದ ಕಂಪು ಪಸರಿಸಲಿದೆ. ಇದಕ್ಕಾಗಿ ರಾಜ್ಯದ ಜನ ಆಸಕ್ತಿಯಿಂದ ಹಾಗೂ ಅಷ್ಟೇ ಕುತೂಹಲದಿಂದ ಕಾಯುತ್ತಿದ್ದಾರೆ.
ಇದೇ ಯೋಜನೆ ಭಾಗವಾಗಿ ರೂಪುಗೊಂಡಿದೆ ಭಾಷಾ ಸಂಗಮ ಆ್ಯಪ್:ಶಿಕ್ಷಣ ಸಚಿವಾಲಯ, MyGov ಸಹಯೋಗದೊಂದಿಗೆ ಭಾರತ ಸರ್ಕಾರವು ಆಜಾದಿ ಕಾ ಅಮೃತ್ ಮಹೋತ್ಸವದ ಅಡಿ ಭಾರತೀಯ ಭಾಷಾ ಕಲಿಕೆ ಅಪ್ಲಿಕೇಶನ್ 'ಭಾಷಾ ಸಂಗಮ' ಅನ್ನು ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್ ಬಳಕೆದಾರರಿಗೆ ಭಾರತೀಯ ಭಾಷೆಗಳೊಂದಿಗೆ ಪರಿಚಿತತೆ ನೀಡುವ ಗುರಿ ಹೊಂದಿದೆ. ಭಾರತದಾದ್ಯಂತ ಜನರು ಭಾರತದ ವಿವಿಧ ರಾಜ್ಯಗಳ ವಿವಿಧ ಭಾಷೆಗಳನ್ನು ಕಲಿಯಲು ಮತ್ತು ಅವರ ಸಂಸ್ಕೃತಿಗೆ ಹತ್ತಿರವಾಗಲು ಅನುವು ಮಾಡಿಕೊಡುವ ಮೂಲಕ ಏಕ್ ಭಾರತ್ ಶ್ರೇಷ್ಠ ಭಾರತ್ನ ಚೈತನ್ಯವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಈ ಅಪ್ಲಿಕೇಶನ್ 22 ಅಧಿಕೃತ ಭಾರತೀಯ ಭಾಷೆಗಳಲ್ಲಿ ದೈನಂದಿನ ಬಳಕೆಯ ವಾಖ್ಯೆಗಳನ್ನು ಒಳಗೊಂಡಿದೆ. ಭಾರತದ ಯಾವುದೇ ಅಧಿಕೃತ ಭಾಷೆಯಲ್ಲಿ ಜನರು ಮೂಲ ಸಂಭಾಷಣೆಯನ್ನು ಕಲಿಯಲು ಅನುವು ಮಾಡಿಕೊಡಲಿದೆ. ಅದಕ್ಕೆ ತಕ್ಕಂತೆ ವಿಭಿನ್ನ ವಿಷಯಗಳ ಮೇಲೆ ವಾಕ್ಯಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಥೀಮ್ಗಳು ಶುಭಾಶಯಗಳಿಂದ ಪ್ರಯಾಣ ಮತ್ತು ಶಾಪಿಂಗ್ಗೆ ಮೂಲ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಸರಳ ರೀತಿಯಲ್ಲಿ ಈ ಆ್ಯಪ್ನಲ್ಲಿ ಅಳವಡಿಸಲಾಗಿದೆ. ಭಾಷಾ ಸಂಗಮವು ಏಕ್ ಭಾರತ್ ಶ್ರೇಷ್ಠ ಭಾರತ್ನ ಚೈತನ್ಯವನ್ನು ಹಂಚಿಕೊಳ್ಳಲು ಮತ್ತು ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಅರಿಯಲು, ಆಚರಿಸಲು ಎಲ್ಲರಿಗೂ ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ:ಜೆಡಿಎಸ್ಗೆ ನೀಡುವ ಒಂದೊಂದು ಮತವೂ ಕಾಂಗ್ರೆಸ್ಗೆ ಹೋಗುತ್ತದೆ: ಅಮಿತ್ ಶಾ